
ಮೈಸೂರು: ದೇವೇಗೌಡ, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವಿನ ವಾಕ್ಸಮರಕ್ಕೆ ಮೇಲ್ನೋಟಕ್ಕೆ ಸರ್ಕಾರ ಪತನ ಕಾರಣ ಎಂದು ಕಂಡುಬಂದರೂ ರಾಜಕೀಯ ಗರ್ಭದಲ್ಲಿ ಬೇರೆ ವಿಷಯವೇ ಅಡಗಿರುವಂತಿದೆ. ಈ ಬಗ್ಗೆ ಹಲವು ನಾಯಕರು ಹಲವು ರೀತಿಯಲ್ಲಿ ವಾಖ್ಯಾನ ಮಾಡುತ್ತಿದ್ದಾರೆ.
ಜೆಡಿಎಸ್ ಪಕ್ಷದ ಉಸಿರು ಇರೋದೇ ಹಳೆ ಮೈಸೂರು ಪ್ರಾಂತ್ಯದಲ್ಲಿ. ಈಗ ಇಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿಸಿ, ಕಾಂಗ್ರೆಸ್ ಶಕ್ತಿ ಬಲವರ್ಧನೆಗೊಳಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹಳೆ ಮೈಸೂರು ಭಾಗದಲ್ಲಿ ಹಿಡಿತ ಹೊಂದಿರುವ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರೆ ಅವರ ವಿರೋಧಿ ಮತಗಳು ಸುಲಭವಾಗಿ ಜೆಡಿಎಸ್ ಪಾಲಾಗ್ತವೆ ಎಂಬುದು ದಳಪತಿಗಳ ಚಿಂತನೆ. ಹೀಗಾಗಿಯೇ ಸಿದ್ದರಾಮಯ್ಯ ವಿರುದ್ಧ ಅಪ್ಪ, ಮಕ್ಕಳು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗ್ತಿದೆ.
ಈ ಬಗ್ಗೆ ಒಂದು ಕಾಲದಲ್ಲಿ ಜೆಡಿಎಸ್ನಲ್ಲಿದ್ದು, ನಂತರ ಸಿಡಿದೆದ್ದು ಕಾಂಗ್ರೆಸ್ ಸೇರಿರುವ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಚೆಲುವರಾಯಸ್ವಾಮಿ ವಿಶ್ಲೇಷಣೆ ಮಾಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಅಸ್ತಿತ್ವ ಬೇಕಿದೆ. ಅವರಿಗೆ ಮಂಗಳೂರು, ಬೆಳಗಾವಿಯಲ್ಲಿ ಏನೂ ಮಾಡೋಕೆ ಆಗಲ್ಲ. ಹೀಗಾಗಿ, ಹಳೆ ಮೈಸೂರು ಭಾಗದಲ್ಲಿ ಮಾತ್ರ ಅಸ್ತಿತ್ವ. ಆದರೆ, ಇಲ್ಲಿ ಅವರಿಗೆ ಕಾಂಗ್ರೆಸ್ ನೇರ ಸ್ಪರ್ಧಿ. ಹೀಗಾಗಿ, ಹೇಗಾದರು ಮಾಡಿ ತಮ್ಮ ಸೀಟು ಉಳಿಸಿಕೊಳ್ಳಬೇಕು ಅಂತ ತಂತ್ರ ಹೂಡಿದ್ದಾರೆ ಎಂದು ದೂರಿದ್ದಾರೆ. ಕಾಂಗ್ರೆಸ್ ಇದಕ್ಕೆ ಪ್ರತಿತಂತ್ರ ಮಾಡಲೇಬೇಕಿದೆ. ಇಲ್ಲಿದ್ದದ್ದರೆ ಹಳೆ ಮೈಸೂರು ಭಾಗದಲ್ಲಿ ಇದು ಬೇರೆ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಹಾಗೆಯೇ, ಸಿದ್ದರಾಮಯ್ಯ ಅವರ ಮತ್ತೊಬ್ಬ ಬೆಂಬಲಿಗ ಮಾಜಿ ಸಚಿವ ಎಚ್.ಎಂ.ರೇವಣ್ಣ ಕೂಡ ಬೆನ್ನಿಗೆ ನಿಂತಿದ್ದಾರೆ. ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಅಲ್ಲ. ಆಡಳಿತ ನಡೆಸಿದ ವ್ಯಕ್ತಿಯೇ ಅದಕ್ಕೆ ಕಾರಣ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಆದರೆ, ಕಾಂಗ್ರೆಸ್ನ ಪವರ್ಫುಲ್ ಮ್ಯಾನ್ ಡಿ.ಕೆ.ಶಿವಕುಮಾರ್ ಮಾತ್ರ ಯಾವ ಹೇಳಿಕೆಗೂ ಪ್ರತಿಕ್ರಿಯಿಸುತ್ತಿಲ್ಲ. ಅಂತರ ಕಾಯ್ದುಕೊಂಡಿದ್ದಾರೆ. ಕೇಳಿದರೆ, ಎಲ್ಲರ ಮಾತಿಗೂ ಉತ್ತರ ಕೊಡಲು ನನಗೆ ಟೈಂ ಇಲ್ಲಎಂದು ಹೇಳಿದ್ದಾರೆ.
Comments are closed.