ಬೆಂಗಳೂರು: ಯಾವಾಗ ಪೊಲೀಸ್ ಆಯುಕ್ತರ ವರ್ಗಾವಣೆ ವಿಚಾರದಲ್ಲಿ ಟ್ಯಾಪಿಂಗ್ ಭೂತ ಆರಂಭವಾಯ್ತೋ ಅದನ್ನೇ ಬಿಜೆಪಿ ನಾಯಕರು ಹೆಚ್ಡಿಕೆ ವಿರುದ್ಧ ದಾಳವಾಗಿ ಬಳಸಿಕೊಂಡ್ರು. ಮಾಜಿ ಸಿಎಂ ಕುಮಾರಸ್ವಾಮಿಯವರೇ ನಮ್ಮ ಎಲ್ಲರ ಫೋನ್ ಕದ್ದಾಲಿಸಿದ್ದಾರೆ ಅಂತ ಬಾಂಬ್ ಸಿಡಿಸಿದ್ರು.
ಬಿಜೆಪಿ ನಾಯಕರ ಈ ಆರೋಪಕ್ಕೆ ಮಾಜಿ ಸಿಎಂ ಹೆಚ್ಡಿಕೆ ಗರಬಡಿದವರಾದಂತಾಗಿದ್ದಾರೆ. ಕೂಡಲೇ ನನಗೂ ಇದಕ್ಕೂ ಸಂಬಂಧವೇ ಇಲ್ಲ ಅಂತ ತಳ್ಳಿಹಾಕಿದ್ದಾರೆ. ನಾನು ಸಿಎಂ ಕುರ್ಚಿ ಮೇಲೆ ಆಸೆ ಪಟ್ಟವನಲ್ಲ, ಅಧಿಕಾರಕ್ಕಾಗಿ ಕದ್ದಾಲಿಕೆ ಮಾಡುವಷ್ಟು ದುರ್ಬಲನಲ್ಲ ಅಂತ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರವೂ ನಮ್ಮ ಫೋನ್ ಕದ್ದಾಲಿಕೆ ಮಾಡಿತ್ತು. ರಾಜ್ಯ ಸರ್ಕಾರವೂ ಮಾಡಿರಬಹುದು ಅದರಲ್ಲಿ ವಿಶೇಷವೇನಿದೆ ಅಂತ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಮಾಜಿ ಸಚಿವ ರಾಮಲಿಂಗಾರೆಡ್ಡಿಯಂತವರೇ ಕೇಂದ್ರದ ಮೇಲೆ ಆರೋಪ ಹೊರಿಸಿದ್ದಾರೆ.
‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಕದ್ದಾಲಿಕೆ ನಡೆದಿಲ್ಲ’
ಇನ್ನು ರಾಮನಗರದಲ್ಲಿ ಈ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿದ್ದು, ನಮ್ಮ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಕದ್ದಾಲಿಕೆ ನಡೆದಿಲ್ಲ. ನಮ್ಮ ಸರ್ಕಾರದಲ್ಲಿ ಗೃಹ ಸಚಿವರಾಗಲಿ, ಸಿಎಂ ಆಗಲಿ ಯಾರು ಪೋನ್ ಕದ್ದಾಲಿಕೆ ಮಾಡಿಲ್ಲ. ಈಗ ಬಿಜೆಪಿ ಸರ್ಕಾರವಿದೆ ಬೇಕಾದರೆ ತನಿಖೆ ನಡೆಸಲಿ ಎಂದಿದ್ದಾರೆ.
‘ಅನರ್ಹರ ಗೋರಿಗೆ ನಾವು ಹೋಗಿ ಪೂಜೆ ಮಾಡಿಬರ್ತೀವಿ’
ಫೋನ್ ಕದ್ದಾಲಿಕೆಯ ಬಗ್ಗೆ ಹೆಚ್ ವಿಶ್ವನಾಥ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಬಿಜೆಪಿಯವರು ಅನರ್ಹ ಶಾಸಕರಿಗೆ ಗೋರಿ ಕಟ್ಟುತ್ತಿದ್ದಾರೆ. ಆಮೇಲೆ ನಾವು ಕೂಡ ಹೋಗಿ ಪೂಜೆ ಮಾಡಿಕೊಂಡು ಬರುತ್ತೇವೆ ಎಂದು ಹೆಚ್.ವಿಶ್ವನಾಥ್ಗೆ ಟಾಂಗ್ ನೀಡಿದ್ದಾರೆ.
ಒಟ್ನಲ್ಲಿ ಆಪರೇಷನ್ ಕಮಲ ಆಯ್ತು, ಇದೀಗ ಪ್ರವಾಹದ ಸುದ್ದಿಯಾಯ್ತು. ಅದ್ರ ನಡುವೆ ಟೆಲಿಫೋನ್ ಟ್ಯಾಪಿಂಗ್ ಸಾಕಷ್ಟು ಸುದ್ದಿಯಾಗ್ತಿದೆ. 1988ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಈ ವಿಚಾರ ಸಾಕಷ್ಟು ಗದ್ದಲಕ್ಕೆ ಕಾರಣವಾಗಿ, ಸರ್ಕಾರ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ದುತ್ತನೆ ಉದ್ಬವಿಸಿದ್ದು ಮಾಜಿ ಸಿಎಂ ಕುಮಾರಸ್ವಾಮಿಗೆ ಕಂಟಕ ಎದುರಾದಂತಾಗಿದೆ.
Comments are closed.