ಬೆಂಗಳೂರು: ರಾಕ್ಷಸ ಸರ್ಕಾರ ಕೊನೆಗಾಣಿಸಲು ನಾವು ರಾಜೀನಾಮೆ ನೀಡಿದ್ದೇವೆ ಎಂದು ಹೀರೆಕೆರೂರು ಕ್ಷೇತ್ರದ ಕಾಂಗ್ರೆಸ್ನ ಅನರ್ಹ ಶಾಸಕ ಬಿ.ಸಿ ಪಾಟೀಲ್ ಅವರು ಶನಿವಾರ ಹೇಳಿದರು.
ದೆಹಲಿಯಿಂದ ಕೇಂಪೇಗೌಡ ವಿಮಾನ ನಿಲ್ದಾಣ ಬಂದಿಳಿದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ನಲ್ಲಿ ನಮಗೆ ನ್ಯಾಯ ಸಿಗುತ್ತೆ ಅನ್ನೊ ವಿಶ್ವಾಸವಿದೆ. ಒಂದು ಕುಟುಂಬಕ್ಕೆ ಸೀಮಿತವಾಗಿತ್ತು ಸಮ್ಮಿಶ್ರ ಸರ್ಕಾರ ಅಷ್ಟೇ. ಕಾಂಗ್ರೆಸ್ನ ಮೂರ್ನಾಲ್ಕು ಜನರಿಗೆ ಮಾತ್ರ ಸರ್ಕಾರದಿಂದ ಅನುಕೂಲವಾಗಿತ್ತು ಎಂದು ಅವರು ಪ್ರತಿಕ್ರಿಯೆ ನೀಡಿದರು.
ಇನ್ನು ಉತ್ತರ ಕರ್ನಾಟಕವನ್ನು ಸಮ್ಮಿಶ್ರ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು. ನಾಲ್ಕು ಜಿಲ್ಲೆಗಳಿಗೆ ಮಾತ್ರ ಸಿಎಂ ಅನುದಾನ ನೀಡುತ್ತಿದ್ದರು. ಈ ಎಲ್ಲಾ ವಿಷಯಗಳಿಂದ ಬೇಸತ್ತು ನಾವು ರಾಜೀನಾಮೆ ನೀಡಿದ್ದೇವೆ. ನಾನು ಚುನಾವಣೆಗೆ ಹಿರೇಕೆರೂರು ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕೆಂದು ಜನರ ಬಳಿ ಚರ್ಚೆ ಮಾಡುತ್ತೇನೆ. ನನ್ನ ಜೀವನದಲ್ಲಿ ಎರಡು ಬಾರಿ ಮಾತ್ರ ರಾಜೀನಾಮೆ ನೀಡಿದ್ದೇನೆ. ಒಮ್ಮೆ ಪೊಲೀಸ್ ಹುದ್ದೆಗೆ, ಈಗ ಶಾಸಕ ಸ್ಥಾನಕ್ಕೆ ಎಂದು ಬಿ.ಸಿ ಪಾಟೀಲ್ ಅವರು ನುಡಿದರು.
ಅಷ್ಟೇ ಅಲ್ಲದೇ ಜನರ ಬಳಿ ವಿಚಾರ ಮಾಡಿ ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಬೇಕೆಂದ ನಿರ್ಧಾರ ತೆಗೆದುಕೊಳ್ಳುತ್ತೇವೆ. ನನ್ನ ಮಗಳು ನಿಲ್ಲಲಿಕ್ಕೆ ಹಿರೇಕೆರೂರೆ ಬೇಕಿಲ್ಲ. ರಾಜ್ಯದ ಜನರಿಗೆ ಬಿ.ಸಿ ಪಾಟೀಲ್ ಹೆಸರು, ಮುಖ ತಿಳಿದಿದೆ. ರಾಜ್ಯದ ಯಾವುದೆ ಮೂಲೆಯಲ್ಲಿ ನಿಂತು ಗೆಲ್ಲಬಲ್ಲೇ ಎಂದು ಬಿಸಿ ಪಾಟೀಲ್ ಅವರು ತನ್ನ ಮಗಳಿಗೆ ಸ್ವ-ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರ ಕಡೆ ನಿಲ್ಲಿಸಲು ಒಲವು ತೋರಿದ್ದಾರೆ.
Comments are closed.