ಬೆಂಗಳೂರು: ಅನರ್ಹಗೊಂಡ ಶಾಸಕರನ್ನು ಹಂಗಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಪಕ್ಷ ವಿರೋಧಿ ಧೋರಣೆ ಹಿನ್ನೆಲೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಶಿವರಾಂ ಹೆಬ್ಬಾರ್, ಬಿ.ಸಿ.ಪಾಟೀಲ್, ಆರ್.ಶಂಕರ್, ಆನಂದ್ ಸಿಂಗ್, ಡಾ.ಸುಧಾಕರ್, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಮುನಿರತ್ನಂ ನಾಯ್ಡು, ರೋಷನ್ ಬೇಗ್, ಎಂಟಿಬಿ ನಾಗರಾಜುರನ್ನ ಕಾಂಗ್ರೆಸ್ನಿಂದ ಉಚ್ಛಾಟನೆ ಮಾಡಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ಅನರ್ಹ ಶಾಸಕರಿಗೆ ಸಚಿವ ಸ್ಥಾನ ಕೊಡುವ ಮಾತನಾಡಿದ್ದಾರೆ. ಸಿಎಂ ಭೇಟಿ ಮಾಡಿ ಮಾತನಾಡಿದ ಲಿಂಗಾಯಿತ ಮುಖಂಡರು, ಲಿಂಗಾಯಿತ ಸಮುದಾಯದಿಂದ 16 ಜನ ಶಾಸಕರು ಗೆದ್ದಿದ್ದಾರೆ. ಅದರಲ್ಲಿ ಕನಿಷ್ಠ 4 ಜನರಿಗಾದರೂ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ನಾಲ್ಕು ಸಾಕಾ ಐದು ಬೇಡ್ವಾ ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ. ಅಲ್ಲದೇ, ಈ ವೇಳೆ ನಿಮಗೆ ಎಲ್ಲಾ ಕೊಟ್ಬಿಟ್ರೆ, ಆ ರಾಜೀನಾಮೆ ಕೊಟ್ಟ ಶಾಸಕರು ಏನು ಮಾಡಬೇಕು..? ರಾಜೀನಾಮೆ ಕೊಟ್ಟ 15 ಶಾಸಕರು ಏನು ವಿಷ ಕುಡಿಯಬೇಕಾ ಎಂದು ಸಿಟ್ಟಾಗಿದ್ದು, ಈ ಮೂಲಕ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವ ಸುಳಿವು ನೀಡಿದ್ದಾರೆ.
Comments are closed.