ಬೆಂಗಳೂರು: ಯಾವ್ಯಾವ ನಾಯಕರಿಗೆ ಯಾವ ಖಾತೆ ನೀಡೋದು ಅನ್ನೋದೇ ದೊಡ್ಡ ತಲೆ ನೋವಾಗಿದೆ. ಹೀಗಾಗಿಯೇ ಬಿಎಸ್ವೈ ಅಳೆದು ತೂಗಿ ಪಟ್ಟಿ ರೆಡಿ ಮಾಡುತ್ತೀದ್ದಾರೆ.
ಯಡಿಯೂರಪ್ಪಗೆ ಅತೃಪ್ತರ ಕ್ಷೇತ್ರಗಳೇ ದೊಡ್ಡ ಚಾಲೆಂಜ್ ಆಗಿವೆ. ಯಾಕಂದ್ರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹ ಮಾಡಿ ಗೇಟ್ಪಾಸ್ ಕೊಟ್ತಿದ್ದಂತೆ ಇವ್ರೆಲ್ಲಾ ಬಿಜೆಪಿಯತ್ತ ವಾಲ್ತಿದ್ದಾರೆ. ದೋಸ್ತಿಯಿಂದ ಬಂಡೆದ್ದು ಬಂದವರು ಬಿಜೆಪಿಯಲ್ಲಿ ಬೇರೂರ್ತಿದ್ದಂತೆ ಅಲ್ಲಿರೋ ಕಮಲ ನಾಯಕರಿಗೆ ಆತಂಕ ಶುರುವಾಗಿದೆ.
ತಮ್ಮ ಹಿಡಿತವೆಲ್ಲಿ ತಪ್ಪಿ ಹೋಗುತ್ತೋ, ತಾವೆಲ್ಲಿ ಮೂಲೆಗುಂಪಾಗ್ತೀವೋ ಅನ್ನೋ ಭಯ ಕಾಡೋಕೆ ಶುರುವಾಗಿದೆ. ಇದನ್ನೇ ಅಸ್ತ್ರ ಮಾಡಿಕೊಳ್ತಿರೋ ದೋಸ್ತಿ ಪಾಳಯ ಮಾಜಿ ಶಾಸಕರಿಗೆ ಗಾಳ ಹಾಕೋ ಪ್ಲಾನ್ ಮಾಡ್ತಿದ್ಯಂತೆ. ಇದನ್ನರಿತ ಯಡಿಯೂರಪ್ಪ ತಲೆಬಿಸಿ ಮಾಡಿಕೊಂಡಿದ್ದು ಹಿರೇಕೆರೂರು ಬಿಜೆಪಿ ಮಾಜಿ ಶಾಸಕ ಯು.ಬಿ ಬಣಕಾರ್ಗೆ ಬುಲಾವ್ ನೀಡಿದ್ದಾರೆ. ಈ ಮೂಲಕ ಒಬ್ಬೊಬ್ರನ್ನೇ ಮನವೊಲಿಸೋ ಕೆಲಸ ಮಾಡ್ತಿದ್ದು ಎಲ್ರನ್ನೂ ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಬಿಜೆಪಿ ನಾಯಕರಿಗೆ ಅಧಿಕಾರ ಸಿಕ್ಕಿರೋದು ತಮಾಷೆ ಮಾತಲ್ಲ. ಇದರ ಹಿಂದೆ ಅದೆಷ್ಟರ ಮಟ್ಟಿಗಿನ ಶ್ರಮವಿದೆ ಅನ್ನೋದು ಅವರಿಗೆ ಗೊತ್ತು. ಹೀಗಾಗಿಯೇ ಹೇಗಾದರು ಮಾಡಿ ಕುರ್ಚಿ ಗಿಟ್ಟಿಸಿಕೊಳ್ಳಲೇ ಬೇಕು ಅಂತಾ ಕೆಲವರು ಟೊಂಕ ಕಟ್ಟಿ ನಿಂತಿದ್ದಾರಂತೆ. ಅದ್ರಲ್ಲೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೊಡ್ಡ ಖಾತೆಯ ಮೇಲೆಯೇ ಕಣ್ಣಿಟ್ಟಿದ್ದಾರಂತೆ. ಸ್ಪೀಕರ್ ಆಗಲ್ಲ ಅಂತಾ ಕಡ್ಡಿ ಮುರಿದಂತೆ ರಿಜೆಕ್ಟ್ ಮಾಡಿದ್ದ ಶೆಟ್ಟರ್, ಲೋಕೋಪಯೋಗಿ ಖಾತೆಗೆ ಬೇಡಿಕೆ ಇಟ್ಟಿದ್ದಾರಂತೆ. ಅಷ್ಟೇ ಅಲ್ಲ ಹಾವೇರಿ ಶಾಸಕರ ಪರ ತಮ್ಮ ಸಮುದಾಯದವರು ಲಾಬಿ ಶುರು ಮಾಡಿದ್ದಾರೆ. ಓಲೇಕಾರ್ ಅವರಿಗೆ ಡಿಸಿಎಂ ಅಥವಾ ಗೃಹಸಚಿವ ಸ್ಥಾನ ನೀಡಲೇ ಬೇಕು ಅಂತ ಛಲವಾದಿ ಗುರುಪೀಠದ ಬಸವಲಿಂಗ ನಾಗಿದೇವ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.
ಕಮಲ ನಾಯಕರು ಎಷ್ಟೇ ಸರ್ಕಸ್ ಮಾಡಿದರು ಹೈಕಮಾಂಡ್ ಮುದ್ರೆ ಬಿದ್ದೋರು ಮಾತ್ರ ಮಂತ್ರಿ ಪಟ್ಟ ಗಿಟ್ಟಿಸಲಿದ್ದಾರೆ. ಸಂಪುಟ ರಚನೆ ಯಾವಾಗ ಮಾಡ್ಬೇಕು, ಯಾರಿಗೆಲ್ಲಾ ಸ್ಥಾನ ನೀಡ್ಬೇಕು ಅನ್ನೋದನ್ನು ಕೇಂದ್ರ ನಾಯಕರು ತೀರ್ಮಾನ ಮಾಡ್ತಾರೆ ಅಂತಾ ಸಿಟಿ ರವಿ ಹೇಳಿದ್ದಾರೆ.
Comments are closed.