ಕರ್ನಾಟಕ

ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸ ಮತಯಾಚನೆ ಮುಹೂರ್ತ ಫಿಕ್ಸ್ !

Pinterest LinkedIn Tumblr

ಬೆಂಗಳೂರು: ವಿಶ್ವಾಸಮತ ಯಾಚನೆಗೆ ಮುಹೂರ್ತ ನಿಗದಿಯಾಗಿದೆ. ಗುರುವಾರ ಸದನದಲ್ಲಿ ವಿಶ್ವಾಸಮತ ಯಾಚಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದಾರೆ. ಸದನ ಕಲಾಪ ಸಮಿತಿ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಯಿತು.

ಅತೃಪ್ತ ಶಾಸಕರ ಅರ್ಜಿ, ಸ್ಪೀಕರ್‌ ಸಲ್ಲಿಸಿದ ಅರ್ಜಿ ಮತ್ತು ರಾಜ್ಯ ಸರಕಾರದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ ಬಳಿಕವೇ ವಿಶ್ವಾಸ ಮತ ಯಾಚಿಸಲು ನಿರ್ಧರಿಸಲಾಯಿತು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಇದೇ ವೇಳೆ ಗುರುವಾರದ ವರೆಗೆ ಯಾವುದೇ ಕಲಾಪ ನಡೆಸದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಬಿಜೆಪಿ ನಿಯೋಗವೊಂದು ಸ್ಪೀಕರ್ ಕೆ.ಆರ್ ರಮೇಶ್‌ ಕುಮಾರ್ ಭೇಟಿ ಮಾಡಿ ಇಂದೇ ವಿಶ್ವಾಸಮತ ಯಾಚನೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದೆ. ಇದೇ ವೇಳೆ ಸದನದ ವಿಶ್ವಾಸ ಕಳೆದುಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಲಿ ಎಂದು ಬಿಜೆಪಿ ಆಗ್ರಹಿಸಿದೆ.

ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆ ಆರಂಭವಾಗಿದೆ. ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.

ವಿಧಾನಸಭೆ ಕಲಾಪ ಆರಂಭಕ್ಕೆ ಮುನ್ನ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಮತ್ತು ಜಮೀರ್ ಅಹ್ಮದ್ ಜತೆ ಚರ್ಚಿಸಿದರು.

ವಿಶ್ವಾಸ ಮತ ಯಾಚನೆ ಬಗ್ಗೆ ಸ್ಪೀಕರ್‌ ರಮೇಶ್ ಕುಮಾರ್ ಅವರಿಗೆ ಬಿಜೆಪಿ ನೋಟೀಸ್ ನೀಡಿದೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೂಡ ಸ್ಪೀಕರ್ ಅವರಿಗೆ ಇದೇ ವಿಷಯದಲ್ಲಿ ನೋಟಿಸ್ ನೀಡಿದ್ದಾರೆ. ಎರಡೂ ನೋಟಿಸ್‌ಗಳನ್ನು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಲು ಸ್ಪೀಕರ್ ನಿರ್ಧರಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಬಂಡಾಯ ಶಾಸಕ ರಾಮಲಿಂಗಾ ರೆಡ್ಡಿ ವಿಧಾನಸಭೆ ಕಲಾಪಕ್ಕೆ ಹಾಜರಾಗದಿರಲು ನಿರ್ಧಾರ. ಆದರೆ ಅವರ ಪುತ್ರಿ ಸೌಮ್ಯಾ ರೆಡ್ಡಿ ಹಾಜರಾಗುತ್ತಿದ್ದಾರೆ.

ನಾಲ್ಕು ಗಂಟೆಗಳ ಸುದೀರ್ಘ ಸಿಎಲ್‌ಪಿ ಸಭೆ ಮುಕ್ತಾಯ. ಒಗ್ಗಟ್ಟಾಗಿ ಇರಲು ನಿರ್ಧಾರ. ವಿಧಾನಸಭೆಯಲ್ಲಿ ಬಿಜೆಪಿ ತಂತ್ರಗಳಿಗೆ ಪ್ರತಿತಂತ್ರ ಹೂಡಲು ನಿರ್ಧಾರ.

ಇಂದೇ ವಿಶ್ವಾಸಮತ ಸಾಬೀತುಪಡಿಸುವಂತೆ ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದರೆ ಸಮ್ಮಿಶ್ರ ಸರಕಾರದ ಪತನ ಖಚಿತ ಎಂದು ಕಾಂಗ್ರೆಸ್‌ ನಾಯಕರು ಚರ್ಚಿಸಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡೆಸುತ್ತಿರುವ ಮಹತ್ವದ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದೆ.

ಹೇಗೋ ಮಾಡಿ ಸರಕಾರ ಉಳಿಸಿಕೊಂಡರೂ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಖಾತೆ ಸಚಿವ ಎಚ್‌.ಡಿ ರೇವಣ್ಣ ಅವರ ವರ್ತನೆಗಳು ಬದಲಾಗುತ್ತವೆಯೆ? ಎಂಬ ಪ್ರಶ್ನೆಯೂ ಶಾಸಕರ ಸಭೆಯಲ್ಲಿ ವ್ಯಕ್ತವಾಗಿದೆ. ಈಗಾಗಲೇ ರಾಜೀನಾಮೆ ನೀಡಿರುವ ಕಾಂಗ್ರೆಸ್‌ ಶಾಸಕರು ರೇವಣ್ಣ ಅವರ ವಿರುದ್ಧವೇ ತೀಕ್ಷ್ಣ ವಾಗ್ದಾಳಿ ಮಾಡಿದ್ದು, ಸರಕಾರದ ಬಿಕ್ಕಟ್ಟಿಗೆ ಅವರೇ ಮೂಲ ಕಾರಣ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಅನಿಸಿಕೆಯಂತೆ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದಾದರೆ ಮುಂದಿನ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬರಲು ನೆರವಾದೀತೆ ಎಂಬ ವಿಷಯವೂ ಚರ್ಚೆಯಾಗುತ್ತಿದೆ. ಇನ್ನೂ ನಾಲ್ವರು ಕಾಂಗ್ರೆಸ್ ಶಾಸಕರು ಅತೃಪ್ತ ಶಾಸಕರ ಸಂಪರ್ಕದಲ್ಲಿದ್ದಾರೆ ಎಂಬ ಸಂದೇಹವೂ ಕಾಂಗ್ರೆಸ್ ಪಾಳಯದಲ್ಲಿದೆ.

ದೋಸ್ತಿ ಸರಕಾರದ ಅಳಿವು- ಉಳಿವಿನಲ್ಲಿ ನಿರ್ಣಾಯಕವಾಗಿರುವ ಇಂದಿನ ವಿಧಾನಸಭೆ ಕಲಾಪ ಆರಂಭಕ್ಕೆ ಮುನ್ನ ಕಾಂಗ್ರೆಸ್‌ ಶಾಸಕರ ಜತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರು ತಂಗಿರುವ ತಾಜ್ ವಿವಾಂತ ಹೋಟೆಲ್‌ಗೆ ಸಿದ್ದರಾಮಯ್ಯ ಬೆಳಗ್ಗೆಯೇ ತೆರಳಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ನ ಅತೃಪ್ತ ಶಾಸಕರು ಯಾರ ಸಂಧಾನಕ್ಕೂ ಮಣಿಯದಿರುವ ಹಿನ್ನೆಲೆಯಲ್ಲಿ ದೋಸ್ತಿ ಸರಕಾರ ಪತನದ ಅಂಚಿಗೆ ಬಂದು ನಿಂತಿದೆ. ಸದನದ ನಿಯಮಾವಳಿಯನ್ನೇ ಮುಂದಿಟ್ಟುಕೊಂಡು ಸ್ಪೀಕರ್ ಅವರನ್ನು ಬಳಸಿಕೊಂಡು ಅತೃಪ್ತರನ್ನು ಹಣಿಯುವ ದೋಸ್ತಿ ನಾಯಕರ ತಂತ್ರ ಕೈಕೊಟ್ಟಿದೆ. ಅತೃಪ್ತ ಶಾಸಕರ ಬೆನ್ನಿಗೆ ನಿಂತಿರುವ ಬಿಜೆಪಿ ಹೆಣೆದಿರುವ ತಂತ್ರಗಳು ದೋಸ್ತಿಗಳನ್ನು ಬೇಸ್ತು ಬೀಳಿಸಿವೆ.

ಇದುವರೆಗೂ ಆಪರೇಷನ್ ಕಮಲಕ್ಕೆ ಕೈಹಾಕಿ ವಿಫಲಗೊಂಡಿರುವ ಬಿಜೆಪಿ ಪ್ರಮುಖರು ಈ ಬಾರಿ ಎಲ್ಲೂ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳದೆ ನಿರ್ಣಾಯಕ ತಂತ್ರ ಹೆಣೆದಿದ್ದಾರೆ. ಈ ಬಾರಿ ಬಿಜೆಪಿ ವರಿಷ್ಠರು ಆಖಾಡಕ್ಕಿಳಿದಿರುವುದೇ ತಂತ್ರದ ಯಶಸ್ಸಗೆ ಕಾರಣ ಎನ್ನಲಾಗುತ್ತಿದೆ.

ಅತೃಪ್ತರ ಮೇಲೆ ಅನರ್ಹತೆಯ ಅಸ್ತ್ರ ಪ್ರಯೋಗಿಸುವ ತಂತ್ರದ ಭಾಗವಾಗಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸುವುದಾಗಿ ಘೋಷಿಸಿದ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ. ಈ ಅವಕಾಶವನ್ನೇ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಮುಖಂಡರು ಇಂದೇ ಬಹುಮತ ಸಾಬೀತುಪಡಿಸುವಂತೆ ಅಥವಾ ರಾಜೀನಾಮೆ ನೀಡುವಂತೆ ಸದನದಲ್ಲಿ ಒತ್ತಾಯಿಸಲು ನಿರ್ಧರಿಸಿದ್ದಾರೆ.

ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಅವರ ಮನವೊಲಿಸುವ ಕಾಂಗ್ರೆಸ್ ನಾಯಕರ ಪ್ರಯತ್ನವೂ ವಿಫಲವಾಗಿದೆ. ಇದರ ಬೆನ್ನಿಗೇ ಕಾಂಗ್ರೆಸ್‌ನ ಇನ್ನಿಬ್ಬರು ಶಾಸಕರಾದ ಸೌಮ್ಯಾ ರೆಡ್ಡಿ ಮತ್ತು ಅಂಜಲಿ ನಿಂಬಾಳ್ಕರ್ ಕೂಡ ರಾಜೀನಾಮೆ ನೀಡುವ ನಿರೀಕ್ಷೆಯಿದೆ. ಹೀಗಾಗಿ ಸರಕಾರ ಉಳಿಸಿಕೊಳ್ಳುವ ದೋಸ್ತಿ ನಾಯಕರ ಪ್ರಯತ್ನಗಳೆಲ್ಲ ಈ ಬಾರಿ ವಿಫಲಗೊಂಡಂತೆ ಕಾಣುತ್ತಿದೆ.

Comments are closed.