ಕರ್ನಾಟಕ

ಕೈಮುಗಿಯುವ ಸೋಗಿನಲ್ಲಿ ಗಾಂಧೀಜಿಯನ್ನು ಕೊಂದ ದೇಶವಿದು, ಇನ್ನು ನನ್ನನ್ನು ಬಿಡುತ್ತಾರಾ ? ರಮೇಶ್ ಕುಮಾರ್ ಪ್ರಶ್ನೆ

Pinterest LinkedIn Tumblr

ಬೆಂಗಳೂರು: ಯಾರಾದರೂ ಹೇಳಿದ ರೀತಿ ನೃತ್ಯ ಮಾಡಲು ನಾನು ನೃತ್ಯಗಾರನೂ ಅಲ್ಲ, ನಾನು ಸಂವಿಧಾನದಡಿ ನೇಮಕಗೊಂಡ ಪ್ರತಿನಿಧಿ, ಸಂವಿಧಾನ ಮಾತ್ರ ನನಗೆ ಮುಖ್ಯ ಎಂದು ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂವಿಧಾನ, ಕಾನೂನಿಗೆ ಅಪಚಾರವೆಸಗುವುದಿಲ್ಲ, ಜನರ ನೋವಿಗೆ ಗೌರವ ಕೊಡುವುದು ನನ್ನ ಆದ್ಯ ಕರ್ತವ್ಯ, ಅದರಿಂದ ನಾನು ವಿಮುಖನಾಗುವುದಿಲ್ಲ, ಸಂವಿಧಾನದಲ್ಲಿ ಹೇಳಿರುವ ನಿಯಮಗಳಿಗೆ ನಾನು ಅಪಚಾರ ಮಾಡುವುದಿಲ್ಲ, ಸಂವಿಧಾನದ ಮೇಲೆ ಅತ್ಯಾಚಾರ ಮಾಡುವುದಿಲ್ಲ, ಯಾರನ್ನಾದರೂ ಖುಷಿಪಡಿಸಲು ಅಥವಾ ಅಸಂತೋಷಪಡಿಸುವುದಕ್ಕೆ ನಾನು ಸಿದ್ಧನಿಲ್ಲ, ಎಂದು ತಿಳಿಸಿದ್ದಾರೆ.

ಶಾಸಕರು ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸದ ಕಾರಣ ನಿನ್ನೆ ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಅವರಿಗೆ ವಿವರಣೆ ನೀಡುವಂತೆ ಕ್ರಮಸಂಖ್ಯೆ ಪ್ರಕಾರ ದಿನಾಂಕ ಮತ್ತು ಸಮಯ ನೀಡಲಾಗಿದೆ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

ಸುಪ್ರೀಂಕೋರ್ಟ್‌ ಯಾವ ತೀರ್ಪು ನೀಡುತ್ತದೆ ನೋಡೋಣ. ಅದರ ತೀರ್ಪನ್ನು ಪಾಲಿಸೋಣ. ತಪ್ಪು ತೀರ್ಪು ನೀಡಿದರೆ, ಅದರ ಬಗ್ಗೆ ವಿವರಣೆ ಕೇಳೋಣ, ದೇಶದಲ್ಲಿ ಒಂದು ಸುಪ್ರೀಂಕೋರ್ಟ್ ಇರಬೇಕು, ದೇಶ ಉಳಿಯಬೇಕು, ಶಾಸಕಾಂಗ, ನ್ಯಾಯಾಂಗ ಕೂಡ ಉಳಿಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಕೈಮುಗಿಯುವ ಸೋಗಿನಲ್ಲಿ ಗಾಂಧೀಜಿಯನ್ನು ಕೊಂದ ದೇಶವಿದು, ಇನ್ನು ರಮೇಶ್ ಕುಮಾರ್ ಅವರನ್ನು ಬಿಡುತ್ತಾರಾ, ಗಾಂಧಿಯನ್ನು ಕೊಂದರೂ ಅವರ ತತ್ವವನ್ನು ಕೊಲ್ಲಲು ಯಾರಿಂದಲೂ ಸಾಧ್ಯವಾಗಿಲ್ಲ. ನಾನು ಗಾಂಧಿ ತತ್ವದಡಿ ಬದುಕುತ್ತಿರುವ ವ್ಯಕ್ತಿ. ನನ್ನ ವಿರುದ್ಧವೂ ಬಹಳ ದಿನಗಳಿಂದ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

Comments are closed.