ಯಡಿಯೂರಪ್ಪ ಅವಧಿ ಮಾರ್ಚ್ ತಿಂಗಳಿಗೇ ಪೂರ್ಣಗೊಂಡಿದ್ದು, ಲೋಕಸಭಾ ಚುನಾವಣೆಗಾಗಿ ಮುಂದುವರೆಸಲಾಗಿತ್ತು. ಈಗ ಚುನಾವಣೆ ಮುಗಿದಿದೆ. ಆದರೆ, ಪಕ್ಷ ಸಂಘಟನೆ ವಿಚಾರದಲ್ಲಿ ಬಿಎಸ್ವೈ ಬಿಟ್ಟರೆ ವರಿಷ್ಠರಿಗೆ ಬೇರೆ ದಾರಿಯೇ ಇಲ್ಲ. ಮುಂದಿನ ದಿನಗಳಲ್ಲಿ ಅವರು ಸಿಎಂ ಆಗೋ ಸಂದರ್ಭ ಬಂದರೆ ರಾಜ್ಯಾಧ್ಯಕ್ಷ ಹುದ್ದೆ ಬಿಟ್ಟು ಕೊಡಲೇಬೇಕು. ಹೀಗಾಗಿ, ವರಿಷ್ಠರು ಯಡಿಯೂರಪ್ಪ ಸ್ಥಾನ ತುಂಬುವ ನಾಯಕರ ಹುಡುಕಾಟದಲ್ಲಿದ್ದಾರೆ.
ಮೈತ್ರಿ ಸರ್ಕಾರ ಕೆಡವಿ ಅಧಿಕಾರಕ್ಕೇರುವ ಹಂಬಲ ಇನ್ನೂ ಕೇಸರಿ ಪಾಳಯದಲ್ಲಿ ಪ್ರಬಲವಾಗೇ ಇದೆ. ಅಂದುಕೊಂಡಂತೆ ಆದರೆ ಬಿಎಸ್ವೈ ಸಿಎಂ ಆಗಲಿದ್ದಾರೆ. ನಂತರ ರಾಜ್ಯಾಧ್ಯಕ್ಷ ಕುರ್ಚಿಯಲ್ಲಿ ಲಿಂಬಾವಳಿ ತಂದು ಕೂರಿಸಬಹುದು ಎಂಬುದು ಬಿಎಸ್ವೈ ಲೆಕ್ಕಾಚಾರವಂತೆ. ದೇಶಾದ್ಯಂತ ಪಕ್ಷ ಸಂಘಟನೆಯಲ್ಲಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ದೆಹಲಿಯಲ್ಲಿ ಅಮಿತ್ ಶಾ ಸಭೆ ನಡೆಸುತ್ತಿದ್ದಾರೆ. ಈ ಸಭೆಗೆ ದೆಹಲಿಗೆ ತೆರಳಿರುವ ಯಡಿಯೂರಪ್ಪ ತಮ್ಮ ಜೊತೆ ಲಿಂಬಾವಳಿಯವರನ್ನೂ ಕರೆದೊಯ್ದಿದ್ದಾರೆ. ಇತ್ತೀಚೆಗೆ ಅವರು ಎಲ್ಲೇ ಹೋದರು ಲಿಂಬಾವಳಿ ಜೊತೆಯಲ್ಲಿರುತ್ತಾರೆ. ಹೀಗಾಗಿ, ಲಿಂಬಾವಳಿ ಪರ ವರಿಷ್ಠರ ಬಳಿ ಬಿಎಸ್ವೈ ಬ್ಯಾಟಿಂಗ್ ನಡೆಸ್ತಿದ್ದಾರಾ..? ಎಂಬ ಅನುಮಾನವೂ ಮೂಡಿದೆ.
ಈ ನಡುವೆ ಸಿ.ಟಿ. ರವಿ ಪರ ಬಿ.ಎಲ್.ಸಂತೋಷ್ ಬ್ಯಾಟಿಂಗ್ ನಡೆಸಿದ್ದಾರೆ ಎಂದೇ ಹೇಳಲಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ಸಿ.ಟಿ.ರವಿ ಸೇರಿದಂತೆ ತಮ್ಮ ಬೆಂಬಲಿಗರ ಜೊತೆ ಅಂಡಮಾನ್ ನಿಕೋಬಾರ್ನಲ್ಲಿ ಬಿ.ಎಲ್.ಸಂತೋಷ್ ಬೈಠಕ್ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು. ಹೊಸ ರಾಜ್ಯಾಧ್ಯಕ್ಷ ನೇಮಕವಾದರೆ ರವಿಗೆ ಅವಕಾಶ ಕೊಡಿ ಎಂದು ವರಿಷ್ಠರ ಬಳಿ ಅವರು ಬೇಡಿಕೆ ಇಟ್ಟಿದ್ದಾರೆಂದೇ ಹೇಳಲಾಗ್ತಿದೆ. ಮತ್ತೊಂದೆಡೆ, ಮಾಜಿ ಡಿಸಿಎಂ ಆರ್.ಅಶೋಕ್ ಹೆಸರೂ ಕೇಳಿ ಬರುತ್ತಿದೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅಂತ ಸದ್ಯದಲ್ಲೇ ಗೊತ್ತಾಗಲಿದೆ.
Comments are closed.