
ಬೆಂಗಳೂರು: ನಕಲಿ ಪಾಸ್ಪೋರ್ಟ್ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನೆಗಲ್ನಲ್ಲಿ 4 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ರವಿ ಪೂಜಾರಿ ಪರಾರಿಯಾಗಿದ್ಧಾನೆ ಎನ್ನಲಾಗಿದೆ. ಮತ್ತೊಂದೆಡೆ ಆತ ಜೈಲಿನಿಂದಲೇ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪೂಜಾರಿ ಜೈಲಿನಿಂದಲೇ ನೇರವಾಗಿ ಪರಾರಿಯಾಗಿದ್ದಾನೋ ಅಥವಾ ಸೆನೆಗಲ್ನಿಂದ ಪರಾರಿಯಾಗಿದ್ದಾನೋ ಎನ್ನುವುದು ಖಚಿತವಾಗಿಲ್ಲ. ಆದರೆ, ರವಿ ಪೂಜಾರಿ ಪರಾರಿಯಾಗಿರುವುದರ ಬಗ್ಗೆ ಮಾತ್ರ ಸೆನೆಗಲ್ ಪತ್ರಿಕೆಗಳು ವರದಿ ಮಾಡಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಪೊಲೀಸರು, ರವಿ ಪೂಜಾರಿ ಅಲ್ಲಿಂದ ಬೇರೆ ದೇಶಕ್ಕೆ ಹೋಗಿರಬಹುದು. ಆದರೆ, ಇಲ್ಲಿಯವರೆಗೂ ಈ ಭೂಗತ ಪಾತಕಿ ಸೆನೆಗಲ್ನಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತವಾಗಿ ಅಲ್ಲಿನ ಸರ್ಕಾರ ನಮಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲು ಬೆಂಗಳೂರು, ಮುಂಬೈ ಪೊಲೀಸರು ಕಳೆದ 3 ತಿಂಗಳಿಂದ ಸೆನೆಗಲ್ನಲ್ಲಿ ಭಾರೀ ಪ್ರಯತ್ನ ನಡೆಸಿದ್ದರು. ಆದರೀಗ ಈತ ಅಲ್ಲಿಂದಲೇ ಪರಾರಿಯಾಗಿದ್ದು, ಕಾನೂನು ಹೋರಾಟದಡಿ ಗಡಿಪಾರು ಮಾಡಬೇಕೆಂಬ ಭಾರತದ ಪೊಲೀಸರ ಪ್ರಯತ್ನಕ್ಕೆ ತಣ್ಣೀರು ಬಿದ್ದಿದೆ.
ಇನ್ನು ಆತನ ವಿರುದ್ಧ 200ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಈ ಪ್ರಕರಣಗಳ ಸಾಕ್ಷ್ಯಾಧಾರಗಳನ್ನು ಫ್ರೆಂಚ್ ಭಾಷೆಗೆ ಅನುವಾದ ಮಾಡಿ ಅಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇನ್ನೇನು ವಿಚಾರಣೆ ಮುಗಿಯುತ್ತಿದ್ದಂತೆಯೇ ಭಾರತಕ್ಕೆ ಹಸ್ತಾಂತರ ಆಗುವ ನಿರೀಕ್ಷೆ ಇತ್ತು. ಈ ಮಧ್ಯೆ ಸೆನೆಗಲ್ನಿಂದ ಪರಾರಿಯಾಗಿದ್ದಾನೆ ಎಂದು ಪತ್ರಿಕೆಗಳು ವರದಿ ಮಾಡಿದ್ದು, ಭಾರತ ಪೊಲೀಸರಿಗೆ ಹಿನ್ನಡೆಯಾಗಿದೆ.
Comments are closed.