ಕರ್ನಾಟಕ

ಬೆಂಗಳೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹಾರ್ದಿಕ ಸ್ವಾಗತ ಕೋರಿದ ಬಿಜೆಪಿ !

Pinterest LinkedIn Tumblr

ಬೆಂಗಳೂರು: ‘ಸಿಎಂ ಕುಮಾರಸ್ವಾಮಿಯವರಿಗೆ ಬೆಂಗಳೂರಿಗೆ ಹಾರ್ದಿಕ ಸ್ವಾಗತ, ರೆಸಾರ್ಟ್ ವಾಸ್ತವ್ಯದಿಂದ ನೀವು ಸಾಕಷ್ಟು ವಿಶ್ರಾಂತಿ ಪಡೆದಿದ್ದೀರಿ ಎಂದು ನಾವು ಭಾವಿಸುತ್ತೇವೆ’- ಇದು ರಾಜ್ಯ ಬಿಜೆಪಿ ಘಟಕ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಬೆಂಗಳೂರಿಗೆ ಸ್ವಾಗತಿಸಿರುವ ಪರಿ.

ಮುಖ್ಯಂತ್ರಿ ಕುಮಾರಸ್ವಾಮಿಯವರ ಮಡಿಕೇರಿ ಇಬ್ಬನಿ ರೆಸಾರ್ಟ್ ವಾಸ ಇಂದಿಗೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ ಮೂಲಕ ಅವರನ್ನು ಬೆಂಗಳೂರಿಗೆ ವೆಲ್ಕಂ ಮಾಡಿದೆ.

ಮುಖ್ಯಮಂತ್ರಿಗಳ ರೆಸಾರ್ಟ್ ವಾಸ್ತವ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಈಗ ಟ್ವೀಟ್ ಮೂಲಕ ಮುಂದೇನು? ಎಂದು ಪ್ರಶ್ನೆ ಮಾಡಿದೆ.

ಅಲ್ಲದೆ ಇನ್ನೇನಾದರೂ ಬೇರೆ ರೆಸಾರ್ಟ್ ಗೆ ತೆರಳುವವರಿದ್ದೀರಾ? ವಿದೇಶ ಪ್ರವಾಸದ ಯೋಜನೆ ಏನಾದರೂ ಇದೆಯೆ? ಕಣ್ಣೀರು ಹಾಕುವ ಕಾರ್ಯಕ್ರಮ? ಬಿಜೆಪಿಯನ್ನು ದೂರುವ ಕಾರ್ಯಕ್ರಮಗಳಿದೆಯೆ? ಎಂದೂ ವ್ಯಂಗ್ಯವಾಡಿದೆ.

ಇನ್ನು ಹಾಗೊಂದು ವೇಳೆ ನಿಮ್ಮ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಸ್ವಲ್ಪ ಸಮಯ ಸಿಕ್ಕರೆ ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ದಿ, ರಾಜ್ಯದ ಬರ ಪರಿಸ್ಥಿತಿಯ ಬಗೆಗೆ ಗಮನ ಹರಿಸಿ ಎಂದೂ ಮುಖ್ಯಂತ್ರಿಗಳಿಗೆ ಪಕ್ಷ ಸಲಹೆ ಇತ್ತಿದೆ.

ಮಡಿಕೇರಿಯ ದುಬಾರಿ ರೆಸಾರ್ಟ್ ಗಳಲ್ಲಿ ಒಂದಾದ ಇಬ್ಬನಿ ರೆಸಾರ್ಟ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರದಿಂದ ವಿಶ್ರಾಂತಿಯಲ್ಲಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರ್, ಸಚಿವ ಶಾ.ರಾ. ಮಹೇಶ್ ಅವರುಗಳು ಸಹ ರೆಸಾರ್ಟ್ ನಲ್ಲಿ ತಂಗಿದ್ದಾರೆ. ಇಂದು ಮಧ್ಯಾಹ್ನದ ವೇಳೆ ಮಡಿಕೇರಿ ಬಿಡಲಿರುವ ಸಿಎಂ ಮದ್ದೂರಿನಲ್ಲಿನ ವಿವಾಹ ಸಮಾರಂಭವೊಂದಕ್ಕೆ ಭೇಟಿ ನೀಡಿ ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.

Comments are closed.