ನವದೆಹಲಿ: ಅಸಹಿಷ್ಣುತೆ ಮುಂದಿಟ್ಟುಕೊಂಡು ಪ್ರಶಸ್ತಿ ವಾಪಸಿ ಅಭಿಯಾನ ನಡೆಸಿದ್ದ ಬುದ್ದಿ ಜೀವಿಗಳು ಆಳ್ವಾರ್ ನಡೆದ ಅತ್ಯಾಚಾರ ಪ್ರಕರಣವಾದಾಗ ಮೌನವಾಗಿದ್ದಾರೆ ಏಕೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಎರಡು ವಾರಗಳ ಹಿಂದೆ ಕಾಂಗ್ರೆಸ್ ಅಧಿಕಾರವಿರುವ ಆಳ್ವಾರ್ ನಲ್ಲಿ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಆ ಹೆಣ್ಣುಮಗಳಿಗೆ ಕಾಂಗ್ರೆಸ್ ಸರ್ಕಾರ ನ್ಯಾಯ ದೊರಕಿಸಿಕೊಡುವ ಬದಲು ಚುನಾವಣೆ ಮುಗಿಯುವುದಕ್ಕಾಗಿ ಕಾಯುತ್ತಿದೆ. ಇದೇ ಕಾಂಗ್ರೆಸ್ ನ್ಯಾಯದಲ್ಲಿರುವ ಸತ್ಯ ಎಂದು ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
‘ನಾನು ಅವಾರ್ಡ್ ವಾಪಸಿ (ಪ್ರಶಸ್ತಿ ವಾಪಸ್) ಗ್ಯಾಂಗಿಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ. ಅಳ್ವಾರ್ ನಲ್ಲಿ ಮಹಿಳೆಯ ಮೇಲೆ ಐದಾರು ಜನರು ಸಾಮೂಹಿಕ ಅತ್ಯಾಚಾರ ನಡೆಸಿದ್ದರೂ ನಿಮ್ಮ ಗ್ಯಾಂಗ್ ಯಾಕೆ ಸುಮ್ಮನಿದೆ? ಇಷ್ಟೊಂದು ದೊಡ್ಡ ದುರಂತ ನಡೆದಿದ್ದರೂ ಅದನ್ನು ದಮನ ಮಾಡಲಾಗುತ್ತಿದೆ ಮತ್ತು ಮೊಂಬತ್ತಿ ಹಿಡಿದು ಪ್ರತಿಭಟನೆ ಮಾಡುವವರ ಮೊಂಬತ್ತಿಯಿಂದ ಹೊಗೆ ಬರುತ್ತಿದೆ. ಅಲ್ಲಿನ ಪೊಲೀಸರು ಮತ್ತು ಅಲ್ಲಿನ ಕಾಂಗ್ರೆಸ್ ಸರ್ಕಾರ ಅತ್ಯಾಚಾರಿಗಳನ್ನು ಬಂಧಿಸುವ ಬದಲು, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ. ನಮ್ಮ ಸರ್ಕಾರ ಇಂಥ ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ನೀಡುವವರೆಗೆ ಕಾನೂನನ್ನು ಬಿಗಿಗೊಳಿಸಿದೆ. ಮಹಿಳೆಯರ ಸುರಕ್ಷೆ ಮತ್ತು ಹಿತಕ್ಕಾಗಿ ನಮ್ಮ ಸರ್ಕಾರ ಅತ್ಯಂತ ಸಂವೇದನಶೀಲತೆಯಿಂದ ವರ್ತಿಸಿದೆ ಎಂದು ಹೇಳಿದರು.
ದಲಿತ ಮಹಿಳೆಯ ಅತ್ಯಾಚಾರದ ಸುದ್ದಿ ಬಹಿರಂಗವಾದರೆ ಎಲ್ಲಿ ಮತಗಳ ಮೇಲೆ ಎಲ್ಲಿ ಪರಿಣಾಮ ಬೀರುವುದೋ ಎಂದು ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರ್ಕಾರ ಬಾಯಿ ಮುಚ್ಚಿ ಕುಳಿತಿತ್ತು, ಕೇಸನ್ನು ದಾಖಲಿಸಿಕೊಳ್ಳದೆ ಹತ್ತಿಕ್ಕಿ ಹಾಕಲು ಯತ್ನಿಸಿತ್ತು. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಪ್ರಧಾನಿ ಮೋದಿ ಅವರು ಟೀಕಾ ಪ್ರಹಾರ ಮಾಡಿದರು.
ನಾನು ಗುಜರಾತ್ ನಲ್ಲಿ ಅತ್ಯಂತ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದೆ, ಕಳೆದ 5 ವರ್ಷಗಳಿಂದ ಭಾರತದ ಪ್ರಧಾನಿಯಾಗಿದ್ದೇನೆ. ನನ್ನ ಬ್ಯಾಂಕ್ ಬ್ಯಾಲನ್ಸ್ ನೋಡಿ. ನನ್ನ ಹೆಸರಲ್ಲಿ ಯಾವುದಾದರೂ ಬಂಗ್ಲೆ ಇದೆಯಾ? ನಾನು ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಏನನ್ನೂ ಉಳಿಸಿಲ್ಲ. ನಾನೇನು ಮಾಡಿದ್ದರೂ ಅದು ಇಡೀ ದೇಶಕ್ಕಾಗಿ ಮತ್ತು ಇಲ್ಲಿನ ಜನತೆಗಾಗಿ ಎಂದು ಹೇಳಿದರು.
Comments are closed.