ಕರ್ನಾಟಕ

ಕುಂದಗೋಳ ಉಪ ಚುನಾವಣೆಯ ಬಂಡಾಯ ಶಮನ ಮಾಡಿ ‘ಟ್ರಬಲ್ ಶೂಟರ್’ ಆಗಿ ಹೊರ ಹೊಮ್ಮಿದ ಜಮೀರ್ ಅಹ್ಮದ್

Pinterest LinkedIn Tumblr


ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ 6 ಮಂದಿ ಪಕ್ಷದ ಮುಖಂಡರನ್ನು ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಯಶಸ್ವಿಯಾಗಿದ್ದಾರೆ.

ಸಚಿವ ಡಿಕೆ ಶಿವಕುಮಾರ್ ಅವರಿಗೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಕೆ ಮಾಡಿದ್ದ ಅಷ್ಟು ಮಂದಿಯ ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಲು ಜಮೀರ್ ಸಫಲರಾಗಿದ್ದು, ಕುಂದಗೋಳ ತಾಲೂಕು ಅಧಿಕಾರಿಗಳ ಕಚೇರಿಗೆ ಕರೆದುಕೊಂಡ ಬಂದು ನಾಮಪತ್ರ ವಾಪಸ್ ಪಡೆದರು.

ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಬಂಡಾಯ ನಾಯಕರು ಅಸಮಾಧಾನದಿಂದ ನಾಮಪತ್ರ ಸಲ್ಲಿಸಿದ್ದರು. ಒಟ್ಟಾರೆ ಜೆಡಿಎಸ್ ಅಭ್ಯರ್ಥಿ ಸೇರಿ 9 ಮಂದಿ ಇಂದು ನಾಮಪತ್ರ ವಾಪಸ್ ಪಡೆದು ಪಕ್ಷದ ಮೇಲೆ ಅಭಿಮಾನ ತೋರಿದ್ದಾರೆ ಎಂದು ಸ್ಪಷ್ಟಪಡಿಸಿದರು. ಕೈ ಬಂಡಾಯ ಅಭ್ಯರ್ಥಿಗಳಾಗಿದ್ದ ಸುರೇಶ್ ಸವಣೂರು, ಹೆಚ್.ಎಲ್.ನದಾಫ್, ಚಂದ್ರಶೇಖರ್ ಜುಟ್ಟಲ್, ಜೆ.ಡಿ.ಘೋರ್ಪಡೆ, ಶಿವಾನಂದ ಬೆಂತೂರು, ವಿಶ್ವಾನಥ ಕುಬಿಹಾಳ ಸೇರಿದಂತೆ 9 ಮಂದಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.

ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಮುಖಂಡರು ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದರು. ಸದ್ಯ ಪಕ್ಷದಲ್ಲಿ ಉಂಟಾಗಿದ್ದ ಬಂಡಾಯವನ್ನು ತಿಳಿಗೊಳಿಸಿ ಜಮೀರ್ ಅಹ್ಮದ್ ಅವರು ಮತ್ತೊಬ್ಬ ಟ್ರಬಲ್ ಶೂಟರ್ ಆಗಿ ಹೊರ ಹೊರಹೊಮ್ಮಿದ್ದಾರೆ.

Comments are closed.