ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದೆ. ರಾಜ್ಯದಲ್ಲಿ ಈ ಬಾರಿ ಫಲಿತಾಂಶ ಶೇ. 1.8ರಷ್ಟು ಹೆಚ್ಚಳಗೊಂಡಿದ್ದು, ಶೇ.73.70ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಇನ್ನು ಶೇ 27.30 ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ನಿರಾಸೆ ಹೊಂದಿ ಜೀವನದಲ್ಲಿ ಎಲ್ಲಾ ಮುಗಿದು ಹೋಯಿತು ಎಂದು ಆತಂಕ ಪಡುವ ಅಗತ್ಯವಿಲ್ಲ. ಎಸ್ಎಸ್ಎಲ್ಸಿ ಎಂಬುದು ವಿದ್ಯಾರ್ಥಿ ಜೀವನದ ಒಂದು ಘಟ್ಟ ಅಷ್ಟೇ. ಅದೇ ಜೀವನ ಅಲ್ಲ ಎಂಬುದು ವಿದ್ಯಾರ್ಥಿಗಳಲ್ಲಿ ಅರಿತುಕೊಳ್ಳಬೇಕು.
ವಿದ್ಯಾರ್ಥಿಗಳು ಫೇಲ್ ಆಯಿತು ಎಂದು ಬೇಸರ ಪಟ್ಟುಕೊಳ್ಳುವ ಬದಲು ಮುಂದಿನ ಬಾರಿ ಹೆಚ್ಚಿನ ಪರಿಶ್ರಮವಹಿಸಿ ಪರೀಕ್ಷೆ ಎದುರಿಸಿದರೆ ಜೀವನದಲ್ಲಿ ಯಶಸ್ವಿಯಾಗುವುದು ಖಂಡಿತ. ಈ ಬಗ್ಗೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಧೃತಿಗೆಡಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆತ್ಮಸ್ಥೈರ್ಯದ ಮಾತುಗಳನ್ನು ನಪಾಸಾದ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶುಭಾಶಯ ಹೇಳುವ ಜೊತೆಗೆ ಎಸ್ಎಸ್ಎಸ್ಸಿ ಪೂರಕ ಪರೀಕ್ಷೆಗೆ ಅವಕಾಶ ಇದ್ದು, ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಉತ್ತೀರ್ಣ ಅಭ್ಯರ್ಥಿಗಳ ಜೊತೆಯೇ ಕಾಲೇಜು ಮೆಟ್ಟಿಲು ಹತ್ತಬಹುದು. ಹೀಗಾಗಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಸಲಹೆ ನೀಡಿದ್ದಾರೆ.
ಇದರ ಜೊತೆ ಈ ಬಾರಿ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ತ್ವರಿತವಾಗಿ ಬಿಡುಗಡೆಯಾಗಿರುವುದು ಸಂತಸ ನೀಡಿದ್ದು, ಈ ಕೆಲಸವನ್ನು ಶೀಘ್ರವಾಗಿ ಯಶಸ್ವಿಯಾಗಿ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಗೂ ಧನ್ಯವಾದ ತಿಳಿಸಿದ್ದಾರೆ.
ರಾಜ್ಯದಲ್ಲಿ ತಂತ್ರಜ್ಞಾನದ ನೆರವು ಹಾಗೂ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆತಾಗ ಪರಿಣಾಮಕಾರಿ ಕಾರ್ಯನಿರ್ವಹಣೆ ಸಾಧ್ಯ ಎನ್ನುವುದಕ್ಕೆ ಈ ವರ್ಷದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷಾ ಪ್ರಕ್ರಿಯೆ ನಿರ್ವಹಣೆ ಉತ್ತಮ ನಿದರ್ಶನ ಎಂದು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Comments are closed.