ಕರ್ನಾಟಕ

ಐಟಿ ದಾಳಿಗೆ ಬಂದು 2 ಅಕ್ಕಿ ಮೂಟೆ ಎತ್ತಿಕೊಂಡು ಹೋಗಿದ್ದಾರೆ; ರೇವಣ್ಣ

Pinterest LinkedIn Tumblr
H D Revanna

ಹಾಸನ: ಹಾಸನ ರಿಂಗ್ ರಸ್ತೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೆಗೆ 7 ಕೋಟಿ ರೂ. ಹೋಗಿದೆ. ಐಟಿಯವರು ಆಗ ಏನು ಮಾಡುತ್ತಿದ್ದರು? ನಮ್ಮ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ಮಾಡಲು ಬಂದು 2 ಚೀಲ ಅಕ್ಕಿ ಮೂಟೆಯನ್ನು ಹೊತ್ತುಕೊಂಡು ಹೋಗಿದ್ದಾರೆ. ಐಟಿಯವರಿಗೆ ನಾಚಿಗೆಯಾಗಬೇಕು ಎಂದು ಆದಾಯ ತೆರಿಗೆ ಇಲಾಖೆ ವಿರುದ್ಧ ಸಚಿವ ಎಚ್​.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಐಟಿ ವಿರುದ್ಧ ಹರಿಹಾಯ್ದಿರುವ ಸಚಿವ ರೇವಣ್ಣ, ಇದು ಬಿಜೆಪಿಯ ಅಂತ್ಯಕಾಲ. ಇದೆಲ್ಲ ಹೆಚ್ಚು ದಿನ ನಡೆಯುವುದಿಲ್ಲ. ಬಿಜೆಪಿ ನಾಯಕರ ಮನೆಯಲ್ಲಿ ದುಡ್ಡಿಲ್ಲವಾ? ಅವರ ಮನೆ ಮೇಲ್ಯಾಕೆ ದಾಳಿ ಮಾಡುತ್ತಿಲ್ಲ? ಯಡಿಯೂರಪ್ಪನ ಮಗನ ಕ್ಷೇತ್ರದಲ್ಲಿ ಹಣ ಇಲ್ವ? ಚೆಕ್​ನಲ್ಲಿ ಹಣ ಪಡೆದು ಜೈಲಿಗೆ ಹೋಗಿ ಬಂದವರು ಏನು ಕ್ಲೀನ್ ಹ್ಯಾಂಡಾ? ವಿರೋಧ ಪಕ್ಷದವರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಐಟಿಯನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಚುನಾವಣೆಗೆ ಕೆಲಸ ಮಾಡಲು ಹೋಗಬಾರದು ಎಂದು ಹೀಗೆ ಐಟಿ ದಾಳಿ ಮಾಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಗೊಣ್ಣೆ ಸುರಿಸಿಕೊಂಡು ನಿಂತಿರುತ್ತಿದ್ದ ರೇವಣ್ಣನನ್ನು ಡೈರಿ ಅಧ್ಯಕ್ಷನನ್ನಾಗಿ ಮಾಡಿದ್ದೇ ನಾನು ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಎ. ಮಂಜುಗೆ ತಿರುಗೇಟು ನೀಡಿರುವ ಸಚಿವ ಎಚ್​.ಡಿ. ರೇವಣ್ಣ, ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ನಾನು ಡೈರಿ ಅಧ್ಯಕ್ಷನಾಗಿದ್ದೆ. ನಾನು ಸಿಎಂ ಮಗನಾಗಿದ್ದರೂ ಆ ಮಂಜು ಬಳಿ ಹೋಗಿ ಡೈರಿ ಅಧ್ಯಕ್ಷನನ್ನಾಗಿ ಮಾಡು ಅಂತ ಕೇಳಿದ್ದೆ ಎಂದರೆ ಯಾರಾದರೂ ನಂಬುವಂತಹ ಮಾತಾ? ಸೋಲಿನ ಭೀತಿಯಲ್ಲಿ ಎ. ಮಂಜು ಇಂತಹ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಶೀಘ್ರದಲ್ಲೇ ಆಡಿಯೋ ರಿಲೀಸ್​ ಮಾಡ್ತೀನಿ:

ಚುನಾವಣೆ ಮುಖ್ಯ ಆಯುಕ್ತರು ಜಿಲ್ಲಾಧಿಕಾರಿಗೆ ಏನೇನು ಮಾತಾಡಿದ್ದಾರೆ ಎಂದು ಆಮೇಲೆ ಹೇಳುತ್ತೇನೆ. ಚುನಾವಣೆ ಮುಖ್ಯ ಆಯುಕ್ತರೇ ಜಿಲ್ಲಾಧಿಕಾರಿಗೆ ಇಂತಹ ಕೇಸ್​ಗೆ ಹೀಗೆ ವರದಿ ಹಾಕಿ ಅಂತ ಹೇಳಿದ್ದಾರೆ. ಆ ಫೋನ್ ಸಂಭಾಷಣೆಯ ಆಡಿಯೋ ನನ್ನ ಬಳಿ ಇದೆ. ಚುನಾವಣೆ ಮುಗಿದ ಮೇಲೆ ನಾನು ಅದನ್ನು ನೀಡುತ್ತೇನೆ. ನಾನೇನಾದರೂ ಲೋಕೋಪಯೋಗಿ ಇಲಾಖೆಯಲ್ಲಿ ಮುಂಗಡ ಹಣ ಪಡೆದಿದ್ದರೆ ಸಿಬಿಐ ತನಿಖೆಯಾಗಲಿ. ಜಿಲ್ಲೆಯ ಜನತೆ ಮತ್ತು ಕಾರ್ಯಕರ್ತರು ಯಾವುದಕ್ಕೂ ಹೆದರಬಾರದು ಎಂದಿದ್ದಾರೆ.

Comments are closed.