ಕರ್ನಾಟಕ

ಸಂಸದ ಪ್ರತಾಪ್​ ಸಿಂಹನ ವಿರುದ್ಧ ತಿರುಗಿ ಬಿದ್ದ ಬ್ರಾಹ್ಮಣ ಸಭಾ

Pinterest LinkedIn Tumblr


ಮೈಸೂರು: ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್​ ಸಿಂಹ ಅವರಿಗೆ ಈಗ ಹೊಸ ತಲೆನೋವು ಆರಂಭವಾಗಿದೆ. ಮೈಸೂರು ಜಿಲ್ಲಾ ಬ್ರಾಹ್ಮಣ ಮಹಸಭಾ ಸದಸ್ಯರು ಪ್ರತಾಪ್​ ಸಿಂಹ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರ ಪರ ಮತ ಪ್ರಚಾರ ನಡೆಸುತ್ತೇವೆ ಎಂದಿದ್ದಾರೆ.

ಮಹಾಸಭಾದ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ಪ ಪತ್ರಿಕಾಗೋಷ್ಠಿ ಕರೆದು ಈ ವಿಚಾರ ಬಹಿರಂಗಪಡಿಸಿದ್ದಾರೆ. ಅಟಲ್ ಜೀ ಪ್ರಶಸ್ತಿ ಪ್ರಧಾನ ಸಮಾರಂಭ ಸೇರಿ ಸುಮಾರು 72 ಕಾರ್ಯಕ್ರಮಗಳಿಗೆ ಪ್ರತಾಪ್​ ಸಿಂಹ ಅವರನ್ನು ಆಹ್ವಾನಿಸಲಾಗಿತ್ತಂತೆ. ಕ್ಷೇತ್ರದಲ್ಲೇ ಇದ್ದ ಹೊರತಾಗಿಯೂ ಅವರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಇದು ಮಹಾಸಭಾ ಸದಸ್ಯರ ಅಸಮಾಧಾನಕ್ಕೆ ಮುಖ್ಯ ಕಾರಣ.

ಪ್ರತಾಪ್​ ಸಿಂಹ ಏಕಾಏಕಿ ಬಿಜೆಪಿ ಸೇರಿ ಸಂಸದರಾಗಿದ್ದಾರೆ ಎಂದು ನಟರಾಜ್​ ಕಿಡಿಕಾರಿದ್ದಾರೆ. “ಬಿಜೆಪಿ ನಾಯಕನಾಗಲು ನೀವೇನು ಪಕ್ಷದ ಕಚೇರಿ ಕಸ ಗುಡಿಸಿದ್ರಾ? ಅಥವಾ ಬಾವುಟ ಕಟ್ಟಿದ್ದೀರಾ? ಹಾಗೇನು ಇಲ್ಲ. ನೀವು ರಾತ್ರೋ ರಾತ್ರಿ ನಾಯಕರಾದವರು. ಪಕ್ಷ ಸಂಘಟನೆಗೆ ನಾವು ಸಾಕಷ್ಟು ಶ್ರಮಿಸಿದ್ದೇವೆ. ನಮ್ಮ ಸಮಾಜವನ್ನೇ ಕೀಳಾಗಿ ಕಾಣುವ ನಿಮಗೆ ಮತ ನೀಡುವುದಿಲ್ಲ,” ಎಂದು ನಟರಾಜ್​ ಘೋಷಿಸಿದರು.

ಇದೇ ವೇಳೆ ಮೈತ್ರಿ ಅಭ್ಯರ್ಥಿ ಸಿಎಚ್​ ವಿಜಯ್​ಶಂಕರ್​ ಅವರಿಗೆ ಮತ ನೀಡುವಂತೆ ನಟರಾಜ್ ಕೋರಿದರು. “ಕ್ಷೇತ್ರದಲ್ಲಿರುವ ನಮ್ಮ ಸಮಾಜದ ಮತಗಳು ವಿಜಯ್​ಶಂಕರ್​ಗೆ ಬೀಳುವಂತೆ ನೋಡಿಕೊಳ್ಳುತ್ತಿದ್ದೇವೆ. 22 ತಂಡಗಳನ್ನು ರಚಿಸಿಕೊಂಡು ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ,” ಎಂದರು ಅವರು.

ಈ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಸುಮಾರು 2.45 ಲಕ್ಷ ಮತದಾರರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಈಗ ಬ್ರಾಹ್ಮಣ ಸಮುದಾಯದವರು ತಿರುಗಿ ಬಿದ್ದಿರುವುದು ಪ್ರತಾಪ್​ ಸಿಂಹಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.

Comments are closed.