ಕರ್ನಾಟಕ

ಒಂದೆರಡು ಪ್ರಶ್ನೆ ಕೇಳುತ್ತೇನೆ, ಉತ್ತರ ಹೇಳುತ್ತೀರಾ?: ಸುಮಲತಾ ಅಂಬರೀಷ್

Pinterest LinkedIn Tumblr


ಮಂಡ್ಯ: ನಾನೊಂದೆರಡು ಪ್ರಶ್ನೆ ಕೇಳುತ್ತೇನೆ. ಸರಿಯಾದ ಉತ್ತರ ಹೇಳುತ್ತೀರಾ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತದಾರರಿಗೆ ಪ್ರಶ್ನೆ ಕೇಳಿದ್ದಾರೆ.

ಮದ್ದೂರು ತಾಲೂಕಿನ ಮಾದರಹಳ್ಳಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಸುಮಲತಾ ಅವರು, ನನ್ನ ಕ್ರಮ ಸಂಖ್ಯೆ ಎಷ್ಟು? ನನ್ನ ಚಿಹ್ನೆ ಯಾವುದು ಎಂದು ಪ್ರಶ್ನಿಸಿದರು. ಈ ಮೂಲಕ ತಮ್ಮ ಕ್ರಮ ಸಂಖ್ಯೆ ಹಾಗೂ ಚಿಹ್ನೆಯನ್ನು ಜನರ ಮನದಲ್ಲಿ ಬಿತ್ತಿದರು.

ಸುಮಲತಾ ಅವರು ನನ್ನ ಕ್ರಮ ಸಂಖ್ಯೆ ಎಷ್ಟು ಎಂದು ಪ್ರಶ್ನಿಸುತ್ತಿದ್ದಂತೆ ಗ್ರಾಮಸ್ಥರು 20 ಎಂದು ಕೂಗಿದರು. ಪುನಃ ಚಿಹ್ನೆ ಯಾವುದು ಎಂದು ಸುಮಲತಾ ಕೇಳಿದರು. ತಕ್ಷಣವೇ ಸ್ವಾಭಿಮಾನದ ಕಹಳೆ ಎನ್ನುವ ಕೂಗು ಕೇಳಿಬಂತು. ಆಗ ಸುಮಲತಾ ಅವರು ಕರೆಕ್ಟ್, ಮಂಡ್ಯದ ಸ್ವಾಭಿಮಾನ ಉಳಿಸುತ್ತೀರಾ? ಅಂಬರೀಶಣ್ಣನ ಪ್ರೀತಿ ಉಳಿಸುತ್ತೀರಾ? ನನಗೆ ವೋಟ್ ಹಾಕುತ್ತೀರಾ? ಎಂದಾಗಲೂ ಗ್ರಾಮಸ್ಥರು ಹೌದು, ಹೌದು ಪ್ರತಿಕ್ರಿಯೆ ನೀಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಸುಮಲತಾ ಹೆಸರಿನ 4 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ. ಸುಮಲತಾ ಅಂಬರೀಶ್, ಕೆಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಎಂ.ಸುಮಲತಾ, ರಾಮನಗರ ಜಿಲ್ಲೆಯ ಕನಕಪುರದ ಪಿ.ಸುಮಲತಾ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಗ್ರಾಮದ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡುವುದಕ್ಕಾಗಿ ಸುಮಲತಾ ಎಂಬ ಹೆಸರಿನ ಮೂರು ಮಂದಿಯನ್ನು ಮೈತ್ರಿ ನಾಯಕರು ಚುನಾವಣಾ ಕಣಕ್ಕೆ ಇಳಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಮತದಾರರಿಗೆ ಯಾವುದೇ ರೀತಿಯ ಗೊಂದಲ ಉಂಟಾಗಬಾರದು ಎನ್ನುವ ಉದ್ದೇಶದಿಂದ ಸುಮಲತಾ ಅಂಬರೀಶ್ ಅವರು ತಮ್ಮ ಕ್ರಮ ಸಂಖ್ಯೆ ಹಾಗೂ ಚಿಹ್ನೆಯ ಬಗ್ಗೆ ಮತದಾರರಿಗೆ ತಿಳಿಸುತ್ತಿದ್ದಾರೆ. ಸುಮಲತಾ ಹೆಸರಿನ ಮೂವರು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರ ವಿರುದ್ಧ ಸುಮಲತಾ ಅಂಬರೀಶ್ ಅವರು ಈ ಹಿಂದೆ ವಾಗ್ದಾಳಿ ನಡೆಸಿದ್ದರು.

Comments are closed.