ಕರ್ನಾಟಕ

ರಾಜ್ಯದಲ್ಲಿ ಮೈತ್ರಿ ಸೋಲಿಸಲು ಬಿಜೆಪಿ ಸಜ್ಜು: 4 ದಿನ ಮೋದಿ ಚುನಾವಣಾ ಪ್ರಚಾರ

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಬಿರುಸಾಗಿ ಪ್ರಚಾರ ನಡೆಸುತ್ತಿವೆ. ಸದ್ಯ ಮತ್ತೊಮ್ಮೆ ಗದ್ದುಗೆ ಹಿಡಿಯಲು ಮುಂದಾಗಿರುವ ಬಿಜೆಪಿ ಸಾಲುಸಾಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ತಮ್ಮ ಪಕ್ಷದ ಪರವಾಗಿ ಮತಯಾಚನೆ ಮಾಡಲಿಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ಧಾರೆ. ರಾಜ್ಯಾದ್ಯಂತ ಸಂಚರಿಸಿ ಒಟ್ಟು 4 ದಿನಗಳ ಕಾಲ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಮಾಡಲಿದ್ಧಾರೆ ಎಂದು  ಬಿಜೆಪಿ ಮೂಲಗಳು ತಿಳಿಸಿವೆ.

ಚುನಾವಣೆ ವಿಚಾರವಾಗಿಯೇ ಇಂದು ಬಿಜೆಪಿ ನಾಯಕರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಧ್ಯಮದವರ ಜತೆಗೆ ಮಾತಾಡಿದ ಬಿಜೆಪಿ ಹಿರಿಯ ನಾಯಕ ಡಿ.ವಿ ಸದಾನಂದಗೌಡ ಅವರು, ಪ್ರಧಾನಿ ಮೋದಿಯವರು ರಾಜ್ಯದಲ್ಲಿ ನಾಲ್ಕು ದಿನ ಪ್ರಚಾರ ಮಾಡಲಿದ್ಧಾರೆ. ಬೆಂಗಳೂರು ವ್ಯಾಪ್ತಿಗೆ ಸೇರಿದ ನಾಲ್ಕು ಲೋಕಸಭಾ ಕ್ಷೇತ್ರಗಳು ಮತ್ತು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಪರವಾಗಿ ಮೊದಲಿಗೆ ಮೋದಿಯವರು ಪ್ರಚಾರ ಮಾಡಲಿದ್ಧಾರೆ ಎಂದರು.

ಇನ್ನುಇದೇ 13 ರಂದು ಅರಮನೆ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿಯವರು ಭಾಷಣ ಮಾಡಲಿದ್ದಾರೆ. ರಾಜ್ಯಾದ್ಯಂತ ಮೋದಿಯವರ ಸಾರ್ವಜನಿಕ ಸಮಾವೇಶಗಳನ್ನು ಯಶಸ್ವಿಗೊಳಿಸಲು ಒಟ್ಟು 32 ಸಮಿತಿಗಳನ್ನು ರಚಿಸಲಾಗಿದೆ. ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿಯನ್ನು ಬಿಜೆಪಿ ಸೋಲಿಸಲಿದೆ. ಪ್ರಧಾನಿ ಮೋದಿ ಅಲೆ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳು ಗೆಲ್ಲಲು ಸಹಕಾರಿಯಾಗಲಿದೆ ಎಂದು ಸದಾನಂದ ಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ದೇಶದಲ್ಲಿ ಮತ್ತೆ ಅಧಿಕ್ಕಾರಕ್ಕೇರಲು ಮುಂದಾಗಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನಿಂದಲೇ ಗೆಲ್ಲಲು ಸಂಚು ರೂಪಿಸಿದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ಸೇರಿದಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಂತಹ ಗಣ್ಯರು ಭರ್ಜರಿ ಪ್ರಚಾರ ಮಾಡಲಿದ್ದಾರೆ. ಇವರನ್ನೇ ಹೆಚ್ಚೆಚ್ಚು ಸಮಾವೇಶಗಳಿಗೆ ಕರೆಸುವ ಮೂಲಕ ಬಿಜೆಪಿ ಚುನಾವಣೆ ಗೆಲ್ಲಲು ತಂತ್ರ ಹಣೆದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​​ ಶಾ ಅವರು ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದವೆರಗೂ ಪ್ರಚಾರ ಮಾಡಲಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಈ ಜೋಡಿ ಭಾಗಿಯಾಗಲಿದೆ. ಅಲ್ಲಿ ಜನರನ್ನುದ್ದೇಶಿಸಿ ಮಾತನಾಡುವ ವೇಳೆ ಬಿಜೆಪಿ ಪಕ್ಷದ ಪರವಾಗಿ ಮತಯಾಚಿಸಲಿದ್ಧಾರೆ. ಇಬ್ಬರ ಜತೆಗೆ ಮತ್ತೋರ್ವ ಬಿಜೆಪಿ ನಾಯಕ ಸಿಎಂ ಯೋಗಿ ಆದಿತ್ಯನಾಥ್​​​​ ಅವರಿಗೆ ಹೆಚ್ಚಿನ ಪ್ರಚಾರದ ಜವಾಬ್ದಾರಿ ನೀಡಲಿದೆ ಎಂದು ತಿಳಿದು ಬಂದಿದೆ.

ಚುನಾವಣೆಯಲ್ಲಿ ಕಾಂಗ್ರೆಸ್​​ ಸೇರಿದಂತೆ ಎಲ್ಲಾ ಪ್ರಾದೇಶಿಕ ಪಕ್ಷಗಳು ಪ್ರಧಾನಿ ಮೋದಿ ಸರ್ಕಾರವನ್ನು ಬಗ್ಗು ಬಡೆಯಲು ಮುಂದಾಗಿವೆ. ಇದೀಗ ಕೇಂದ್ರ ವಿಕ್ಷಗಳಿಗೆ ಸೆಡ್ಡು ಹೊಡೆದು ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಬಿಜೆಪಿ ಹಲವು ರಣತಂತ್ರಗಳನ್ನು ರೂಪಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದ 123 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು “ಮಿಷನ್‌ 123′ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ 150 ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎನ್ನುತ್ತಿವೆ ಮೂಲಗಳು.

Comments are closed.