ಕರ್ನಾಟಕ

ರಬೆಲ್ ಸ್ಟಾರ್ ಅಂಬರೀಷ್‌ ಆತ್ಮಕ್ಕೆ ಶಾಂತಿ ದೊರಕಿಸಲು ನಿಖಿಲ್‌ ಗೆಲ್ಲಿಸಿ: ಡಿಕೆಶಿ

Pinterest LinkedIn Tumblr


ಮಂಡ್ಯ: ದೇಶದ ಐಕ್ಯತೆ, ಸಮಗ್ರತೆಗಾಗಿ ಈ ಚುನಾವಣೆ ನಡೆಯುತ್ತಿದೆ. ಹೀಗಾಗಿ ಮತದಾರರು ಯಾವುದೇ ಕೋಪ, ದ್ವೇಷ ಮತ್ತು ಆವೇಶದಿಂದ ಹೆಜ್ಜೆ ಇಡಬೇಡಿ. ಪ್ರಜ್ಞಾವಂತಿಕೆಯಿಂದ ಚಿಂತಿಸಿ ತೀರ್ಮಾನ ತೆಗೆದುಕೊಳ್ಳಿ. ವಿದ್ಯಾವಂತರು, ಬುದ್ಧಿವಂತಿಕೆ ಇಲ್ಲದಿದ್ದರೆ ನಡೆಯುತ್ತೆ. ಆದರೆ, ಪ್ರಜ್ಞಾವಂತಿಕ ಬಹಳ ಮುಖ್ಯ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಮಂಡ್ಯದಲ್ಲಿ ಸೋಮವಾರ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ನಾಮಪತ್ರ ಸಲ್ಲಿಕೆ ಬಳಿಕ ಉಭಯ ಪಕ್ಷಗಳ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಇದು ಮೋದಿ-ಯಡಿಯೂರಪ್ಪ ಹಾಗೂ ರಾಹುಲ್‌ಗಾಂಧಿ-ದೇವೇಗೌಡರ ನಡುವೆ ನಡೆಯುತ್ತಿರುವ ಹೋರಾಟ. ಎಷ್ಟೇ ಪ್ರಯತ್ನ ಪಟ್ಟರೂ ಬಿಜೆಪಿ ತಂತ್ರ-ಕುತಂತ್ರ ಫಲಿಸಲ್ಲ. ಅದರಲ್ಲೂ ಮಂಡ್ಯದಲ್ಲಿ ನಡೆಯೋದಿಲ್ಲ ಎಂದರು.

ನಿಮ್ಮ ಹೆಣ ಹೊರುವವರು ಹಾಗೂ ಪಲ್ಲಕ್ಕಿ ಹೊರುವವರು ನಾವೇ, ಇದನ್ನು ತಿಳಿದುಕೊಳ್ಳಿ. ಸಮ್ಮಿಶ್ರ ಸರಕಾರ ರಚನೆಯಾದಾಗ ಕುಮಾರಸ್ವಾಮಿ ಅವರಿಗೆ ಅಂಬರೀಷ್ ಆಶೀರ್ವಾದ ಮಾಡಲಿಲ್ಲವೇ? ರಾಜಕೀಯವಾಗಿ ಏನೇ ಭಿನ್ನಾಬಿಪ್ರಾಯವಿದ್ದರೂ ಅಂಬರೀಷ್ ಅವರು ಸತ್ತಾಗ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಯಿತು. ರಾಜಕಾರಣದಲ್ಲಿ ಹೃದಯ ಶ್ರೀಮಂತಿಕೆ ಇರಬೇಕು. ಅದು ಕುಮಾರಸ್ವಾಮಿ ಅವರಲ್ಲಿದೆ ಎಂದು ಹೊಗಳಿದರು.

ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತಂದು ಜನರಿಗೆ ಅಂತಿಮ ದರ್ಶನ ಪಡೆಯುವ ಅವಕಾಶ ಮಾಡಿಕೊಟ್ಟವರು ಕುಮಾರಸ್ವಾಮಿ. ಅಂತ್ಯಸಂಸ್ಕಾರವನ್ನೂ ಅಷ್ಟೇ ಗೌರವಯುತವಾಗಿ ನಡೆಸಿ ಒಬ್ಬ ಕಲಾವಿದನಿಗೆ ಸಲ್ಲಿಸಬೇಕಾದ ಗೌರವವನ್ನು ಪ್ರಾಮಾಣಿಕವಾಗಿ ಸಲ್ಲಿಸಿದ್ದಾರೆ. ಅಂಬರೀಶ್ ಬಗ್ಗೆ ನಮಗೂ ವಿಶೇಷ ಅಭಿಮಾನ, ಗೌರವವಿದೆ. ಹಾಗೆಂದು ವ್ಯಕ್ತಿ ಪೂಜೆ ಮಾಡುವವನು ನಾನಲ್ಲ. ಪಕ್ಷ ಪೂಜೆ ಮಾಡೋನು ನಾನು. ಎಂದಿಗೂ ಪಕ್ಷ ನಿಷ್ಠೆಗೆ ನಾನು ಬದ್ಧ ಎಂದರು.

ಅಂಬರೀಷ್ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನಿಖಿಲ್ ಅವರನ್ನು ಜನರು ಬೆಂಬಲಿಸಬೇಕು. ಚುನಾವಣೆಗೂ ಮೊದಲೇ ಮಂಡ್ಯದ ಸೀಟನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಹೀಗಿರುವಾಗ ಈಗ ಕಾಂಗ್ರೆಸ್‌ಗೆ ಬಿಟ್ಟುಕೊಡಿ ಎಂದು ಕೇಳುವುದು ಧರ್ಮವಲ್ಲ. ಸುಮಲತಾ ಅವರು ಕಾಂಗ್ರೆಸ್ ಅಥವಾ ಜೆಡಿಎಸ್‌ನಿಂದ ಮೈಸೂರು, ಬೆಂಗಳೂರಿನಿಂದ ಬೇಕಾದರೂ ಚುನಾವಣೆಗೆ ಸ್ಪರ್ಧಿಸಿ. ಟಿಕೆಟ್ ಕೊಟ್ಟು ಗೆಲ್ಲಿಸುತ್ತೇವೆ. ಬೇಕಾದರೆ ರಾಜ್ಯಸಭೆಗೆ ಕಳುಹಿಸುತ್ತೇವೆ. ವಿಧಾನ ಪರಿಷತ್‌ಗೆ ಆಯ್ಕೆ ಮಾಡುತ್ತೇವೆ ಎಂದೆಲ್ಲಾ ಹೇಳಿದ್ದೆವು. ಆದರೆ, ಅವರು ಅದನ್ನೆಲ್ಲಾ ತಿರಸ್ಕರಿಸಿ ಹೋಗಿದ್ದಾರೆ ಎಂದು ಆಕ್ಷೇಪಿಸಿದರು.

ಸುಮಲತಾ ಅವರಿಗೆ ಯಾರೋ ಹಿಂದೆ ನಿಂತು ಗೊಂಬೆಗೆ ಕೀ ಕೊಟ್ಟಂತೆ ಕೊಡುತ್ತಿದ್ದಾರೆ. ಅವರು ಯಾರೂ ಅಂತ ನಮಗೆ ಗೊತ್ತಿದೆ. ಆದರೆ, ಬೀಗ ಎಷ್ಟೇ ದೊಡ್ಡದಿದ್ದರೂ ಕೀಲಿ ಕೈ ಮಾತ್ರ ನಿಮ್ಮ ಕೈಯಲ್ಲಿದೆ. ಚುನಾವಣೆಯಲ್ಲಿ ಅದನ್ನು ಸರಿಯಾಗಿ ಬಳಸಿ. ನಿಖಿಲ್ ಅವರನ್ನು ಬೆಂಗಳೂರು, ತುಮಕೂರು, ಮೈಸೂರಿನಿಂದ ಬೇಕಾದರೂ ಕಣಕ್ಕಿಳಿಸಬಹುದಿತ್ತು. ಆದರೆ, ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಒತ್ತಾಯದಂತೆ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲಾಗಿದೆ. ನಿಮ್ಮ ಮಡಿಲಿಗೆ ನಿಖಿಲ್ ಅವರನ್ನು ಹಾಕಿದ್ದೇವೆ. ಅವರಿಗೆ ಶಕ್ತಿ ತುಂಬಿ. ಆತ್ಮವಂಚನೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ನಾವಾಗಿಯೆ ಜೆಡಿಎಸ್‌ ಅನ್ನು ಅಹ್ವಾನಿಸಿ ಬೇಷರತ್ ಬೆಂಬಲದೊಂದಿಗೆ ಮೈತ್ರಿ ಸರಕಾರ ರಚಿಸಿದ್ದೇವೆ. ಇನ್ನೈದು ವರ್ಷ ಕುಮಾರಸ್ವಾಮಿ ಅವರೇ ಸಿಎಂ ಆಗಿರುತ್ತಾರೆ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ಜಾತ್ಯತೀತ ತತ್ವಕ್ಕೆ ನಾವೆಲ್ಲಾ ಬದ್ಧ ಎಂದು ಡಿಕೆ ಶಿವಕುಮಾರ್‌ ತಿಳಿಸಿದರು.

Comments are closed.