ಕರ್ನಾಟಕ

ಬೆಂಗಳೂರಿನಲ್ಲಿ ಬಾಲಕಿ ಮೇಲೆ ದಾಳಿ ಮಾಡಿದ ಸಾಕುನಾಯಿ; ಮಾಲೀಕರ ವಿರುದ್ಧ ಎಫ್ಐಆರ್ ದಾಖಲು

Pinterest LinkedIn Tumblr

ಬೆಂಗಳೂರು: ಪಕ್ಕದ ಮನೆಯ ಸಾಕು ನಾಯಿ ತಮ್ಮ 6 ವರ್ಷದ ಮಗಳಿಗೆ ಕಚ್ಚಿ ಗಾಯಮಾಡಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರ್ ಟಿ ನಗರ ಸಮೀಪ ಗಂಗಾನಗರದಲ್ಲಿ ಈ ಘಟನೆ ನಡೆದಿದ್ದು ಮನೆಯ ಹೊರಗೆ ಮಗು ಆಟವಾಡುತ್ತಿದ್ದಾಗ ನಾಯಿ ಬಂದು ಕಚ್ಚಿದೆ ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಹಿಂದೆ ಕೂಡ ಅದೇ ನಾಯಿ ಬೇರೆಯವರಿಗೆ ಕಚ್ಚಿದ ಉದಾಹರಣೆಗಳಿದೆ. ಗಾಯಗೊಂಡ ಬಾಲಕಿಯನ್ನು ಆರ್ ಟಿ ನಗರ ಗಂಗಾ ನಗರದ ಆಯ್ರ ಫಾತಿಮಾ ಎಂದು ಗುರುತಿಸಲಾಗಿದೆ.

ಖಾಸಗಿ ಶಾಲೆಯೊಂದರಲ್ಲಿ ಎಲ್ ಕೆಜಿ ಓದುತ್ತಿರುವ ಫಾತಿಮಾಳ ತಂದೆ ಮೊಹಮ್ಮದ್ ಸಲೀಂ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ನೆರೆಮನೆಯ ಜಗದೀಶ್ ಅವರ ಜರ್ಮನ್ ಶೆಫರ್ಡ್ ನಾಯಿ ಮಾರ್ಚ್ 15ರಂದು ಅಪರಾಹ್ನ ಸುಮಾರು 3.45ಕ್ಕೆ ಮನೆಯ ಹೊರಗೆ ಆಟವಾಡುತ್ತಿದ್ದ ತಮ್ಮ ಮಗಳಿಗೆ ಕಚ್ಚಿದೆ ಎಂದಿದ್ದಾರೆ.

ಫಾತಿಮಾಳ ಎಡಕಾಲಿಗೆ ತೀವ್ರ ಏಟಾಗಿದೆ. ತಕ್ಷಣವೇ ಅವಳನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ಸರ್ಜರಿ ಮಾಡಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಸಹ ಗಾಯ ಗುಣವಾಗಲು ಕೆಲ ಸಮಯಗಳು ಬೇಕಾಗಿದ್ದು ನಡೆಯಲು ಸಾಧ್ಯವಾಗುವುದಿಲ್ಲ ಎಂದು ಸಲೀಂ ಹೇಳುತ್ತಾರೆ.

ಜಗದೀಶ್ ಅವರು ನಾಯಿ ಸಾಕಲು ಅನುಮತಿ ಪಡೆದುಕೊಂಡಿಲ್ಲ. ಅದನ್ನು ರೋಡ್ ನಲ್ಲಿ ಬೇಕಾಬಿಟ್ಟಿ ತಿರುಗಾಡಲು ಬಿಡುತ್ತಾರೆ. ಆರಂಭದಲ್ಲಿ ನನಗೆ ದೂರು ನೀಡುವ ಮನಸ್ಸಿರಲಿಲ್ಲ. ಅವರು ನಾವು 2012ರಿಂದಲೂ ಪರಿಚಯ. ಆದರೆ ನಾಯಿ ಕಚ್ಚಿದ ಮೇಲೆ ಕೂಡ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅವರಲ್ಲಿ ಪ್ರಕರಣದ ಬಗ್ಗೆ ಗಂಭೀರತೆ ಮೂಡಿಸಲು ದೂರು ನೀಡಿದ್ದೇನೆ ಎಂದು ಸಲೀಂ ಹೇಳಿದರು.

ಎಫ್ಐಆರ್ ದಾಖಲಿಸಿದ ಮೇಲೆ ಜಗದೀಶ್ ತಮ್ಮ ಸಾಕುನಾಯಿಯನ್ನು ನಾಯಿ ಸಾಕಣೆ ಕೇಂದ್ರದಲ್ಲಿ ಬಿಟ್ಟಿದ್ದಾರೆ. ಜಗದೀಶ್ ವಿರುದ್ಧ ಐಪಿಸಿ ಸೆಕ್ಷನ್ 289ರಡಿ ಕೇಸು ದಾಖಲಿಸಿ ವಿಚಾರಣೆ ನಡೆಸುತ್ತೇವೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

Comments are closed.