ಬೆಂಗಳೂರು: “ರಫೇಲ್ ಹಗರಣದ ದಾಖಲೆಗಳು ಕಳ್ಳತನವಾಗಿದೆ ಎಂದು ಸರ್ಕಾರ ಹೇಳಿದೆ. ರಾಜ್ಯ ಮೈತ್ರಿ ಸರ್ಕಾರಕ್ಕೆ ಒಂದು ದಾಖಲೆಯನ್ನು ರಕ್ಷಿಸಲು ಸಾಧ್ಯವಿಲ್ಲದಿದ್ದರೆ ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ?” ಎಂಬ ಟ್ವಿಟರ್ ಪೋಸ್ಟಿನ ಚಿತ್ರ ನೆನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಟ್ವೀಟ್ ಬಿಜೆಪಿ ನಾಯಕ ಹಾಗೂ ನವರಸ ನಾಯಕ ಜಗ್ಗೇಶ್ ಅವರ ಖಾತೆಯಿಂದ ಟ್ವೀಟ್ ಆಗಿತ್ತು. ಆನಂತರ ಹತ್ತು ನಿಮಿಷದಲ್ಲೇ ಈ ಟ್ವೀಟ್ ಡಿಲಿಟ್ ಆಗಿತ್ತು. ಇದನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಎಲ್ಲೆಡೆ ವೈರಲ್ ಮಾಡಿದ್ದರು. ಇದನ್ನು ನೋಡಿದವರು, ಜಗ್ಗೇಶ್ ಒಬ್ಬ ಅತ್ಯುತ್ತಮ ಕಾಮಿಡಿಯನ್ ಎಂಬುದನ್ನು ಮತ್ತೊಮ್ಮೆ ರುಜುವಾತು ಮಾಡಿದ್ದಾರೆ ಎಂಬಂತಹ ವ್ಯಂಗ್ಯದ ಪ್ರತಿಕ್ರಿಯೆಗಳು ಹರಿದಾಡತೊಡಗಿದವು.
ಬಿಜೆಪಿ ಮುಖಂಡನೊಬ್ಬನಿಗೆ ಕೇಂದ್ರ ಸರ್ಕಾರ ಯಾವುದು ರಾಜ್ಯ ಸರ್ಕಾರ ಯಾವುದು ಎಂಬುದು ಗೊತ್ತಿಲ್ಲವೇ ಎಂಬ ಜಿಜ್ಞಾಸೆಯ ಪ್ರಶ್ನೆಗಳು ಎದ್ದಿದ್ದವು. ಎಲ್ಲ ವಿಚಾರದಲ್ಲೂ ಪ್ರಬುದ್ಧವಾಗಿ ಮಾತನಾಡುವ ಜಗ್ಗೇಶ್ ಅವರು ಹೀಗೆ ಅಸಂಬದ್ಧವಾಗಿ ಟ್ವೀಟ್ ಮಾಡಲು ಸಾಧ್ಯವೇ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.
ಈ ತಲೆಮಾಸಿದವರೆ ಮೊದಲು fake share ಮಾಡಿದವರು!ಇವರ ಜಾತಕ ಜಾಲಾಡುವ ಸಮಯ ಬಂದಿದೆ!
ಆಗ ಬರುವರು ಬಿಲದಿಂದ ಹೊರಗೆ!
ಉತ್ತಮ ಸಂದೇಶವಿದೆ ಈ ನತದೃಷ್ಟರಿಗೆ ಮುಂದೆ!ಬೆತ್ತಲಾಗಿಸುವ ಕಾನೂನಿನ ಮೂಲಕ! pic.twitter.com/EcupZuW2kH— ನವರಸನಾಯಕ ಜಗ್ಗೇಶ್ (@Jaggesh2) March 7, 2019
ಇದೇ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿರುವ ನವರಸ ನಾಯಕ ಜಗ್ಗೇಶ್, ಕಿಡಿಗೇಡಿಗಳು ಫೋಟೋಶಾಪ್ ಮೂಲಕ ನನ್ನ ಖಾತೆ ತರಹವೇ ನಕಲಿ ಖಾತೆಯನ್ನು ಸೃಷ್ಟಿಸಿ, ನನ್ನ ತೇಜೋವಧೆ ಮಾಡಲು ಇಂತಹ ಸಂದೇಶವನ್ನು ಹರಿಬಿಟ್ಟಿದ್ದಾರೆ. ನನ್ನ 38 ವರ್ಷದಿಂದ ಈ ತರಹದ ಪ್ರವೃತ್ತಿಯನ್ನು ನೋಡುತ್ತ ಬಂದಿದ್ದೇನೆ. ಇದರಿಂದ ನಾನೇನು ಹೆದರಿ ಕುಳಿತುಕೊಳ್ಳುವವನು ನಾನಲ್ಲ. ಯಾರು ಇಂತಹ ತಲೆ ಮಾಸಿದ ಕೆಲಸ ಮಾಡಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೆ ಬೇರೆ ವಿಧಿ ಇಲ್ಲ. ಇಂದು ಮಲ್ಲೇಶ್ವರಂ ಪೊಲೀಸ್ ಠಾಣೆ ಹಾಗೂ ಸೈಬರ್ ಕ್ರೈಂ ಬ್ರಾಂಚ್ಗೆ ದೂರು ನೀಡಿದ್ದೇನೆ. ನನ್ನ ಪ್ರೀತಿ ಮಾಡುವ ಜನರು, ಇಂತಹದ್ದನ್ನು ಕಂಡ ತಕ್ಷಣ ನನ್ನನ್ನು ಟ್ಯಾಗ್ ಮಾಡಿ, ಗಮನಕ್ಕೆ ತನ್ನಿ. ಇಂತಹ ದುಷ್ಕೃತ್ಯಗಳನ್ನು ಹಾಗೆ ಬಿಟ್ಟುಬಿಡಬಾರದು. ಇದಕ್ಕೆ ಸರಿಯಾದ ಪಾಠ ಕಲಿಸಬೇಕು, ಎಂದು ಹೇಳಿದ್ದಾರೆ.
ಮಾನ್ಯರೆ ನಿಮ್ಮಗಮನಕ್ಕೆ!
ನನ್ನ ಖಾತೆ ನಕಲಿ photoshop ಮಾಡಿ
ನಾನೆ ಹಾಕಿದಂತೆ ಜನರಿಗೆ ಗೊಂದಲ ಮೂಡಿಸುವ ಸಂದೇಶ ಹಾಕುತ್ತಿರುವ ಕಿಡಿಗೇಡಿಗಳ ಪತ್ತೆ ಹಾಗು ಕಾನೂನು ಕ್ರಮಕ್ಕೆ ಮಲ್ಲೇಶ್ವರ ಆರಕ್ಷಠಾಣೆ ಹಾಗು ಸೈಬರ್ ಕ್ರೈಂ ಗೆ ನನ್ನದೂರು!
ದಯಮಾಡಿ ನನ್ನಹೆಸರಲ್ಲಿ ಕೆಟ್ಟಸಂದೇಶ ಬಂದರೆ saveಮಾಡಿ ನನ್ನ ಖಾತೆಗೆ ಲಗತ್ತಿಸಿ ಎಂದು ವಿನಂತಿ!ಶುಭದಿನ pic.twitter.com/7T1xRvDzYr— ನವರಸನಾಯಕ ಜಗ್ಗೇಶ್ (@Jaggesh2) March 7, 2019
Comments are closed.