ಹಾಸನ: ಪತಿಯ ಕಿರುಕುಳ ಮನನೊಂದ ಗರ್ಭಿಣಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ಅಕ್ಟೋಬರ್ 31ರಂದು ನಡೆದಿದ್ದು, ಈಗ ಆಕೆಯ ಸಾವಿಗೆ ಪೋಷಕರು ನ್ಯಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ.
ನೇಹಾ ಶರೀಫ್(19) ಸೆಲ್ಫಿ ಸೂಸೈಡ್ ಮಾಡಿಕೊಳ್ಳುವ ದೃಶ್ಯ ಮಾಧ್ಯಮಗಳಿಗೆ ಸಿಕ್ಕಿದೆ. ನೇಹಾ ಶರೀಫ್ ಪತಿಯ ಸೋದರರು ತಾಹಿರ್ ಹಾಗೂ ಸುಹೇಬ್ ಪಾಷಾ ಮೇಲೆ ಕಿಡ್ನಾಪ್ ಕೇಸ್ ದಾಖಲಿಸಿ ಬೆಂಗಳೂರಿನ ಕೋಡಿಗೆಹಳ್ಳಿ ಪೊಲೀಸರು ತನಿಖೆ ನಡೆಸಿದ್ದರು. ಆದರೆ ನೇಹಾ ಶರೀಫ್ ಸಾವಿಗೆ ಕಾರಣಾನಾದ ಆದಿಲ್ ಪಾಷಾ ಪೊಲೀಸ್ ವಶಕ್ಕೆ ಸಿಗುವ ಮುನ್ನವೇ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ನೇಹಾ ಶರೀಫ್ ಪೋಷಕರು ಆರೋಪಿಸಿದ್ದಾರೆ.
ಹಾಸನದ ವಿಜಯನಗರ ನಿವಾಸಿ ರೆಹಮಾನ್ ಶರೀಫ್ ಪುತ್ರಿ ನೇಹಾ ಶರೀಫ್ಗೆ ಸಂಬಂಧಿ ಸಕಲೇಶಪುರದ ಆದಿಲ್ ಜೊತೆ ಮದುವೆ ಮಾಡಲಾಗಿತ್ತು. ಎರಡು ತಿಂಗಳ ಗರ್ಭಿಣಿಯೂ ಆದ ನೇಹಾ ಪತಿಯ ಕಿರುಕುಳಕ್ಕೆ ನಗರದ ಮಹಿಳಾ ಪೊಲೀಸ್ ಠಾಣೆಗೂ ಹೋದರೆ ನ್ಯಾಯ ಸಿಗಲಿಲ್ಲ. ಪತಿಯ ಲೈಂಗಿಕ ಮತ್ತು ಮಾನಸಿಕ ಕಿರುಕುಳಕ್ಕೆ ನೊಂದಿದ್ದ ನೇಹಾ ತಾನು ವಿಷ ಕುಡಿಯುವ ಮೊದಲು ಹೇಳಿಕೆ ಕೊಟ್ಟು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದರು.
ವಿಡಿಯೋದಲ್ಲಿ ಏನಿತ್ತು?
ಮದುವೆಯಾದ ಒಂದು ವಾರದಲ್ಲಿ ನನಗೆ ಇಲ್ಲಿ ತುಂಬಾ ಚಿತ್ರಹಿಂಸೆ ನೀಡಿದರು. ನನ್ನ ಅತ್ತೆ ನನಗೆ ತುಂಬಾ ಹೊಡೆಯುತ್ತಿದ್ದರು. ನನ್ನ ಅತ್ತೆಯ ಎರಡು ಅಕ್ಕ-ತಂಗಿಯರೂ ಕೂಡ ಫೌಸಿಯಾ ಮತ್ತು ಶಾವರ್ ಎಂಬವರು ಸೇರಿಕೊಂಡು ನುಸ್ರತ್ ಎಂಬಾಕೆಯಿಂದ ಚಿತ್ರ ವಿಚಿತ್ರ ಹಿಂಸೆ ಕೊಡಿಸಿದ್ದಾರೆ. ನನಗೆ ಎಲ್ಲಿಯೂ ಇರದ ರೀತಿಯಲ್ಲಿ ಮಾಡಿಬಿಟ್ಟಿದ್ದಾರೆ. ನನ್ನ ಗಂಡ ರಾತ್ರಿ ಇಡೀ ಸೆಕ್ಸ್ ಗಾಗಿ ಟಾರ್ಚರ್ ಮಾಡುತ್ತಿದ್ದ. ನನ್ನ ಒಳಗಿನ ಎಲ್ಲಾ ರೀತಿಯ ಅಂಗಗಳು ಡ್ಯಾಮೇಜ್ ಆಗಿವೆ. ಏನೂ ಉಳಿಯಲಿಲ್ಲ. ನಾನು ಗರ್ಭಿಣಿ ಎಂದು ಗೊತ್ತಿದ್ದರೂ ಕೂಡ ನನಗೆ ಚಿತ್ರಹಿಂಸೆ ನೀಡಿದರು.
ಏನೂ ಉಳಿಸಲಿಲ್ಲ. ಮೊಕ್ತಿಯಾರ್, ಛೋಟೂ ಇವರಿಬ್ಬರೂ ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದರು. ಸಕಲೇಶಪುರದಲ್ಲಿ ನಿನ್ನನ್ನು ಹೂತು ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು. ಇನ್ನಷ್ಟು ವರದಕ್ಷಿಣೆ ಬೇಕೆಂದು ನನಗೆ ಹಿಂಸಿಸಿದ್ದಾರೆ. ಅನ್ನ ನೀರು ಏನನ್ನೂ ಕೊಡ್ತಿರಲಿಲ್ಲ. ನನ್ನ ಬದುಕಿನಲ್ಲಿ ಏನೂ ಉಳಿಯಲಿಲ್ಲ. ನನ್ನ ಮಾನವನ್ನೂ ಹರಾಜು ಹಾಕಿದರು. ನನ್ನ ತಂದೆ ತಾಯಿಯ ಮಾನವನ್ನೂ ಹರಾಜು ಹಾಕಿದರು. ನಾನು ಏನಂತ ಉತ್ತರಿಸಲಿ ಎಲ್ಲರಿಗೂ ಪೊಲೀಸರಿಗೆ ದೂರು ನೀಡಲು ಹೋದರೂ ಅಲ್ಲಿಯೂ ಸಹ ನನ್ನ ದೂರು ತೆಗೆದುಕೊಳ್ಳಲಿಲ್ಲ.
Comments are closed.