ಚಿಕ್ಕಮಗಳೂರು: ಕಾಫಿ ಪ್ಲಾಂಟರ್ಸ್ಗಳು ಕೋಟ್ಯಾಧಿಪತಿಗಳು, ಲಕ್ಷಾಧೀಶರು, ಶ್ರೀಮಂತರು ಅಂತೆಲ್ಲಾ ಭಾವಿಸಿದರೆ ತಪ್ಪು. ಕಾಫಿ ತವರು, ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಅಕ್ಷರಶಃ ನಲುಗಿ ಹೋಗಿದ್ದಾರೆ. ಮೂರ್ನಾಲ್ಕು ತಿಂಗಳು ಸುರಿದ ಭಾರೀ ಮಳೆಗೆ ಇಳುವರಿಯೂ ಕುಂಠಿತಗೊಂಡಿತ್ತು, ಬೆಲೆ ಇಲ್ಲ, ಇಳುವರಿ ಇಲ್ಲ, ಕೊಯ್ಲಿಗೆ ಜನವೂ ಸಿಗದಿರೋದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನವಂಬರ್-ಡಿಸೆಂಬರ್ ಅಂದರೆ ಕಾಫಿ ಬೆಳೆಗಾರರು ದುಡ್ಡು ನೋಡು ಸಮಯ. ಈ ಬಾರಿ ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ಮುಖದಲ್ಲಿ ನಗುವೇ ಇಲ್ಲದಂತಾಗಿದೆ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಭಾರೀ ಮಳೆಗೆ ಕಂಗಾಲಾಗಿದ್ದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೂರ್ನಾಲ್ಕು ವರ್ಷಗಳಿಂದ ಬರುತ್ತಿದ್ದ ಹೊರ ರಾಜ್ಯದ ಕೆಲಸಗಾರರು ಈ ವರ್ಷ ಬಂದಿಲ್ಲ. ಇದು ಕಾಫಿ ಬೆಳೆಗಾರರ ತಲೆ ಕೆಡಿಸಿದೆ.
ವರ್ಷದ 365 ದಿನವೂ ಕಾಫಿ ತೋಟಗಳಲ್ಲಿ ಕೆಲಸವಿರುತ್ತೆ. ಆದರೆ, ದಿನವೊಂದಕ್ಕೆ 350 ರಿಂದ 400 ರೂಪಾಯಿ ಕೊಡುತ್ತೇವೆ ಎಂದರು ಪ್ಲಾಂಟರ್ಸ್ಗಳಿಗೆ ಕೆಲಸಗಾರರ ಬಿಸಿ ತಟ್ಟಿದೆ. ದಿನ ಕಳೆದಂತೆ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚುತ್ತಿದ್ದು, ಫಸಲಿಗೆ ಬಂದ ಬೆಳೆ ಕಣ್ಮುಂದೆಯೇ ಮಣ್ಣುಪಾಲಾಗುತ್ತಿರೋದು ಬೆಳೆಗಾರರಿಗೆ ಮತ್ತಷ್ಟು ಬೇಸರ ತಂದಿದೆ.
ಒಟ್ಟಾರೆ ವರುಣನ ಕಣ್ಣಾಮುಚ್ಚಾಲೆ ಆಟಕ್ಕೆ ಬೆಳೆಗಾರರು ಪೇಚಿಗೆ ಸಿಲುಕಿದ್ದಾರೆ. ಮಳೆ-ಗಾಳಿಯಿಂದ ಅಳಿದುಳಿದಿರೋ ಬೆಳೆಯನ್ನಾದ್ರು ಉಳಿಸಿಕೊಳ್ಳೋಕೆ ಯಾವುದೇ ದುಸ್ಸಾಹಸಕ್ಕೂ ಕೈ ಹಾಕುವುದಕ್ಕೆ ರೆಡಿ ಇದ್ದಾರೆ, ಆದರೆ, ಕೆಲಸಗಾರರ ಸಮಸ್ಯೆ ಬೆಳೆಗಾರರ ಕೈ ಕಟ್ಟಿದಂತಾಗಿದೆ.
Comments are closed.