ಕರ್ನಾಟಕ

2 ಕನ್ನಡ ಸಂಘಟನೆಗಳಿಗೆ 2.10 ಕೋಟಿ ಬಿಡುಗಡೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಸಾವಿರಾರು ಕನ್ನಡಪರ ಸಂಘಟನೆಗಳಿದ್ದರೂ ಕೇವಲ ಎರಡು ಸಂಘಟನೆಗಳಿಗೆ ಮಾತ್ರ 2.10 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಹಾಗೂ ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ಉಮಾಶ್ರೀ ವಿರುದ್ಧ ಕನ್ನಡ ಸಂಘಟನೆಯೊಂದರ ಅಧ್ಯಕ್ಷ ನಾಗೇಶ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.

ಈ ಎರಡು ಸಂಘಟನೆಗಳು ಕನ್ನಡದ ಕಾರ್ಯಕ್ರಮ ಹೆಸರಿನಲ್ಲಿ ಸರಕಾರ ನೀಡಿದ ಹಣವನ್ನು ದರುಪಯೋಗ ಪಡಿಸಿಕೊಂಡಿವೆ ಎಂದು ನಾಗೇಶ್ ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2016-17 ಹಾಗೂ 2017-18ರ ಸಾಲಿನಲ್ಲಿ ತಲಾ 50 ಲಕ್ಷ ರೂಪಾಯಿ ಹಣವನ್ನು ಒಂದು ಸಂಘಟನೆಗೆ ನೀಡಿದ್ದರೆ, 2016-17ರಲ್ಲಿ 50 ಲಕ್ಷ ಹಾಗೂ 2017-18 ಸಾಲಿನಲ್ಲಿ 60 ಲಕ್ಷ ರೂಪಾಯಿ ಹಣವನ್ನು ಮತ್ತೊಂದು ಕನ್ನಡ ಪರ ಸಂಘಟನೆಗೆ ನೀಡಿದೆ ಎಂದು ಆರೋಪಿಸಲಾಗಿದೆ.

ಟಿ.ಎ. ನಾರಾಯಣ ಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಗೆ ವಿಶ್ವ ಕನ್ನಡ ಜಾಗೃತಿ ಸಮಾವೇಶಕ್ಕೆಂದು 2016-17ರಲ್ಲಿ 50 ಲಕ್ಷ ರೂ. ಹಾಗೂ 2017-18 ರ ಸಾಲಿನಲ್ಲಿ 50 ಲಕ್ಷ ರೂಪಾಯಿ ನೀಡುವಂತೆ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸಲು ವಾಟಾಳ್ ನಾಗರಾಜ್ ಅವರ ಕರ್ನಾಟಕ ರಾಜೋತ್ಸವ ಸಮಿತಿಗೆ 2018-17ರಲ್ಲಿ 50 ಲಕ್ಷ ರೂಪಾಯಿ ಹಾಗೂ 2017-18ರಲ್ಲಿ 60 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಎರಡು ಕನ್ನಡ ಸಂಘಟನೆಗಳಿಂದ ಯಾವುದೇ ಸೂಕ್ತ ದಾಖಲೆ ಪಡೆಯದೆ ಹಣ ಮಂಜೂರು ಮಾಡಲು ಶಿಫಾರಸು ಮಾಡಿರುವ ಬಗ್ಗೆ ತನಿಖೆ ನಡೆಸಲು ಕೋರಿ ನಾಗೇಶ್ ಮನವಿ ಮಾಡಿದ್ದಾರೆ.

Comments are closed.