ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ಎಸ್ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣ ನೀರು ಹರಿದು ಬರುತ್ತಿದ್ದು, ಕೆಆರ್ಎಸ್ ಭರ್ತಿಯಾಗಲು ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದೆ.
ಶುಕ್ರವಾರ ಬೆಳಗ್ಗೆ ವೇಳೆಗೆ ಕೆಆರ್ಎಸ್ನಲ್ಲಿ 120.20 ಅಡಿ ನೀರು ಸಂಗ್ರಹವಾಗಿದ್ದು, 39,737 ಕ್ಯೂಸೆಕ್ ಒಳ ಹರಿವು ಇದೆ. ಒಳ ಹರಿವು ಇದೇ ಪ್ರಮಾಣದಲ್ಲಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. 2009ರ ಜುಲೈ 24 ರಂದು ಕೆಆರ್ಎಸ್ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು. ಆ ನಂತರ ಜಲಾಶಯ ಪೂರ್ಣವಾಗಿ ತುಂಬಿರಲಿಲ್ಲ. 2017ರಲ್ಲಿ ಜಲಾಶಯ 114.32 ಅಡಿ ಮಾತ್ರ ತುಂಬಿತ್ತು.
ಹೇಮಾವತಿ ಜಲಾಶಯಕ್ಕೂ ಸಹ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಶುಕ್ರವಾರ ಬೆಳಗ್ಗೆ 217.80 ಅಡಿ ನೀರು ತುಂಬಿದೆ. ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲು ಇನ್ನು ಕೇವಲ 5 ಅಡಿ ನೀರು ಬರಬೇಕಷ್ಟೇ. 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 32.79 ಟಿಎಂಸಿ ನೀರು ಸಂಗ್ರಹವಾಗಿದೆ.
ಜುಲೈ 20ಕ್ಕೆ ಬಾಗಿನ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜುಲೈ 20 ರಂದು ಕೆಆರ್ಎಸ್ ಅಣೆಕಟ್ಟೆಗೆ ಬಾಗಿನ ಅರ್ಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಶುಕ್ರವಾರ ಅಧಿಕಾರಿಗಳು ಬೆಳಗ್ಗೆ ಕೆಆರ್ಎಸ್ ಡ್ಯಾಂ ಬಳಿ ಹೆಲಿಪ್ಯಾಡ್ ಅನ್ನು ಪರಿಶೀಲನೆ ನಡೆಸಿದರು.
Comments are closed.