ಕರ್ನಾಟಕ

ಕಿರುಚಿತ್ರ ಹಾಸನ ಮೂಲದ ಗೌತಮ್‌ ನಟನ ಕೊಲೆ: ದರೋಡೆಕೋರರ ಮೇಲೆ ಶಂಕೆ?

Pinterest LinkedIn Tumblr


ಬೆಂಗಳೂರು: ಆರ್‌ಎಎಂಸಿ ಯಾರ್ಡ್‌ನ ರಿಂಗ್‌ ರೋಡ್‌ನ‌ಲ್ಲಿ ಶನಿವಾರ ತಡರಾತ್ರಿ ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಹಾಸನ ಮೂಲದ ಗೌತಮ್‌ (30) ಮೃತವ್ಯಕ್ತಿ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವ ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು, ಒಂಟಿಯಾಗಿ ನಡೆದುಕೊಂಡು ಬರುತ್ತಿದ್ದ ಗೌತಮ್‌ನನ್ನು ಸುಲಿಗೆ ಮಾಡುವ ಉದ್ದೇಶದಿಂದ ದರೋಡೆಕೋರರು ಚಾಕುವಿನಿಂದ ಹೆದರಿಸಿರಬಹುದು. ಹಣ ಕೊಡಲು ನಿರಾಕರಿಸಿದಾಗ ಚಾಕುವಿನಿಂದ ಇರಿದು ಪರಾರಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ನೇಹಿತರೇ ನಿರ್ಮಾಣ ಮಾಡುತ್ತಿದ್ದ ಕಿರುಚಿತ್ರದಲ್ಲಿ ನಟಿಸಲು ಹಾಸನದಿಂದ ಆಗಮಿಸಿದ್ದ ಗೌತಮ್‌ ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಆರ್‌ಎಂಸಿ ಯಾರ್ಡ್‌ ರಿಂಗ್‌ ರಸ್ತೆಯಲ್ಲಿ ತನ್ನ ಸ್ನೇಹಿತರಿದ್ದ ಕೊಠಡಿಗೆ ನಡೆದುಕೊಂಡು ಹೋಗುತ್ತಿದ್ದ.

ಈ ವೇಳೆ ಆತನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಬಲಭಾಗದ ತೊಡೆಗೆ ಚಾಕುವಿನಿಂದ ಇರಿದು, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೆ ತೊಡೆಯ ನರ ತುಂಡಾಗಿ ತೀವ್ರ ರಕ್ತಸ್ರಾವದಿಂದ ಗೌತಮ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಕೆಲ ಸಮಯದ ಬಳಿಕ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದರು.

ಪ್ರಾಥಮಿಕ ತನಿಖೆ ವೇಳೆ ಗೌತಮ್‌ ಕುರಿತಾಗಿ ಆತನ ಸ್ನೇಹಿತರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಆತನ ದೂರವಾಣಿ ಕರೆಗಳನ್ನು ಪರಿಶೀಲಿಸಲಾಗುತ್ತಿದ್ದು. ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಹಾಸನದಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದ ಗೌತಮ್‌ ನಟನೆಯ ಬಗ್ಗೆ ಆಸಕ್ತಿಯಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸದಲ್ಲಿರುವ ಸ್ನೇಹಿತರ ಜತೆ ಸೇರಿ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ನಟಿಸಿದ್ದ. ಇತ್ತೀಚೆಗೆ ಕೂಡ ಹೊಸ ಕಿರುಚಿತ್ರ ನಿರ್ಮಿಸಲು ಯೋಚಿಸಿದ್ದ ಇವರ ತಂಡ ಅದರಲ್ಲಿ ನಟಿಸುವಂತೆ ಗೌತಮ್‌ನನ್ನು ಕೇಳಿದ್ದರು ಎಂದು ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ.

Comments are closed.