ಹೊಸದಿಲ್ಲಿ: ಮೃತ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ನಾಯಿಗೆ ಹೋಲಿಸುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೊಸ ವಿವಾದ ಮೈಗೆಳೆದುಕೊಡಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ‘ ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತ್ರ’ ಸಂವಾದ ಕಾರ್ಯಕ್ರಮದಲ್ಲಿ ಮಾತನ್ನಾಡುತ್ತಿದ್ದ ಅವರು, ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿಯಬೇಕು ಎಂದು ಒತ್ತಾಯಿಸುತ್ತಿರುವ ಟೀಕೆಕಾರರ ವಿರುದ್ಧ ಹರಿಹಾಯ್ದರು.
ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಬೇಕು ಎಂದು ಹಲವರು ಬಯಸುತ್ತಿದ್ದಾರೆ. ಕರ್ನಾಟಕದಲ್ಲಿ ನಾಯಿಯೊಂದು ಸತ್ತರೂ ಮೋದಿ ಏಕೆ ಪ್ರತಿಕ್ರಿಯಿಸಬೇಕು? ಎಂದು ಮುತಾಲಿಕ್ ಪ್ರಶ್ನಿಸುತ್ತಿರುವ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.
ಬಳಿಕ ತಮ್ಮ ಮಾತನ್ನು ಸಮರ್ಥಿಸಿಕೊಂಡ ಅವರು ನಾನು ಗೌರಿ ಲಂಕೇಶ್ ಅವರನ್ನು ನೇರವಾಗಿ ನಾಯಿಗೆ ಹೋಲಿಸಿಲ್ಲ. ಕರ್ನಾಟಕದಲ್ಲಾಗುವ ಪ್ರತಿಯೊಂದು ಸಾವಿಗೂ ಮೋದಿ ಪ್ರತಿಕ್ರಿಯಿಸಬೇಕಿಲ್ಲ ಎಂಬುದು ನನ್ನ ಮಾತಿನ ಅರ್ಥ, ಎಂದರು.
ಶಂಕಿತ ಗೌರಿ ಹಂತಕ ವಾಗ್ಮೋರೆ ಮತ್ತು ಮುತಾಲಿಕ್ ಜತೆಗಿರುವ ಭಾವಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಗೌರಿ ಹತ್ಯೆಯಲ್ಲಿ ಆರೋಪಿಗಳು ಮತ್ತು ಶ್ರೀರಾಮ ಸೇನೆ ನಡುವಿನ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
Comments are closed.