ತುಮಕೂರು: ತುಮಕೂರಿನ ಕುಣಿಗಲ್ನಲ್ಲಿ ಮದುವೆ ಮನೆಯಿಂದ ನಾಪತ್ತೆಯಾಗಿದ್ದ ವರ, ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷನಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.
ಯಡಿಯೂರಿನ ಕಲ್ಲೇಗೌಡನಪಾಳ್ಯದ ಶಿವಕುಮಾರ್ಗೂ ಕುಣಿಗಲ್ನ ರಾಜಲಕ್ಷ್ಮಿ ಎಂಬುವವರ ವಿವಾಹ ಇಂದು ಯಡಿಯೂರಿನ ಹನುಮಮ್ಮ ತಿಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. ಆದರೆ, ಮೂಹೂರ್ತಕ್ಕೆ ಬಾರದೆ ಶಿವಕುಮಾರ್ ಕಾಣೆಯಾಗಿದ್ದ. ಶಿವಕುಮಾರ್ ಕುಟುಂಬದವರೂ ಮದುವೆಯಿಂದ ದೂರು ಉಳಿದಿದ್ದರು. ಇದರಿಂದ ವಧುವಿನ ಕುಟುಂಬಸ್ಥರು ಕಂಗಾಲಾಗಿದ್ದರು.
ಹೀಗಿರುವಾಗಲೇ ವರ ಶಿವಕುಮಾರ್ ಕುಣಿಗಲ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾನೆ. ಮದುವೆ ಮನೆಯಿಂದ ನಾಪತ್ತೆಯಾಗಿರುವುದಕ್ಕೆ ಶಿವಕುಮಾರ್ ಕಾರಣವನ್ನೂ ನೀಡಿದ್ದಾನೆ.
ಶಿವಕುಮಾರ್ ಹುಲಿವಾನ ಗ್ರಾಮದಲ್ಲಿರುವ ತನ್ನ ಅತ್ತೆಯ ಮಗಳನ್ನು ಈ ಹಿಂದೆ ಪ್ರೀತಿಸಿದ್ದ. ಆದರೆ, ಉದ್ಯೋಗವಿಲ್ಲದ ಕಾರಣಕ್ಕೆ ಶಿವಕುಮಾರ್ಗೆ ಮಗಳನ್ನು ಮದುವೆ ಮಾಡಿಕೊಡಲು ಅತ್ತೆ ಮನೆಯವರು ನಿರಾಕರಿಸಿದ್ದರು. ನಂತರ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಪಡೆಯುವಲ್ಲಿ ಶಿವಕುಮಾರ್ ಯಶಸ್ವಿಯಾಗಿದ್ದ. ನಂತರ ಕುಣಿಗಲ್ನ ರಾಜಲಕ್ಷ್ಮಿ ಅವರೊಂದಿಗೆ ಶಿವಕುಮಾರ್ಗೆ ಮದುವೆ ನಿಶ್ಚಯವಾಗಿತ್ತು. ಅದರಂತೆ ಮೂರು ದಿನಗಳ ಹಿಂದೆ ವಿವಾಹ ಆಮಂತ್ರಣ ನೀಡಲು ಹುಲಿವಾನದ ಅತ್ತೆ ಮನೆಗೆ ಶಿವಕುಮಾರ್ ತೆರಳಿದ್ದ. ಈ ವೇಳೆ ತಮ್ಮ ಮಗಳನ್ನೇ ಮದುವೆ ಮಾಡಿಕೊಡುವುದಾಗಿ ಅತ್ತೆ ಮನೆಯವರು ಶಿವಕುಮಾರ್ಗೆ ಹೇಳಿದ್ದಾರೆ.
ಪ್ರೀತಿ ಮಾಡಿದ ಅತ್ತೆ ಮಗಳು ಸಿಗುವ ಆಸೆಗೆ ಬಿದ್ದ ಶಿವಕುಮಾರ್ ನಿಶ್ಚಯವಾಗಿದ್ದ ಮದುವೆ ಮುರಿದುಕೊಂಡು, ಮದುವೆ ಮನೆಯಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ.
Comments are closed.