ಕರ್ನಾಟಕ

ಮುಂದುವರಿದ ಮಳೆ, ವಿದ್ಯುತ್‌ ಕಣ್ಣಾಮುಚ್ಚಾಲೆ

Pinterest LinkedIn Tumblr


ಬೆಂಗಳೂರು: ರಾಜ್ಯದ ದಕ್ಷಿಣ ಭಾಗದಿಂದ ಉತ್ತರಕ್ಕೆ ಬಿರುಸಾದ ಗಾಳಿಯ ಚಲನೆ ಹಾಗೂ ತಮಿಳುನಾಡು-ಕೊಮರಿಯನ್‌ ಭಾಗದಲ್ಲಿ ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದ ನಗರದಲ್ಲಿ ಮಳೆ ಮುಂದುವರಿದಿದೆ. ಗಾಳಿಯ ರಭಸ ಹೆಚ್ಚಿರುವುದರಿಂದ ಮಳೆ ಕಡಿಮೆ ಇದ್ದರೂ ಮರ, ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.

ಬುಧವಾರ ಅಲ್ಲಲ್ಲಿ ಮಳೆಯಾಗಿದ್ದು, ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಹಾಗೂ ರಾಜಾಜಿನಗರ 66 ನೇ ಅಡ್ಡರಸ್ತೆ ಬಳಿ ತಲಾ ಒಂದು ಮರ ಧರೆಗುರುಳಿದೆ. ಕಳೆದ ದಿನ ಸುರಿದ ಮಳೆ ಹಾಗೂ ಬೀಸಿದ ಗಾಳಿಯ ಪರಿಣಾಮದಿಂದ ಹಲವೆಡೆ ಮರ, ಕೊಂಬೆಗಳು ಬಿದ್ದಿದ್ದು, ಬಿಬಿಎಂಪಿ ಅರಣ್ಯ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ಗಳಿಗೂ ಹಾನಿಯಾಗಿದ್ದು, ದುರಸ್ತಿ ನಡೆಯಿತು. ಸಂಜೆ ಸುರಿದ ಮಳೆ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡುವುದರ ಜತೆಗೆ ಮತ್ತಷ್ಟು ಹಾನಿಯುಂಟುಮಾಡಿತು.

111 ವಿದ್ಯುತ್‌ ಕಂಬಗಳಿಗೆ ಹಾನಿ

ಮಂಗಳವಾರ ಸಂಜೆ ಗಂಟೆಗೆ 64 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ. ಬುಧವಾರವೂ ಜೋರಾದ ಗಾಳಿ ಸಹಿತ ಮಳೆ ಸುರಿಯಿತು. ಇದರಿಂದಾಗಿ ಬೆಸ್ಕಾಂನ ಒಟ್ಟು 111 ಕಂಬಗಳು ತುಂಡಾಗಿವೆ. 98 ಮರ, ಕೊಂಬೆಗಳು ಕಂಬಗಳ ಮೇಲೆ ಬಿದ್ದ ಪರಿಣಾಮ, ಕಂಬಗಳು ತುಂಡಾಗಿ ಆ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ವ್ಯತ್ಯಯಗೊಂಡಿತು. ಗುರುವಾರ ಸಂಜೆ ವೇಳೆಗೆ ಹೊಸದಾಗಿ 86 ಕಂಬಗಳನ್ನು ಅಳವಡಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿತ್ತು. ಇನ್ನೂ 25 ಕಂಬಗಳನ್ನು ಬದಲಿಸುವ ಕಾರ್ಯಾಚರಣೆ ನಡೆಯುತ್ತಿತ್ತು.

ಬೆಸ್ಕಾಂನ ಪಶ್ಚಿಮ ವಿಭಾಗದ ವ್ಯಾಪ್ತಿಗೆ ಬರುವ ಬಸವೇಶ್ವರ ನಗರ, ರಾಜಾಜಿನಗರ 2 ನೇ ಹಂತ, ನಾಗರಬಾವಿ, ಉತ್ತರ ವಿಭಾಗದ ಯಶವಂತಪುರ, ಸಂಜಯ ನಗರ, ಯಲಹಂಕ ನ್ಯೂ ಟೌನ್‌, ಮಹಾಲಕ್ಷ್ಮಿ ಲೇಔಟ್‌ನಲ್ಲಿ ವಿದ್ಯುತ್‌ ಕಂಬಗಳ ಮೇಲೆ ಮರ, ಕೊಂಬೆಗಳು ಬಿದ್ದು ಹೆಚ್ಚು ಹಾನಿ ಮಾಡಿತ್ತು.

ಎಲ್ಲೆಲ್ಲಿ ಎಷ್ಟು ಮಳೆ

ಸೋಮನಹಳ್ಳಿ, ಕಣ್ಣೂರಿನಲ್ಲಿ 10 ಮಿ.ಮೀ., ಮಾದಾವರದಲ್ಲಿ 18 ಮಿ.ಮೀ., ಅಗ್ರಹಾರ ದಾಸರಹಳ್ಳಿಯಲ್ಲಿ 5 ಮಿ.ಮೀ., ಸೋಮಶೆಟ್ಟಿಹಳ್ಳಿಯಲ್ಲಿ 22 ಮಿ.ಮೀ., ದೊಡ್ಡಜಾಲದಲ್ಲಿ 6 ಮಿ.ಮೀ., ಕೋಣನಕುಂಟೆ, ಸಾರಕ್ಕಿ, ಚಾಮರಾಜಪೇಟೆ, ಜಯನಗರ, ಸಿಂಗನಾಯಕನಹಳ್ಳಿ, ಶಿವಕೋಟೆ, ಯಶವಂತಪುರದಲ್ಲಿ ತುಂತುರು ಮಳೆ ಸುರಿದಿದೆ.

ವಿದ್ಯುತ್‌ ಕಂಬಗಳ ದುರಸ್ಥಿ

ಮಳೆಯಿಂದಾಗಿ ಗುರುವಾರ ರಾತ್ರಿ ಸುಬ್ರಹ್ಮಣ್ಯಪುರ ವಿದ್ಯುತ್‌ ಪ್ರಸರಣ ಕೇಂದ್ರದ ಕಾರ್ಯ ನಿರ್ವಹಣೆ ಸ್ಥಗಿತಗೊಂಡು ಸುತ್ತಮುತ್ತಲಿನ ಪ್ರದೇಶಗಳು ಕತ್ತಲಿನಲ್ಲಿ ಮುಳುಗಿದವು. ಈ ಕೇಂದ್ರದ ಮೂಲಕ ವಿದ್ಯುತ್‌ ಪೂರೈಸುತ್ತಿದ್ದ ಆರ್‌ಬಿಐ ಲೇಔಟ್‌, ಅಂಜನಾಪುರ, ಜಿಗಣಿ, ಗೊಲ್ಲಹಳ್ಳಿ ಹಾಗೂ ಬನ್ನೇರುಘಟ್ಟ ಕೇಂದ್ರಗಳಲ್ಲೂ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿತು. ಬಳಿಕ ಪೀಣ್ಯದ ಪ್ರಸರಣ ಕೇಂದ್ರದಿಂದ ಸಿಂಗಲ್‌ ಫೇಸ್‌ನಲ್ಲಿ ವಿದ್ಯುತ್‌ ಪೂರೈಸಲಾಯಿತು. ಮಹಾಲಕ್ಷ್ಮಿ ಲೇಔಟ್‌, ಯಶವಂತಪುರ, ರಾಜಾಜಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡಿಮೆ ಬೆಳಕಿನ ವಿದ್ಯುತ್‌ ದೀಪ ಉರಿಸಲು ಮಾತ್ರ ಸಾಧ್ಯವಾಯಿತು. ಈ ಪ್ರದೇಶಗಳಲ್ಲಿ ಮುಂಜಾನೆಯಿಂದಲೇ ವಿದ್ಯುತ್‌ ಕಂಬಗಳನ್ನು ಬದಲಿಸುವ ಕಾರ್ಯಾಚರಣೆ ನಡೆಯುತ್ತಿದ್ದುದರಿಂದ ಆಗಾಗ್ಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳ್ಳುತ್ತಿತ್ತು.

ಇನ್ನೆರಡು ದಿನ ಇದೇ ಹವಾಮಾನ

ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಸೆಕೆ ಹೆಚ್ಚಿದ್ದು, ಸಂಜೆ ಬಳಿಕ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಬಳಿಕ ಜೋರಾದ ಗಾಳಿ ಸಹಿತ ಮಳೆ ಸುರಿಯಿತು. ಇದೇ ರೀತಿಯ ಹವಾಮಾನ ಇನ್ನೂ ಎರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Comments are closed.