ಕರ್ನಾಟಕ

ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯನ್ನು ರಕ್ಷಿಸಿದ ರೈಲು ಚಾಲಕ

Pinterest LinkedIn Tumblr


ದಾವಣಗೆರೆ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯನ್ನು ರೈಲು ಚಾಲಕನೇ ರಕ್ಷಿಸಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಭಾನುವಾರ ನಡೆದಿದೆ.

ಈತ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಅಣ್ಣಪ್ಪ (20) ಎನ್ನಲಾಗಿದ್ದು, ಅವನ ಆರೋಗ್ಯದಲ್ಲಿ ಏರುಪೇರು ಇತ್ತೆಂದು ಹೇಳಲಾಗಿದೆ. ಪೋಷಕರು ಕುರಿ ಕಾಯುವ ಕೆಲಸ ಮಾಡುತ್ತಿದ್ದು, ಎರಡು ವರ್ಷದಿಂದ ಯುವಕನ ಆರೋಗ್ಯ ಸರಿ ಇರಲಿಲ್ಲ. ಈ ಕಾರಣದಿಂದ ಬೆಂಗಳೂರು- ಧಾರವಾಡ ಸಿದ್ದಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ ತಲೆ ಕೊಟ್ಟು ಸಾಯಲೆಂದು ಹರಿಹರ ಪಟ್ಟಣದ ಬಳಿ ಇರುವ ರೈಲ್ವೆ ಹಳಿ ಮಲಗಿದ್ದ ಎಂದು ಹೇಳಲಾಗುತ್ತಿದೆ.

ಹಳಿ ಮೇಲೆ ಮಲಗಿದ್ದ ಈತನನ್ನು ಕಂಡು ಚಾಲಕ ರೈಲು ನಿಲ್ಲಿಸಿದ್ದಾನೆ. ಆದರೂ ರೈಲು ಎಂಜಿನ್‌ ಈ ವ್ಯಕ್ತಿಯ ಮೇಲೆ ಹರಿದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ರೈಲಿನಲ್ಲಿಯೇ ಕೂರಿಸಿಕೊಂಡು ಹರಿಹರದ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಇದಾದ ನಂತರ ಈತನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.

ಅಣ್ಣಪ್ಪನಿಗೆ ಆರೋಗ್ಯದಲ್ಲಿ ಏರುಪೇರು ಆಗಿದ್ದ ಕಾರಣ ಪೋಷಕರು ಶಿವಮೊಗ್ಗ ಸೇರಿದಂತೆ ಇತರ ಕಡೆ ಚಿಕಿತ್ಸೆ ಕೊಡಿಸಿದ್ದರು. ಆದರೂ ಆರೋಗ್ಯ ಸುಧಾರಿಸಿರಲಿಲ್ಲ. ಶನಿವಾರ ಚಳ್ಳಕೆರೆಯ ಸೈನಿಕ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಅಲ್ಲಿಂದ ಈತ ತಪ್ಪಿಸಿಕೊಂಡು ಹೋಗಿದ್ದ ಎಂಬ ಮಾಹಿತಿ ಇದೆ. ಮಾಹಿತಿ ತಿಳಿದ ಸಹೋದರ ರಂಗ ದಾವಣಗೆರೆ ಹೋಗಿ ತಮ್ಮನ್ನು ಭೇಟಿ ಮಾಡಿದಾಗ ನಾನು ಬರುವುದಿಲ್ಲ ಸಾಯುತ್ತೇನೆ ಎಂದು ಹಟ ಮಾಡುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ಈತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಆತ ಬಾಯಿಬಿಡುತ್ತಿಲ್ಲ. ನನಗೆ ಏನು ಗೊತ್ತಿಲ್ಲ ಎಂದು ಹೇಳುತ್ತಿದ್ದಾನೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ರೈಲ್ವೆ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Comments are closed.