ಕರ್ನಾಟಕ

ನಟ ರಜನೀಕಾಂತ್‌ ಕಲಿತ ಬೆಂಗಳೂರಿನ ಗವಿಪುರದ ಶಾಲೆಗೆ ಹೊಸ ಮೆರುಗು

Pinterest LinkedIn Tumblr

* ಜಯಂತ್‌ ಗಂಗವಾಡಿ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲೊಂದು ಹೈಟೆಕ್‌ ಸರಕಾರಿ ಶಾಲೆ ತಲೆಎತ್ತಿದೆ. ಹನುಮಂತನಗರ ಬಡಾವಣೆಯ ಗವಿಪುರದ ಗುಡ್ಡದ ಮೇಲೆ ಖಾಸಗಿ ಶಾಲೆಗಳೂ ನಾಚುವಂತೆ ನಿರ್ಮಿಸಲಾಗಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡ ಇಂದು ಲೋಕಾರ್ಪಣೆಯಾಗಲಿದೆ.

ಪ್ರಸ್ತುತ ಸಂದರ್ಭದಲ್ಲಿ ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಹಳೇ ಕಟ್ಟಡ, ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಇತರೆ ಕಾರಣಗಳಿಂದಾಗಿ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗವಿಪುರದಲ್ಲಿ ನಿರ್ಮಿಸಿರುವ ಸುಸಜ್ಜಿತ ಸರಕಾರಿ ಮಾದರಿ ಶಾಲೆ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡುವಂತಿದೆ.

ನಟ ರಜನಿಕಾಂತ್‌ ಓದಿದ ಶಾಲೆ

ಸುಮಾರು 75 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ನಟ ಸೂಪರ್‌ಸ್ಟಾರ್‌ ರಜನೀಕಾಂತ್‌ ಸೇರಿದಂತೆ ಹಲವು ದಿಗ್ಗಜರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಸದ್ಯ ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಸಂಪೂರ್ಣ ಶಿಥಿಲಗೊಂಡಿದ್ದ ಶಾಲಾ ಕಟ್ಟಡವನ್ನು 2012-13ನೇ ಸಾಲಿನಲ್ಲಿ ತೆರವುಗೊಳಿಸಿ, ಸುಮಾರು 1.80 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರ ಒಟ್ಟು 80 ಲಕ್ಷ ರೂ. ಅನುದಾನ ನೀಡಿದ್ದು, ಉಳಿದ ಹಣವನ್ನು ಸ್ಥಳೀಯ ಶಾಸಕರು ಮತ್ತು ಸಂಸದರ ನಿಧಿಯಿಂದ ಪಡೆಯಲಾಗಿದೆ.

ಸಂಪೂರ್ಣ ಹೈಟೆಕ್‌ ಶಾಲೆ

ಒಟ್ಟು 4 ಅಂತಸ್ತುಗಳ ಕಟ್ಟಡದಲ್ಲಿ ಒಟ್ಟು 16 ಕೊಠಡಿಗಳು ಮತ್ತು ಸಿಬ್ಬಂದಿಗಾಗಿ ಇತರೆ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರತ್ಯೇಕ ಕಂಪ್ಯೂಟರ್‌ ಲ್ಯಾಬ್‌, ಗ್ರಂಥಾಲಯ, ಮಕ್ಕಳ ಆಟಕ್ಕೆ ಪ್ರತ್ಯೇಕ ಮೈದಾನ ಹಾಗೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಗ್ರಾನೈಟ್‌ನ ನೆಲಹಾಸು ಹಾಕಲಾಗಿದ್ದು, ಪ್ರತಿ ಕೊಠಡಿಗೂ ಗುಣಮಟ್ಟದ ಮತ್ತು ಬಣ್ಣ ಬಣ್ಣದ ಡೆಸ್ಕ್‌ಗಳನ್ನು ಹಾಕಲಾಗಿದೆ.

ಸಂಪೂರ್ಣ ಸ್ಮಾರ್ಟ್‌ ಕ್ಲಾಸ್‌

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ಕೊಠಡಿಗೂ ‘ಸ್ಮಾರ್ಟ್‌ ಬೋರ್ಡ್‌’ ಹಾಗೂ ‘ಸಿಸಿ ಟಿವಿ ಕ್ಯಾಮೆರಾ’ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ವಿಜ್ಞಾನ ಹಾಗೂ ಪ್ರಚಲಿತ ಜಾಗತಿಕ ವಿದ್ಯಮಾನಗಳನ್ನು ಪರಿಣಾಮಕಾರಿಯಾಗಿ ಬೋಧಿಸಲು ಪ್ರೊಜೆಕ್ಟರ್‌ ಅಳಡಿಸುವ ಮೂಲಕ ಖಾಸಗಿ ಶಾಲೆಗಳಲ್ಲಿ ನೀಡುವಂತಹ ಎಲ್ಲಾ ಆಧುನಿಕ ಶಿಕ್ಷಣವನ್ನು ಈ ಸರಕಾರಿ ಶಾಲೆಯಲ್ಲಿ ನೀಡಲು ಕ್ರಮ ವಹಿಸಲಾಗಿದೆ.

ಈ ಬಗ್ಗೆ ವಿಕದೊಂದಿಗೆ ಮಾತನಾಡಿದ ಸ್ಥಳೀಯ ಶಾಸಕ ಎಲ್‌.ಎ.ಸುಬ್ರಮಣ್ಯ, ”ಮುಂಬರುವ ವರ್ಷದಿಂದ ಎಲ್‌ಕೆಜಿ ತರಗತಿಗಳನ್ನು ಪ್ರಾರಂಭ ಮಾಡುತ್ತೇವೆ. ಇಂಗ್ಲಿಷ್‌ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಸಂಗೀತ, ನೃತ್ಯ ತರಗತಿಗಳನ್ನು ಸಹ ನಡೆಸಲಾಗುವುದು. ಶಾಲೆಗೆ ಉಚಿತ ಬಸ್‌ ವ್ಯವಸ್ಥೆ ಮಾಡಲು ಕೆಲವು ದಾನಿಗಳು ಮತ್ತು ಸ್ನೇಹಿತರೊಂದಿಗೆ ಚರ್ಚಿಸಲಾಗಿದೆ,”

‘ಪ್ರಸ್ತುತ ನೂರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಕ್ಕಳ ದಾಖಲಾತಿ ಹೆಚ್ಚಾದರೆ ಎಲ್ಲರ ಪ್ರಯತ್ನಕ್ಕೆ ಸಾರ್ಥಕವಾಗಲಿದೆ.’
– ಸಿ.ಕೆ.ಮೋಹನಕುಮಾರಿ, ಶಿಕ್ಷಕಿ

Comments are closed.