ಕರ್ನಾಟಕ

ಹಣ, ಹೆಂಡ ಮುಕ್ತ ಚುನಾವಣೆ ಪ್ರಯೋಗ: ಜಗಳೂರು ಕ್ಷೇತ್ರದಲ್ಲೊಂದು ಮಾದರಿ ಕ್ರಮ, ಸಿರಿಗೆರೆ ಮಠದ ಸಾರಥ್ಯ

Pinterest LinkedIn Tumblr

ಸದಾನಂದ ಹೆಗಡೆ

ದಾವಣಗೆರೆ: ಬರಪೀಡಿತ ಜಗಳೂರು ಕ್ಷೇತ್ರ ಈ ಬಾರಿ ಚುನಾವಣೆ ಶುದ್ಧಿಗೆ ತನ್ನನ್ನು ಒಡ್ಡಿಕೊಂಡು ರಾಜ್ಯದ ಗಮನ ಸೆಳೆಯುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಹಣದ ಹೊಳೆ ಹರಿಸಿ ಗೆಲುವು ಸಾಧಿಸಲು ಎಲ್ಲೆಡೆ ಲೆಕ್ಕಾಚಾರ ನಡೆದಿದ್ದರೆ, ಇಲ್ಲಿಮಾತ್ರ ಹಣ ಹೆಂಡ ರಹಿತ ಚುನಾವಣೆಗೆ ಆಖಾಡ ಸಜ್ಜಾಗುತ್ತಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರ. ಅಭಿವೃದ್ಧಿ ಹಾಗೂ ಮೂಲ ಸೌಕರ್ಯದ ವಿಚಾರದಲ್ಲಿ ಅತ್ಯಂತ ಹಿಂದುಳಿದ ಪ್ರದೇಶ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ನೆರೆಯಲ್ಲಿರುವ ಜಗಳೂರನ್ನು ಈ ಬಾರಿ ತರಳಬಾಳು ಬೃಹನ್ಮಠ ಚುನಾವಣೆ ಶುದ್ಧಿಯ ಪ್ರಯೋಗ ಶಾಲೆಯಾಗಿ ಕೈಗೆತ್ತಿಕೊಂಡಿದೆ. ಪಕ್ಷಗಳು, ಅಭ್ಯರ್ಥಿಗಳು ಯಾರೇ ಇರಲಿ, ಚುನಾವಣೆ ಮಾತ್ರ ಹೆಂಡ, ಹಣದಿಂದ ಮುಕ್ತವಾಗಿರಲಿ ಎಂಬುದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರ ಆಶಯ.

ಸಿರಿಗೆರೆ ಮಠಕ್ಕೂ ಜಗಳೂರಿಗೂ ಅವಿನಾಭಾವ ಸಂಬಂಧ. ಮಠದ ವ್ಯಾಪ್ತಿಯ ತರಳಬಾಳು ಶಿಕ್ಷಣ ಸಂಸ್ಥೆಗಳು ಇಲ್ಲಿವಿದ್ಯಾದಾನ ಮಾಡುತ್ತಿದ್ದರೆ, ತಾಲೂಕಿಗಿರುವ ಕಾಯಂ ಬರ ಪೀಡಿತ ಹಣೆಪಟ್ಟಿ ತೆಗೆಯಲು ಈಗಿನ ಗುರುಗಳು ವಿಶೇಷ ಆಸ್ಥೆ ವಹಿಸಿ ಗಮನ ಸೆಳೆದರು. ತಾಲೂಕಿನ ಐತಿಹಾಸಿಕ ಕೆರೆಗಳಿಗೆ ನೀರು ತುಂಬಿಸಲು 22 ಕೆರೆ ಹೋರಾಟ ಸಮಿತಿಯನ್ನು ರಚಿಸಿ ದಶಕದಿಂದ ಶ್ರಮಿಸಿದರು. ಬಂದ ಸರಕಾರಗಳು, ಮಂತ್ರಿಗಳು, ಅಧಿಕಾರಿಗಳಲ್ಲಿಜಗಳೂರಿನ ಸಮಸ್ಯೆಯ ತೀವ್ರತೆಯನ್ನು ಮನವರಿಕೆ ಮಾಡಿ, ಇಲ್ಲಿನ ಬೃಹತ್‌ ಕೆರೆಗಳಿಗೆ ಕೃಷಿ ಹಾಗೂ ಕುಡಿಯುವ ನೀರಿಗೆ ಭದ್ರಾ ನಾಲೆಯಿಂದ ನೀರು ಹರಿಸುವ ಯೋಜನೆಯನ್ನು ಕೊನೆಗೂ ಸಾಕಾರ ಮಾಡಿದರು. ಅಷ್ಟೇ ಅಲ್ಲ , ಬರಗಾಲದ ಕಾರಣ ಪ್ರಸಿದ್ಧ ತರಳಬಾಳು ಹುಣ್ಣಿಮೆಯನ್ನು ಕಳೆದ ಬಾರಿ ಮುಂದೂಡಿ, ಕೆರೆ ಯೋಜನೆ ಅನುಷ್ಠಾನದ ಬಳಿಕ ಕಳೆದ ಜನವರಿಯಲ್ಲಿಹುಣ್ಣಿಮೆ ಹಬ್ಬ ಆಚರಿಸಿದರು. ಅದೇ ಹುಮ್ಮಸ್ಸಿನಲ್ಲಿಇದೀಗ ಕ್ಷೇತ್ರದ ಚುನಾವಣೆ ಶುದ್ಧಿಯ ಕಾರ್ಯವನ್ನೂ ಶ್ರೀಗಳು ಕೈಗೆತ್ತಿಕೊಂಡಿದ್ದಾರೆ. ರಾಜ್ಯದಲ್ಲೇ ವಿನೂತನವಾದ ಈ ಪ್ರಯೋಗಕ್ಕೆ ಎಲ್ಲೆಡೆ ಜನಬೆಂಬಲ ಹಾಗೂ ಕುತೂಹಲವೂ ವ್ಯಕ್ತವಾಗುತ್ತಿದೆ.

ಭ್ರಷ್ಟ ಮುಕ್ತ ಚುನಾವಣೆಗೆ ಕಾವಲು ಸಮಿತಿ ಸ್ಥಾಪನೆ

ಕಳೆದ ಜನವರಿಯಲ್ಲಿ ಲಕ್ಷಾಂತರ ಜನ ಸಂದರ್ಶಿಸಿದ ಒಂಭತ್ತು ದಿನದ ಯಶಸ್ವಿ ತರಳಬಾಳು ಹುಣ್ಣಿಮೆಯ ಹುಮ್ಮಸ್ಸಿನ ಭಾಗವಾಗಿ ಜಗಳೂರು ಚುನಾವಣೆ ಪ್ರಯೋಗದ ತೀರ್ಮಾನ ಕೈಗೊಳ್ಳಲಾಯಿತು. ಮೊದಲ ಸಭೆಯಲ್ಲಿತರಳಬಾಳು ಹುಣ್ಣಿಮೆ ಮಹೋತ್ಸವ ಸಮಿತಿಯ ಪದಾಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಸಿರಿಗೆರೆ ಮಠದಲ್ಲಿನಡೆದ ಇದೇ ಉದ್ದೇಶದ ಎರಡನೆ ಸಭೆಯಲ್ಲಿಜಿಪಂ, ತಾಪಂ, ಎಪಿಎಂಸಿಗಳ ಹಾಲಿ ಮತ್ತು ಮಾಜಿ ಸದಸ್ಯರು, ವಿಧಾನಸಭೆ ಚುನಾವಣೆ ಹುರಿಯಾಳುಗಳೊಂದಿಗೆ ಈ ಪ್ರಯೋಗದ ರೂಪುರೇಷೆಗಳ ಬಗ್ಗೆ ಸಮಾಲೋಚಿಸಲಾಗಿತ್ತು.

ಇದಾದ ನಂತರ ಜಗಳೂರಿನ ಸೊಕ್ಕೆಯಲ್ಲಿಹೋಬಳಿ ಮಟ್ಟದ ಒಂದು ಸಭೆ ನಡೆದ ನಂತರ, ಕಳೆದ ವಾರ ನಾಲ್ಕನೆ ಸಭೆ ಮತ್ತೆ ಮಠದಲ್ಲಿನಡೆಯಿತು. ಈ ಸಭೆಯಲ್ಲಿ ಭ್ರಷ್ಟ ಮುಕ್ತ ಚುನಾವಣೆಗೆ ಸರ್ವಪಕ್ಷ ಪ್ರತಿನಿಧಿಗಳ ಕಾವಲು ಸಮಿತಿ ರಚಿಸಲಾಗಿದ್ದು, ಪ್ರಜಾತಂತ್ರ ಮಾದರಿಯಲ್ಲೇ ಈ ಸಮಿತಿ ಭ್ರಷ್ಟ ಮುಕ್ತ ಚುನಾವಣೆ ಅನುಷ್ಠಾನಕ್ಕೆ ಆಯೋಗದೊಂದಿಗೆ ದುಡಿದು, ವಿಚಕ್ಷಣೆಯ ಜವಾಬ್ದಾರಿ ನಿರ್ವಹಿಸಲಿದೆ. ಸಾರ್ವಜನಿಕರೂ ಇದಕ್ಕೆ ಸಹಕರಿಸಬಹುದಾಗಿದ್ದು , ಮಠದ ವತಿಯಿಂದ ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಒಂದು ತಂತ್ರಾಂಶವೂ ಸಿದ್ಧವಾಗುತ್ತಿದೆ. ಯಾವುದೇ ಮೂಲೆಯಲ್ಲಿ ಹಣ ಹಾಗೂ ಹೆಂಡದ ಚಲನವಲನ ಕಂಡರೂ ಸಾರ್ವಜನಿಕರು ಸಮಿತಿಗೆ ಹಾಗೂ ಚುನಾವಣೆ ಆಯೋಗಕ್ಕೆ ತಮ್ಮ ದೂರವಾಣಿ ಸಂದೇಶದ ಮೂಲಕ ದೂರು ಕೊಡಬಹದು.

ಅಭ್ಯರ್ಥಿಗಳ ಸಹಮತ

ವಿಶೇಷ ಎಂದರೆ ಮೇಲಿನ ಎಲ್ಲ ಸಭೆಗಳಲ್ಲಿನಾನಾ ರಾಜಕೀಯ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಪಾಲ್ಗೊಂಡಿದ್ದು, ಭ್ರಷ್ಟಾಚಾರ ರಹಿತ ಚುನಾವಣೆ ಅನುಷ್ಠಾನದ ಸಾಧ್ಯತೆಯನ್ನು ಮುಕ್ತವಾಗಿ ಚರ್ಚಿಸಿದ್ದಾರೆ. ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಸಾಣೇಹಳ್ಳಿ ಶಾಖಾ ಮಠದ ಡಾ. ಪಂಡಿತಾರಾಧ್ಯ ಸ್ವಾಮಿಗಳ ಉಪಸ್ಥಿತಿಯಲ್ಲಿ ಕಳೆದ ವಾರ ನಡೆದ ಸಭೆಯಲ್ಲೂ , ಹಾಲಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ರಾಜೇಶ್‌, ಮಾಜಿ ಶಾಸಕ ಬಿಜೆಪಿಯ ಎಸ್‌.ವಿ. ರಾಮಚಂದ್ರ ಮುಖಾಮುಖಿಯಾಗಿ ಸಮಾಲೋಚಿಸಿ, ಭ್ರಷ್ಟಾಚಾರ ರಹಿತ ಚುನಾವಣೆ ಆಶಯವನ್ನು ಈಡೇರಿಸಲು ಪೂರ್ಣ ಪ್ರಮಾಣದಲ್ಲಿ ಸಹಕರಿಸುವುದಾಗಿ ಹೇಳಿದರು.

ಜಗಳೂರು ಪ್ರಯೋಗಕ್ಕೆ ಸಹಕರಿಸಲು ವಿಧಾನಸಭಾ ಕ್ಷೇತ್ರದಲ್ಲಿರುವ ಲಿಂಗಾಯತ ಹೊರತಾದ ನಾನಾ ಜಾತಿ ಜನಾಂಗದ ಮಠಾಧೀಶರ ಬೆಂಬಲ ಪಡೆಯಲು ನಿರ್ಧರಿಸಲಾಗಿದೆ. ವಿವಿಧ ಮಠಾಧೀಶರ ಸಮ್ಮುಖದಲ್ಲಿ ಜಗಳೂರಲ್ಲಿಸರ್ವಪಕ್ಷ ಪ್ರತಿನಿಧಿಗಳು ಮತ್ತು ಗ್ರಾಮಪಂಚಾಯಿತಿ ಪ್ರತಿನಿಧಿಗಳ ಸಮಾವೇಶವನ್ನೂ ಇಷ್ಟರಲ್ಲೇ ಏರ್ಪಡಿಸಿ ಬೃಹತ್‌ ಸಂಕಲ್ಪ ಕೈಗೊಂಡು ಚುನಾವಣೆಯ ಹೊಸ ಪ್ರಯೋಗಕ್ಕೆ ಸಜ್ಜಾಗುತ್ತಿದೆ.

ಸಮಾಜದಲ್ಲಿಚುನಾವಣೆ ಸುಧಾರಣೆ ಮತ್ತಿತರ ಆದರ್ಶವನ್ನು ಬಿತ್ತುವುದು ಕಷ್ಟದ ಕೆಲಸ. ಹಾಗೆಂದು ನಿರಾಶರಾಗುವ ಅಗತ್ಯ ಇಲ್ಲ. ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ಎಲ್ಲರೂ ಹಿಂದೆ ಸರಿದರೆ ಬೆಕ್ಕಿಗೆ ಗಂಟೆ ಕಟ್ಟುವುದಾದರೂ ಯಾರು? ನಮ್ಮ ಗುರುಗಳ ನೇತೃತ್ವದಲ್ಲಿ ಕೈಗೆತ್ತಿಕೊಂಡ ಭ್ರಷ್ಟಾಚಾರ ಮುಕ್ತ ಚುನಾವಣೆ ಪ್ರಯೋಗ ವಿನೂತನವಾದದ್ದು. ಇದರಲ್ಲಿಯಶಸ್ವಿ ಆಗುತ್ತೇವೆ.
ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾಮಠ ಸಾಣೇಹಳ್ಳಿ

ಚುನಾವಣೆ ಸುಧಾರಣೆಯ ದೊಡ್ಡ ಹೆಜ್ಜೆಯನ್ನು ಗುರುಗಳು ಇಟ್ಟಿದ್ದಾರೆ. ಗುರುಗಳ ಮಾತನ್ನು ಯಾರೂ ಮೀರುವುದಿಲ್ಲ , ನಾವಂತೂ ಹಣ ಹೆಂಡ ರಹಿತ ಚುನಾವಣೆಗೆ ಪೂರ್ಣ ಪ್ರಮಾಣದಲ್ಲಿಸಹಕರಿಸುತ್ತೇವೆ.
ಎಸ್‌.ವಿ. ರಾಮಚಂದ್ರ , ಬಿಜೆಪಿ ಸಂಭವನೀಯ ಅಭ್ಯರ್ಥಿ

ಜಗಳೂರಿನಲ್ಲಿ ಸ್ವಾಮೀಜಿ ಕೈಗೊಂಡ ಚುನಾವಣೆ ಶುದ್ಧಿ ಕಾರ್ಯಕ್ಕೆ ನನ್ನದಂತೂ ಸಂಪೂರ್ಣ ಬೆಂಬಲ ಇದೆ. ಈ ವಿಚಾರವನ್ನು ನಾನು ಮೊದಲ ಸಭೆಯಲ್ಲೇ ಸ್ಪಷ್ಟಪಡಿಸಿದ್ದೇನೆ.
ಎಚ್‌. ಪಿ. ರಾಜೇಶ್‌, ಹಾಲಿ ಶಾಸಕ, ಕಾಂಗ್ರೆಸ್‌ ಸಂಭವನೀಯ ಅಭ್ಯರ್ಥಿ

Comments are closed.