ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಕೋರಿ 60 ಕ್ಕೂ ಹೆಚ್ಚು ಲಿಂಗಾಯತ ಸ್ವಾಮೀಜಿಗಳ ನಿಯೋಗ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾ ದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ ಸ್ವಾಮೀಜಿಗಳ ನಿಯೋಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯ ಕುರಿತು ಚರ್ಚೆ ನಡೆಸಿ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಗದಗಿನ ತೊಂಟದಾರ್ಯ ಸ್ವಾಮೀಜಿ ಬಸವ ಮೃಂತುಜಯ ಸ್ವಾಮೀಜಿ , ಮುರುಘರಾಜೇಂದ್ರ ಸ್ವಾಮೀಜಿ,ಮಾತೆ ಮಹಾದೇವಿ ಸೇರಿದಂತೆ 60 ಕ್ಕೂ ಹೆಚ್ಚು ಸ್ವಾಮೀಜಿಗಳು ನಿಯೋಗದಲ್ಲಿದ್ದರು.
ಸ್ವಾಮೀಜಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಶಾಲುಗಳನ್ನು ಹೊದೆಸಿ , ಹಾರ ಹಾಕಿ ಅಭಿನಂದಿಸಿದರು.
2 ದಿನಗಳ ಹಿಂದೆ ವೀರಶೈವ ಮಠಾಧೀಶರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ನೀವು ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡದಂತೆ ಮನವಿ ಸಲ್ಲಿಸಿ, ಶಿಫಾರಸು ಮಾಡಿದರೆ ಬೀದಿಗಿಳಿಯುವುದಾಗಿ ಮನವಿ ಸಲ್ಲಿಸಿದ್ದರು.
ನಾಳೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು ಪ್ರತ್ಯೇಕ ಧರ್ಮದ ಕುರಿತಾಗಿಯೇ ಪ್ರಮುಖ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಸಿಎಂ ಸಿದ್ದರಾಮಯ್ಯ ಎರಡೂ ಬಣಗಳ ಮನವೊಲಿಸುವಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು ಚುನವಣೆ ಹೊಸ್ತಿಲಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.
-ಉದಯವಾಣಿ
Comments are closed.