ಕರ್ನಾಟಕ

ದಾನಮ್ಮ, ಧನ್ಯಶ್ರೀ, ಪ್ರವೀಣ್‌, ಹರೀಶ್‌, ಬಾಳಿಗಾ ಹಿಂದೂಗಳಲ್ಲವೇ: ರಾಮಲಿಂಗಾರೆಡ್ಡಿ

Pinterest LinkedIn Tumblr


ಬೆಂಗಳೂರು: ಕೇಂದ್ರ ಸಚಿವರಾದ ಡಿ.ವಿ ಸದಾನಂದ ಗೌಡರು ಚುನಾವಣೆಗಾಗಿ ರಾಜಕೀಯ ಹೇಳಿಕೆ ನೀಡುವುದನ್ನು ಖಯಾಲಿ ಮಾಡಿಕೊಂಡಿದ್ದಾರೆ. ಹಿಂದೂ ಕಾರ್ಯಕರ್ತರ ಕೊಲೆ ಎಂದು ಚುನಾವಣೆಗಾಗಿ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಹಾಸ್ಯಾಸ್ಪದ ಎನಿಸಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬಿಜಾಪುರದ ದಾನಮ್ಮಳನ್ನು ಕೊಲೆ ಮಾಡಿದ್ದು ನಿಮ್ಮ ಪಕ್ಷದ ಕಾರ್ಯಕರ್ತನಲ್ಲವೇ, ಮೂಡಿಗೆರೆಯ ಧನ್ಯಶ್ರೀ ಸಾವಿಗೆ ಕಾರಣವಾಗಿದ್ದು ನಿಮ್ಮ ಪಕ್ಷದ ಮುಖಂಡನಲ್ಲವೇ, ಉಡುಪಿಯ ಪ್ರವೀಣ ಪೂಜಾರಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ನಿಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರಲ್ಲವೇ, ಬಂಟ್ವಾಳದ ಹರೀಶ ಪೂಜಾರಿ ಕೊಲೆ ಪ್ರಕರಣದಲ್ಲಿ ನಿಮ್ಮ ಸಂಘಪರಿವಾರದ ನಾಯಕ ಬಂಧನಕ್ಕೆ ಒಳಗಾಗಲಿಲ್ಲವೇ, ಮಂಗಳೂರಿಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು ನಿಮ್ಮ ಪಕ್ಷದ ಸಂಸದರಲ್ಲವೇ, ವಿನಾಯಕ ಬಾಳಿಗಾ ಸೇರಿದಂತೆ ಕೊಲೆಯಾದ ಇವರೆಲ್ಲ ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದರು.

ಇವರೆಲ್ಲರ ತಂದೆ ತಾಯಿಯ ಶಾಪ ನಿಮ್ಮ ಪಕ್ಷಕ್ಕೆ ತಟ್ಟುವುದಿಲ್ಲವೇ, ಬಿಜೆಪಿ ಕಾರ್ಯಕರ್ತರಿಂದ ಕೊಲೆಯಾದ ದಲಿತ ಹಿಂದೂಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ದೊಡ್ಡಮನಸ್ಸು ನಿಮಗಿಲ್ಲವೇ ಎಂದು ಕೇಳಿದರು.

ಕೊಲೆಯನ್ನು ಅಪರಾಧವಾಗಿಯೇ ನೋಡಿದ ಕಾರಣಕ್ಕಾಗಿ ಬಹುತೇಕ ಎಲ್ಲಾ ಕೊಲೆ ಪ್ರಕರಣದ ಅಪರಾಧಿಗಳನ್ನು ಸರಕಾರ ಇಂದು ಜೈಲಿಗಟ್ಟಿದೆ. ರಾಜ್ಯಕ್ಕೆ ಬಿಜೆಪಿಯ ಬೆಂಕಿ ಹಚ್ಚುವ ನಾಯಕರು ಬೇಕೋ ಅಥವಾ ಬೆಂಕಿ ಆರಿಸುವ ನಾಯಕರು ಬೇಕೋ ಎಂಬುದನ್ನು ಜನ ನಿರ್ಧರಿಸಿದ್ದಾರೆ ಎಂದರು.

ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಹಗಲುಗನಸು ಕಾಣಬೇಡಿ.ಮತ್ತೊಮ್ಮೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೇರಲಿದೆ. .ಯಾವುದೇ ಕೊಲೆ ಪ್ರಕರಣವಿರಲಿ, ಅಪರಾಧಿಗಳಿಗೆ ಶಿಕ್ಷೆ ನೀಡಲು ನಮ್ಮ ಪೋಲಿಸರು ಮತ್ತು ನಮ್ಮ ಸರಕಾರ ಸಶಕ್ತವಾಗಿದೆ ಎಂದು ಸಚಿವರು ಹೇಳಿದರು.

Comments are closed.