ಕರ್ನಾಟಕ

ಮೀನು ಮಾತ್ರವಲ್ಲ ಕೋಳಿ ಕೂಡ ತಿಂದಿದ್ದೆ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr


ಚಿಕ್ಕಬಳ್ಳಾಪುರ: ದೇವರ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಾನು ಮೀನು ಮಾತ್ರವಲ್ಲ ಕೋಳಿ ತಿಂದು ಧರ್ಮಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ವೇಳೆ ವೀರೇಂದ್ರ ಹೆಗ್ಗಡೆ ಅವರ ಒತ್ತಾಯಕ್ಕೆ ಮಣಿದು ದೇವಸ್ಥಾನಕ್ಕೆ ಹೋಗಿದ್ದು ನಿಜ. ಆದರೆ ತಡವಾಗುತ್ತದೆ ಎಂಬ ಕಾರಣಕ್ಕೆ ಗರ್ಭಗುಡಿ ಬಳಿ ಹೋಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

‘ಒಂದು ವೇಳೆ ಗರ್ಭಗುಡಿಗೆ ಹೋಗಿದ್ದರು ಸಹ ದೇವರು ಯಾವ ರೀತಿ ಅಪವಿತ್ರ ಆಗ್ತಿದ್ದ. ನೀವೆಲ್ಲ ಬೇಡರ ಕಣ್ಣಪ್ಪನ ಕಥೆ ಕೇಳಿಲ್ಲವ.. ಜಿಂಕೆ ಮಾಂಸ ತಿಂದವರಿಗೆ ಶಿವ ಒಲಿದಿದ್ದು’ ಎಂದು ಕಾರ್ಯಕ್ರಮದಲ್ಲಿ ಬೇಡರ ಕಣ್ಣಪ್ಪನ ಕಥೆ ಹೇಳಿದರು.

‘ಉಳ್ಳವರು ಶಿವಾಲಯವ ಮಾಡಿಹರು, ನಾನೇನು ಮಾಡಲ್ಲಯ್ಯ ಬಡವ’ ಎಂಬ ಬಸವಣ್ಣನವರ ವಚನದ ಮೂಲಕ ಬಿಜೆಪಿಗೆ ಟಾಂಗ್ ನೀಡಿದರು.

ಮಾನವ ಶರೀರವೇ ದೇಗುಲ ಎಂದು ಬಸವಣ್ಣ ಹೇಳಿದ್ದರು. ಹಾಗಿದ್ದರೆ ಮಾಂಸ ತಿನ್ನುವವರು ಏನು ಮಾಡಬೇಕು. ಮಾಂಸ ಸೇವಿಸಿದ 48 ಗಂಟೆಗಳ ಕಾಲ ದೇಹದಲ್ಲಿ ಮಾಂಸ ಇರುತ್ತದೆ. ಇವರೆಲ್ಲ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ದೇವರ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ಇಂತಹ ಆಹಾರವನ್ನೇ ಸೇವಿಸಬೇಕು. ಇಂತಹ ಆಹಾರ ಸೇವಿಸಬಾರದು ಎಂಬ ನಿಯಮ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲದವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.

ಮನಸಾಕ್ಷಿಯೇ ದೇವರು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಇತರರಿಗೆ ಕೆಟ್ಟದನ್ನು ಬಯಸುವ ಹಾಗೂ ಕೆಟ್ಟದಾಗಿ ಮಾತನಾಡುವವರು ಮನುಷ್ಯನಾಗಿರಲು ಸಾಧ್ಯವೇ ಇಲ್ಲ ಎಂದರು.

ದೇವರಿಗೆ ಎಷ್ಟೇ ಗಂಧದ ಕಡ್ಡಿ ಹಚ್ಚಿ, ತೆಂಗಿನ ಕಾಯಿ ಒಡೆದರೂ ಪ್ರಯೋಜನ ಇಲ್ಲ. ಡಾ.ರಾಜ್ ಕುಮಾರ್ ಅವರು ಅಭಿಮಾನಿ ದೇವರುಗಳೇ ಎಂದರು. ಅದೇ ರೀತಿ ಮತ ನೀಡಿದ ಜನರೇ ನನಗೆ ದೇವರು. ದೇವನೊಬ್ಬನೆ ನಾಮ ಹಲವು ಅಷ್ಟೆ ಎಂದರು.

Comments are closed.