ಕರ್ನಾಟಕ

ಬಡವರು ಬಯಸುವುದು ಮದ್ಯ ನಿಷೇಧವನ್ನು, ನೋಟು ಬ್ಯಾನ್‌ ಅಲ್ಲ: ಮೇಧಾ ಪಾಟ್ಕರ್‌

Pinterest LinkedIn Tumblr


ರಾಯಚೂರು: ದೇಶದ ದಲಿತರು, ಬಡವರು ಬಯಸುವುದು ಮದ್ಯ ನಿಷೇಧವನ್ನು ವಿನಃ ನೋಟು ಅಮಾನ್ಯದಂಥ ಕ್ರಮವಲ್ಲ. ಬಡವರ ಶೋಷಣೆ ಮೂಲಕ ಗಳಿಸುವ ಆದಾಯದಿಂದ ದೇಶದ ಅಭಿವೃದ್ಧಿ ಮಾಡುವುದು ಬೇಕಿಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ತಿಳಿಸಿದ್ದಾರೆ.

ರಾಯಚೂರಿನಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಎಪಿಎಂಸಿ ಆವರಣದಲ್ಲಿಆಯೋಜಿಸಿರುವ ರಾಜ್ಯಮಟ್ಟದ ಸಮಾವೇಶಕ್ಕೆ ನಶಾಮುಕ್ತ ಭಾರತ ಸಂಘಟನೆಯ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಮದ್ಯದ ಬಾಟಲಿ ಒಡೆದು ಚಾಲನೆ ನೀಡಿದರು.

ರಾಜಕಾರಣ, ಕಾನೂನು ತಯಾರಿಸುವವರು, ಅಧಿಕಾರಿಗಳು ಮದ್ಯ ಮಾರಾಟದ ಆದಾಯದಿಂದಲೇ ಸರಕಾರ ನಡೆಸುವ ಆಲೋಚನೆ ಉಳ್ಳವರಾಗಿರುವುದು ಆತಂಕಕಾರಿ. ದೇಶದ ಇಡೀ ವ್ಯವಸ್ಥೆ ಉದ್ಯಮಿಗಳ ಪರ ನಿಯಮ ರೂಪಿಸುವ ನಿಲುವು ತಳೆದಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.

ಬಿಹಾರದಲ್ಲಿ ಅಲ್ಲಿನ ಸಿಎಂ ಜಾರಿಗೆ ತಂದ ಮದ್ಯ ನಿಷೇಧ ಕಾನೂನು ಉತ್ತಮವಾಗಿದೆ. ಅದು ಎಲ್ಲೆಡೆ ಜಾರಿಯಾಗಬೇಕು. ಆದರೆ ಆ ಕಾನೂನು ಜಾರಿಗೆ ತಂದ ನಿತೀಶಕುಮಾರ್ ಅವರೇ ತಮ್ಮ ನಿಲುವು ಬದಲಿಸಿದ್ದು ದುರದೃಷ್ಟಕರ. ದೇಶದ ಕೆಲವೇ ರಾಜ್ಯ ಮದ್ಯ ನಿಷೇಧ ಜಾರಿಗೆ ತಂದರೆ ಸಾಲದು. ಆ ರಾಜ್ಯಗಳ ನೆರೆಯ ರಾಜ್ಯಗಳೂ ಮದ್ಯ ನಿಷೇಧಿಸಿದರೆ ಮಾತ್ರ ಉದ್ದೇಶ ಈಡೇರುತ್ತದೆ ಎಂದು ಮೇಧಾ ತಿಳಿಸಿದರು

ಪ್ರಧಾನಿ ಮೋದಿ ಅವರ ಗುಜರಾತ್ ನಲ್ಲಿ ನರ್ಮದಾ ನದಿಯ ಬೋಟ್ ಗಳಲ್ಲೇ ಮದ್ಯ ಸಾಗಣೆ ಮಾಡಲಾಗುತ್ತಿದೆ. ಮತ್ತೊಂದೆಡೆ ಪ್ರಧಾನಿ ಎಲ್ಲರ ಪ್ರಗತಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲು ಕಾಂಗ್ರೆಸ್‌ಗೆ ಒತ್ತಾಯಿಸುತ್ತಿದೆ ಎಂದು ಎಚ್ಚರಿಸಿದರು.

Comments are closed.