ಕರ್ನಾಟಕ

“ಪೇಜಾವರ ಶ್ರೀಗಳಿಗೆ ಲಿಂಗಾಯತರ ಭಯವೇಕೆ’

Pinterest LinkedIn Tumblr


ಬೆಂಗಳೂರು: “ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಪೇಜಾವರ ಶ್ರೀಗಳಿಗೆ ಭಯವೇಕೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ ಪ್ರಶ್ನಿಸಿದ್ದಾರೆ. “ಲಿಂಗಾಯತರು ಹಿಂದೂ ಧರ್ಮದ ಭಾಗವೇ ಆಗಿದ್ದಾರೆ’ ಎಂದು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ಹೇಳಿಕೆ ಬಗ್ಗೆ ಕಿಡಿಕಾರಿರುವ ಅವರು, “ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆ ಪೇಜಾವರ ಶ್ರೀಗಳು ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಲಿಂಗಾಯತ ಹೋರಾಟಕ್ಕೆ ಭಯಗೊಂಡಿರುವರೇ ಅಥವಾ ಇದರ ಹಿಂದೆ ಏನಾದರೂ ಹುನ್ನಾರ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬೌದ್ಧ, ಜೈನ, ಸಿಖ್‌ ಧರ್ಮಗಳಿಗೆ ಮಾನ್ಯತೆ ನೀಡುವ ಸಂದರ್ಭದಲ್ಲಿ ಮಾತನಾಡದ ಸಂಘ ಪರಿವಾರ, ಬಿಜೆಪಿ ನಾಯಕರು ಹಾಗೂ ಪೇಜಾವರ ಶ್ರೀಗಳು ಈಗ ಅಷ್ಟೊಂದು ಪ್ರತಿಕ್ರಿಯೆ ನೀಡುತ್ತಿರುವುದೇಕೆ? ಲಿಂಗಾಯತರು ಭಯೋತ್ಪಾದಕರಲ್ಲ, ದೇಶ ದ್ರೋಹಿಗಳೂ ಅಲ್ಲ. 850 ವರ್ಷಗಳಿಂದಲೂ ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿಲ್ಲ. ಈಗ ಹೊರಹೋಗುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಹೇಳಿದರು. ಲಿಂಗಾಯತರು ಶಿವನ ಪೂಜೆ ಮಾಡುವುದರಿಂದ ಅವರೂ ಹಿಂದೂಗಳೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಲಿಂಗಾಯತರ ಶಿವನಿಗೂ ಹಿಂದುಗಳ ಶಿವನಿಗೂ ವ್ಯತ್ಯಾಸವಿದೆ. ಹಿಂದುಗಳ ಶಿವನಿಗೆ ಆಕಾರ, ಮದುವೆ ಮಕ್ಕಳು ಎಲ್ಲ ಇದ್ದಾರೆ. ಲಿಂಗಾಯತರ ಶಿವನು ನಿರಾಕಾರನಾಗಿದ್ದು ಅವನಿಗೆ ಮದುವೆ, ಮಕ್ಕಳು ಯಾರೂ ಇಲ್ಲ ಎಂದು ಪ್ರತಿಪಾದಿಸಿದರು.

ವೀರಶೈವರು ಲಿಂಗಾಯತರಲ್ಲ: ವೀರಶೈವರು ಲಿಂಗಾಯತರೇ ಅಲ್ಲ. ಅವರು ಹಿಂದೂ ಧರ್ಮದ ಎಲ್ಲ ಆಚರಣೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ವೀರಶೈವರನ್ನು ಪ್ರತ್ಯೇ  ಕವಾಗಿ ಬಿಟ್ಟರೆ ನಾವು ಸ್ವತಂತ್ರ ಧರ್ಮ ಪಡೆದುಕೊಳ್ಳುತ್ತೇವೆ. ವೀರಶೈವರನ್ನು ಲಿಂಗಾಯತ ರೊಂದಿಗೆ ಸೇರಿಸಿಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದರು. ಪ್ರತ್ಯೇಕ ಧರ್ಮದ ಮಾನ್ಯತೆಗೆ ತಜ್ಞರ ಸಮಿತಿ ರಚಿಸುವ ಬದಲು ರಾಜ್ಯ ಸರ್ಕಾರ ನೇರವಾಗಿ ಅಲ್ಪ ಸಂಖ್ಯಾತರ ಆಯೋಗಕ್ಕೆ ನಮ್ಮ ಮನವಿಗಳನ್ನು ಕಳುಹಿಸಿ ಕೊಟ್ಟರೆ, ನಾವು ನಮ್ಮ ವಾದವನ್ನು ಅಲ್ಲಿ ಮಾಡುತ್ತೇವೆ. ಆಯೋಗದ
ಮುಂದೆ ಯಾರು ದಾಖಲೆಗಳನ್ನು ನೀಡುತ್ತಾರೆ‌, ಆ ಹೆಸರಿನಲ್ಲಿ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ದೊರೆಯಲಿದೆ ಎಂದು ಹೇಳಿದರು.

ಧರ್ಮ ಹೋರಾಟಕ್ಕೆ ವಿಚಾರವಾದಿಗಳ ಹತ್ಯೆ ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿ ಧ್ವನಿ ಎತ್ತಿದ ಸಂಶೋಧಕ ಎಂ.ಎಂ. ಕಲಬುರ್ಗಿ, ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಹಾಗೂ ಪರ್ತಕರ್ತೆ ಗೌರಿ ಲಂಕೇಶ್‌ ಹತ್ಯೆ ನಡೆದಿದೆ ಎಂಬ ಸಂಶಯ ಇದೆ ಎಂದು ಜಾಮದಾರ್‌ ಹೊಸ ಬಾಂಬ್‌ ಸಿಡಿಸಿದರು. ಕಲಬುರ್ಗಿ ಮತ್ತು ಲಿಂಗಣ್ಣ ಸತ್ಯಂಪೇಟೆ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಬಲ ಪ್ರತಿಪಾದಕರಾಗಿದ್ದರು, ಗೌರಿ ಲಂಕೇಶ್‌ ಕೂಡ ತಮ್ಮ ಪತ್ರಿಕೆಯಲ್ಲಿ ಇಪ್ಪತ್ತು ಪುಟಗಳಷ್ಟು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಬರೆದಿದ್ದರು. ಆ ಕಾರಣಕ್ಕಾಗಿಯೇ ಅವರ ಹತ್ಯೆ ನಡೆದಿದೆ ಎಂಬ ಅನುಮಾನ ಮೂಡುತ್ತಿದೆ. ನನಗೂ ಜೀವ ಬೆದರಿಕೆ ಇದೆ. ಪ್ರತ್ಯೇಕ ಧರ್ಮಕ್ಕಾಗಿ ನಡೆಯುವ ಹೋರಾಟದಲ್ಲಿ ನಾವು ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ಶಿವ ಭಕ್ತರೆಲ್ಲ ಹಿಂದೂಗಳಲ್ಲ: ನಿಡುಮಾಮಿಡಿ ಶ್ರೀ
ಮೈಸೂರು: “ಶಿವ ಭಕ್ತರೆಲ್ಲ ಹಿಂದೂಗಳಲ್ಲ. ಶಿವನನ್ನು ಪೂಜಿಸುವ ಕೆಲವು ಜನರನ್ನು ಮಾತ್ರ ಹಿಂದೂಗಳೆನ್ನಬಹುದು. ಸನಾತನಿಗಳೂ ಶಿವಭಕ್ತರಿದ್ದಾರೆ’ ಎಂದು ಮಾನವ ಧರ್ಮ ಪೀಠದ ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ  ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತ ಮೂಲ ನಿವಾಸಿಗಳ ಸಂಸ್ಕೃತಿ, ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಇದೇ ಮೊದಲ ಬಾರಿಗೆ
ಶುಕ್ರವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಬಲಿ ಚಕ್ರವರ್ತಿ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಪೇಜಾವರ ಶ್ರೀಗಳು ಶಿವನನ್ನು ಪೂಜಿಸುವವರೆಲ್ಲ ಹಿಂದೂಗಳು ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲ ಶಿವಭಕ್ತರೂ ಹಿಂದೂಗಳು ಎನ್ನುವುದು ಅನ್ಯಾಯ. ಭಾರತದ ಮೂಲ ನಿವಾಸಿಗಳಲ್ಲಿ 18 ಕೋಮುಗಳು ವೈದಿಕ ಮೌಲ್ಯಗಳನ್ನು ನಿರಾಕರಿಸಿ ಶಿವಭಕ್ತರಾಗಿದ್ದಾರೆ ಎಂದರು.

ಶಿವಭಕ್ತರ ಮೇಲೆ ದಾಳಿ ಮಾಡಿ, ಶಿವ ಸಂಸ್ಕೃತಿಯನ್ನು ನಾಶ ಮಾಡುವ ಕೆಲಸವನ್ನು ಸನಾತನಿಗಳು ಪ್ರಾಚೀನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಆರ್ಯರು ತಮ್ಮ ಹೆಣ್ಣು ಮಕ್ಕಳನ್ನು ಕಮಲ ಮುಖೀ, ಚಂದ್ರಮುಖೀ ಎಂದು ಚಿತ್ರಿಸಿ, ತಮ್ಮವರಲ್ಲದವರ ಹೆಣ್ಣು ಮಕ್ಕಳನ್ನು ಶೂರ್ಪನಖೀ, ಮಂಡೋದರಿ ಎಂದು ಬಿಂಬಿಸಿದ್ದಾರೆ ಎಂದರು. ಬೆಂಗಳೂರಿನಲ್ಲಿ ಶುಕ್ರವಾರ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

-ಉದಯವಾಣಿ

Comments are closed.