ಬೀದರ್(ಫೆ.04): ಮುಟ್ಟಿದರೆ ಮೈಲಿಗೆಯಂತೆ. ದಲಿತರಾಗಿ ಹುಟ್ಟಿದ್ದೇ ಶಾಪವಾ? ಬಿಸಿಲನಾಡು ಬೀದರ್’ನಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಔರಾದ್ ತಾಲೂಕಿನ ಹೋಟೆಲ್’ಗಳಲ್ಲಿ ದಲಿತರಿಗಾಗಿಯೇ ಪ್ರತ್ಯೇಕ ಲೋಟಗಳ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನಗಳಿಗೆ ಇಲ್ಲಿ ಪ್ರವೇಶವಿಲ್ಲ ಇಂಥಾ ಕ್ರೌರ್ಯ ಸುತ್ತಲಿನ ಎಕ್ಸ್ಕ್ಲೂಸಿವ್ ವರದಿ ಇಲ್ಲಿದೆ.
ಇಂಥಾ ಸಣ್ಣ ಹೋಟೆಲ್’ನಲ್ಲಿ ನಡೀತಿರೋ ಕ್ರೌರ್ಯ ನಿಜಕ್ಕೂ ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆಯೇ ಸರಿ. ಆ ಹೋಟೆಲ್’ನಲ್ಲಿ ಕಂಬಕ್ಕೆ ನೇತು ಹಾಕಿರುವ ಈ ಗ್ಲಾಸ್ ಕಪ್’ಗಳನ್ನ ಕೇವಲ ದಲಿತರು ಮಾತ್ರ ಬಳಸುವುದು. ಅಂದರೆ ಸವರ್ಣೀಯರಿಗೆ ಒಂದು, ದಲಿತರಿಗೆ ಒಂದು ಎನ್ನುವ ಪದ್ಧತಿ ಇಲ್ಲಿದೆ. ದಲಿತರು ಇಲ್ಲಿಗೆ ಬಂದು ಚಹಾ-ಕಾಫಿ ಕೇಳಿದರೆ, ದೂರದಲ್ಲಿ ಇಟ್ಟಿರುವ ಜಗ್’ನಲ್ಲಿ ನೀರು ತೆಗೆದುಕೊಳ್ಳಬೇಕು. ಬಳಿಕ ಕಂಬದಲ್ಲಿರುವ ಪ್ರತ್ಯೇಕ ಕಪ್’ಗಳನ್ನ ತೊಳೆದುಕೊಂಡು ಕುಡಿದು ಮತ್ತೆ ಅಲ್ಲೇ ಇಟ್ಟು ಹೋಗುವ ಅನಿಷ್ಠ ಪದ್ಧತಿ ಈಗಲೂ ಇದೆ. ಚಹಾ ಕುಡಿಯುವ ಹೊತ್ತಲ್ಲಿ ಸವರ್ಣಿಯರನ್ನು ಮುಟ್ಟದಂತೆ ಎಚ್ಚರ ವಹಿಸಬೇಕಿದೆ.
ಔರಾದ್ ತಾ. ಲಾಧ ಗ್ರಾಮದಲ್ಲಿ ಇದೆಂಥಾ ಕ್ರೌರ್ಯ?
ಈ ರೀತಿಯ ಕಠಿಣ ಅಸ್ಪೃಶ್ಯತೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಲಾಧ ಗ್ರಾಮದಲ್ಲಿ ಇಂದಿಗೂ ಇದೆ. ಇಲ್ಲಿನ ಕೆಲ ಹೋಟೆಲ್ಗಳ ಕ್ರೌರ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತೇ ಇಲ್ಲವಂತೆ. ಎರಡು ಬಾರಿ ಮೀಸಲು ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರೋ ಪ್ರಭು ಚವ್ಹಾಣ ಗಮನಕ್ಕೆ ಬಾರದಿರುವುದು ದುರಂತವೇ ಸರಿ.
ದಲಿತರಿಗೆ ಸವರ್ಣಿಯರ ಬೀದಿ ಇಂದಿಗೂ ನಿಷಿದ್ಧ!
ದಲಿತರು ಸವರ್ಣಿಯರ ಓಣಿಗೆ ಹೋಗುವಂತಿಲ್ಲ. ತಮ್ಮ ಮೇಲಿನ ಸವರ್ಣೀಯರ ದೌರ್ಜನ್ಯ ಖಂಡಿಸಿ ಮಾತಾಡಿದರೆ ಗ್ರಾಮದಿಂದ ಬಹಿಷ್ಕಾರದ ಭಯ ಕಾಡುತ್ತಿದೆ. ಆಧುನಿಕತೆ ಆವರಿಸುತ್ತಿರುವ ಈ ದಿನಗಳಲ್ಲಿ ಅಸ್ಪ್ರಶ್ಯತೆ ದಲಿತರ ಬೆನ್ನು ಬಿಟ್ಟಿಲ್ಲ ಎನ್ನುವುದನ್ನು ಬೀದರಿನ ಗ್ರಾಮೀಣ ಭಾಗವೇ ನೈಜ ಸಾಕ್ಷಿಯಾಗಿದೆ. ಈ ಪದ್ಧತಿ ಜೀವಂತವಾಗಿರುವುದು ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಅನ್ನೋದು ನೋವಿನ ವಿಚಾರ.
ಕರ್ನಾಟಕ
Comments are closed.