ಕರ್ನಾಟಕ

ಹೊಸ ವರ್ಷದ ಸಂಭ್ರಮಕ್ಕೆ ಯುವಕ ಬಲಿ

Pinterest LinkedIn Tumblr


ಬೆಂಗಳೂರು, ಜ. ೭- ಕಳೆದ ಡಿ. 31ರ ಮಧ್ಯರಾತ್ರಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ನಾಲ್ವರು ಯುವಕರಲ್ಲಿ ಓರ್ವ ಮನೆಯೊಂದರ 4ನೇ ಮಹಡಿಯಿಂದ ಕೆಳಗೆ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ ತಾವರೆಕೆರೆಯಲ್ಲಿ ನಡೆದಿದೆ.
ಟ್ಯಾನರಿರಸ್ತೆಯ ಖಾಸಗಿ ಮಾರ್ಕೆಟಿಂಗ್ ಕಂಪನಿಯ ಉದ್ಯೋಗಿ ತೌಸಿಬ್ (20) ಮೃತ ಯುವಕನಾಗಿದ್ದಾನೆ. ಡಿ. 31ರ ರಾತ್ರಿ ಮನೆಯಲ್ಲಿ ನಂದಿಬೆಟ್ಟಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದ ತೌಸಿಬ್, ಸ್ನೇಹಿತರಾದ ಶಾಕಿಬ್, ಶಹಬಾದ್ ಜೊತೆ ಸೇರಿ ಮತ್ತೊಬ್ಬ ಸ್ನೇಹಿತ ಶ್ರೀನಿವಾಸ್ ವಾಸಿಸುತ್ತಿದ್ದ ತಾವರೆಕೆರೆಗೆ ಬಂದಿದ್ದಾರೆ.
ಶ್ರೀನಿವಾಸ್ ವಾಸಿಸುತ್ತಿದ್ದ ಮನೆಯ 4ನೇ ಮಹಡಿಯಲ್ಲಿ ನಾಲ್ವರು ಸೇರಿ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದು, ಮುಂಜಾನೆ ತೌಸಿಬ್ 4ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಜೊತೆಯಲ್ಲಿದ್ದ ಸ್ನೇಹಿತರು ಘಟನೆಯನ್ನು ನೋಡಿ ಹೆದರಿ ಪರಾರಿಯಾಗಿದ್ದಾರೆ.
ಮನೆಯ ಮಾಲೀಕ ಯುವಕ ಮೃತಪಟ್ಟಿರುವುದನ್ನು ನೋಡಿ ಮಡಿವಾಳ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿಟ್ಟು ತನಿಖೆ ನಡೆಸಿದಾಗ ಆತ ಟ್ಯಾನರಿರಸ್ತೆಯ ತೌಸಿಬ್ ಎನ್ನುವುದು ಪತ್ತೆಯಾಗಿದೆ.
ತೌಸಿಬ್ ಮನೆಯವರು, ಸ್ನೇಹಿತರೆ ಆತನನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ತೌಸಿಬ್ ಜೊತೆಯಲ್ಲಿದ್ದು, ಪರಾರಿಯಾಗಿರುವ ಮೂವರಿಗಾಗಿ ಶೋಧ ನಡೆಸಿದ್ದಾರೆ ಎಂದು ಆಗ್ನೇಯ ವಲಯದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

Comments are closed.