ಕರ್ನಾಟಕ

ನೋಟು ನಿಷೇಧ ಅಳುವ ಮಗುವಿಗೆ ಚಾಕಲೇಟ್ ಕೊಟ್ಟಂತೆ: ದೇವೇಗೌಡ

Pinterest LinkedIn Tumblr

devegouda
ಬೆಂಗಳೂರು, ಜ. ೪- ಕೇಂದ್ರ ಸರ್ಕಾರದ ನೋಟು ಅಮಾನ್ಯಗೊಳಿಸುವ ತೀರ್ಮಾನ ನಿರೀಕ್ಷಿಸಿದಂತೆ ಯಶಸ್ವಿಯಾಗಿಲ್ಲ. ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡರು ಹೇಳಿದರು.
ನೋಟು ರದ್ದತಿಯಂತಹ ಸಿದ್ದ ತೀರ್ಮಾನವನ್ನು ಆರಂಭದಲ್ಲಿ ನಾವೆಲ್ಲಾ ಸ್ವಾಗತಿಸಿದೆವು. ಆದರೆ ದಿನ ಕಳೆದಂತೆ ಅದರಿಂದ ಬಡವರಿಗೆ, ರೈತರಿಗೆ ತೊಂದರೆಯಾಯಿತು. ಈ ತೀರ್ಮಾನ ಕೆಟ್ಟ ತೀರ್ಮಾನ ಎಂದು ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಎಂದು ಅವರು ಹೇಳಿದರು.
ನಗರದಲ್ಲಿಂದು ಬೆಂಗಳೂರು ಮಹಾನಗರ ಜಾತ್ಯಾತೀತ ಜನತಾದಳದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನೋಟು ರದ್ದತಿಯ ತೀರ್ಮಾನದ ನಂತರ ಕಳೆದ ಡಿ. 31 ರಂದು ಪ್ರಧಾನಿ ನರೇಂದ್ರಮೋದಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣ ತಮಗೆ ನಿರಾಸೆ ತಂದಿದೆ. ನೋಟು ರದ್ದತಿಯ ಬಗ್ಗೆ ಆ ಭಾಷಣದಲ್ಲಿ ಅವರು ಚಕಾರವೆತ್ತಲಿಲ್ಲ ಎಂದರು.
ದೇಶದ ಪ್ರಧಾನಿ ಹುದ್ದೆಯ ಬಗ್ಗೆ ತಮಗೆ ಗೌರವವಿದೆ. ಹಾಗಾಗಿ ಕಠಿಣ ಶಬ್ದಗಳಲ್ಲಿ ಟೀಕೆ ಮಾಡಲು ಇಷ್ಟ ಪಡುವುದಿಲ್ಲ. ಒಂದಂತೂ ನಿಜ ನೋಟು ರದ್ದತಿಯಿಂದ ಎಲ್ಲರಿಗೂ ತೊಂದರೆಯಾಗಿದೆ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿಗಳು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಘೋಷಣೆ ಮಾಡಿದರು. ಮುಂದೆ ಬಜೆಟ್ ಮಂಡನೆಯಾಗಬೇಕು. ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳಬೇಕು. ಈಗಲೇ ಎಲ್ಲವನ್ನೂ ಹೇಳಿದರೆ ಹೇಗೆ ಎಂದರು.
ಪ್ರಧಾನಿ ನರೇಂದ್ರಮೋದಿಯವರ ವರ್ತನೆ ಅಳುವ ಮಕ್ಕಳಿಗೆ ತಂದೆ ಚಾಕಲೆಟ್ ಕೊಟ್ಟಂತೆ ಇದೆ ಎಂದು ಅವರು ವ್ಯಂಗ್ಯವಾಡಿದರು.
ರೈತರ 60 ದಿನಗಳ ಬಡ್ಡಿ ಮನ್ನಾ ಮಾಡಲಾಗಿದೆ. ಎರಡೂವರೆ ವರ್ಷ ದೇಶವನ್ನಾಳಿದ ಪ್ರಧಾನಿ ರೈತರ ಸಂಪೂರ್ಣ ಬಡ್ಡಿಯನ್ನಾದರೂ ಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಇದು ತಮಗೆ ನೋವು ತಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಜನರಲ್ಲಿ ಈಗಾಗಲೇ ಸಂಘರ್ಷ ಆರಂಭವಾಗಿದೆ ಎಂದು ದೇವೇಗೌಡರು ಹೇಳಿದರು.
ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸದಸ್ಯತ್ವ ಅಭಿಯಾನವನ್ನು ಆರಂಭಿಸಿದ್ದೇವೆ. ಎಲ್ಲಾ 224 ಕ್ಷೇತ್ರಗಳಲ್ಲೂ ಪ್ರವಾಸ ನಡೆಸಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ದೇವೇಗೌಡರು ಹೇಳಿದರು.
ರಾಜ್ಯ ಸರ್ಕಾರದ ಬಗ್ಗೆ ಈಗ ಏನನ್ನೂ ಹೇಳುವುದಿಲ್ಲ. ಮುಂದೆ ಮಾತನಾಡುತ್ತೇನೆ ಎಂದು ದೇವೇಗೌಡರು ಹೇಳಿದರು.
ಸಿಬಿಐ ದುರ್ಬಳಕೆ
ಕೇಂದ್ರ ಸರ್ಕಾರ ಸಿಬಿಐನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಘಟನಾವಳಿಗಳು ಸಿಬಿಐ ದುರ್ಬಳಕೆಯನ್ನು ಸಾಬೀತುಪಡಿಸಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ಕುಪೇಂದ್ರರೆಡ್ಡಿ, ಪುಟ್ಟರಾಜು, ಶಾಸಕರಾದ ನಾರಾಯಣಗೌಡ, ಶರವಣ, ಪಕ್ಷದ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಬೆಂಗಳೂರು ನಗರ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Comments are closed.