ಬೆಂಗಳೂರು/ಬಾಗಲಕೋಟೆ: ತನ್ನ ವಿರುದ್ಧದ ಯಾವುದೇ ಸಿಡಿಯನ್ನು ಪ್ರಸಾರ ಮಾಡದಂತೆ ಬೀಳಗಿ ಕಾಂಗ್ರೆಸ್ ಶಾಸಕ ಜೆಟಿ ಪಾಟೀಲ್ (ಜಗದೀಶ್ ಪಾಟೀಲ್) ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ.
ಈ ಬಗ್ಗೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಜೆ.ಟಿ ಪಾಟಿಲ್, ಪಬ್ಲಿಕ್ ಟಿವಿಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ಆಧರಿಸಿ ರಾಸಲೀಲೆ ಸಿಡಿ ಬಹಿರಂಗ ಎಂಬ ಲೈನ್ ಬರುತ್ತಿರೋದನ್ನು ನೋಡಿ ರಕ್ಷಣೆಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾಗಿ ಹೇಳಿದ್ದಾರೆ.
ಇದು ಥಿಂಕ್ ಆಂಡ್ ಕ್ರಿಯೇಟೆಡ್ ಆಗಿರುವ ಕಾರಣ ಹೈ ಕೋರ್ಟ್ ಮೊರೆ ಹೋಗಿದ್ದೇನೆ. ಸಮಯ ಬಂದಾಗ ಏನು ಎಂಬುದು ಗೊತ್ತಾಗಲಿದೆ. ಈ ಘಟನೆಯಿಂದ ತುಂಬಾ ನೋವಾಗಿದೆ ಎಂದು ಹೇಳಿ ಜೆಟಿ ಪಾಟೀಲ್ ಕಾರಿನಲ್ಲಿ ಹೊರಟುಹೋಗಿದ್ದಾರೆ.
ನೀವು ತಪ್ಪೇ ಮಾಡಿಲ್ಲದಿದ್ದರೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಸಮರ್ಪಕ ಉತ್ತರ ನೀಡದೆ ಶಾಸಕರು ಯಾಕೆ ನುಣುಚಿಕೊಂಡರು ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಎಚ್.ವೈ ಮೇಟಿ ಅವರ ಸಿಡಿ ಬಹಿರಂಗದ ನಂತರ ಮುರುಗೇಶ್ ನಿರಾಣಿ ಸಂಧಾನಕ್ಕೆ ಯತ್ನಿಸಿದ್ದರು ಎಂಬ ಸುದ್ದಿಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸುತ್ತಾ ನಿರಾಣಿ ಅವರು ಜಿ.ಟಿ. ಪಾಟೀಲ್ ಸಿಡಿ ವಿಷಯವನ್ನು ಪ್ರಸ್ತಾಪಿಸಿದ್ದರು.
ಈ ಮಧ್ಯೆ ಸಿಡಿ ವಿಚಾರದ ಬಗ್ಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್, ಸಿಡಿಯನ್ನು ಯಾರು ಬೇಕಾದರೂ ಸೃಷ್ಟಿ ಮಾಡಬಹುದು. ನಿಮ್ಮದು ಮಾಡಬಹುದು ನಮ್ಮದು ಮಾಡಬಹುದು ಆದರೆ ಜೆಟಿ ಪಾಟೀಲ್ ಅಂಥವರಲ್ಲ ಎಂದು ಹೇಳುವ ಮೂಲಕ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
Comments are closed.