ಬೆಂಗಳೂರು: ಕೇಂದ್ರ ಸರ್ಕಾರ 500, ಸಾವಿರ ರೂ. ಮುಖಬೆಲೆ ನೋಟುಗಳ ಚಲಾವಣೆ ರದ್ದುಗೊಳಿಸಿದ ನಂತರ ಉಂಟಾಗಿರುವ ಹಣದ ಅಭಾವಕ್ಕೆ ಪರ್ಯಾಯವಾಗಿ ರಾಜ್ಯದ ಜನತೆ ನಿಧಾನವಾಗಿ ನಗದು ರಹಿತ ವ್ಯವಹಾರಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ.
ದಿನ ಕಳೆದಂತೆ ವ್ಯಾಪಾರ-ವಹಿವಾಟು ಚೇತರಿಕೆ ಕಾಣುತ್ತಿದ್ದು, ವಿದ್ಯಾವಂತರು, ವ್ಯಾಪಾರಿಗಳು ಮತ್ತು ಸಗಟು ವಹಿವಾಟುದಾರರು ಆನ್ಲೈನ್ನಲ್ಲಿ ಹಣ ಪಾವತಿ ಮಾಡುವುದು ಕಂಡುಬರುತ್ತಿದೆ. ಆನ್ಲೈನ್ ಮತ್ತು ಸ್ವೈಪಿಂಗ್ ಮಷಿನ್ ಬಳಕೆ ಬಗ್ಗೆ ಜನ ಮಾತನಾಡತೊಡಗಿದ್ದು, ಮೊಬೈಲ್ ಬ್ಯಾಂಕಿಂಗ್ ಬಳಕೆ ಮಾಡುತ್ತಿರುವವರ ಬಳಿ ಕೇಳಿ ಆಪ್ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.
ಸ್ವೈಪ್ ಮಷಿನ್ಗಳಿಗೆ ಬೇಡಿಕೆ: ಬೃಹತ್ವುಳಿಗೆಗಳಲ್ಲಿ ಕ್ಯಾಶ್ಲೆಸ್ ವ್ಯವಹಾರದ ಭರಾಟೆ ಜೋರಾಗಿದ್ದು, ಕೆಲವು ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಸ್ವೈಪ್ ಮಷಿನ್ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಆಸ್ಪತ್ರೆ, ಶಾಪಿಂಗ್ ಮಾಲ್, ಪೆಟ್ರೋಲ್ ಬಂಕ್, ಶಾಮಿಯಾನ ಮಳಿಗೆ ಮುಂತಾದೆಡೆ ಮಷಿನ್ ಬಳಕೆ ಪ್ರಮಾಣ ಗಣನೀಯ ಏರಿಕೆಯಾಗಿದೆ. ಬೆಂಗಳೂರಿನ ಕೆಲವು ಹೊಟೆಲ್ಗಳು, ತರಕಾರಿ, ಹಣ್ಣಿನ ಅಂಗಡಿಗಳಲ್ಲಿ 20 ರೂ. ವ್ಯವಹಾರಕ್ಕೂ ಸ್ವೈಪ್ ಮೆಷಿನ್ಗಳ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಕೆಲವೆಡೆ ಔಷಧ ಅಂಗಡಿಗಳಲ್ಲಿ ಔಷಧ, ಇನ್ನಿತರೆ ವಸ್ತುಗಳನ್ನು ಖರೀದಿಸಲು ಕ್ರೆಡಿಟ್, ಡೆಬಿಟ್ ಕಾರ್ಡ್ ‘ಸ್ವೈಪ್’ ಮಾಡಬೇಕಾದರೆ ಕನಿಷ್ಠ 200 ರೂ.ವರೆಗೆ ಖರೀದಿ ಮಾಡಲೇಬೇಕಾಗಿರುವುದು ಕೊಂಚ ಸಮಸ್ಯೆ ತಂದೊಡ್ಡಿದೆ. ಇನ್ನು ದಿನಪತ್ರಿಕೆ ಮಾರಾಟಗಾರರ ನೆರವಿಗೆ ಬೆಂಗಳೂರಿನಲ್ಲಿ ಆಪ್ ರೂಪಿಸಲಾಗಿದೆ.
ಕಮೀಶನ್ ಆತಂಕ
ಪಿಒಎಸ್ ಮಿಷನ್ ಪಡೆಯಲು ಸಾಕಷ್ಟು ನಿಯಮಗಳಿದ್ದು, ವಹಿವಾಟಿನ ಮೇಲೆ ಕಮಿಷನ್ ಕೂಡ ಕಟ್ಟಬೇಕಾಗುತ್ತದೆ. ಹಾಗಾಗಿ ಸಣ್ಣಪುಟ್ಟ ವ್ಯಾಪಾರಿಗಳು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ.
ನೆಟ್ವರ್ಕ್ ಸಮಸ್ಯೆಯೂ ಇದೆ
ಬ್ಯಾಂಕ್ಗಳ ಸ್ವೈಪಿಂಗ್ ಯಂತ್ರಗಳನ್ನು ಬಳಸಿ ಗ್ರಾಹಕರೊಂದಿಗೆ ವ್ಯವಹರಿಸುವ ಕೆಲ ಉದ್ಯಮಿಗಳು ನೆಟ್ವರ್ಕ್ ತೊಂದರೆಯನ್ನು ಎದುರಿಸುತ್ತಿದ್ದಾರೆ. ಎರಡ್ಮೂರು ಬಾರಿ ಸ್ವ್ಯಾಪ್ ಮಾಡಿದರೂ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಹಲವರ ಆರೋಪವಾಗಿದೆ. ಎಂ ಸ್ವೈಪ್ನಲ್ಲಿಯೂ ಇಂತಹದೇ ದೂರಿದ್ದು, ಪೇಟಿಎಂನಲ್ಲಿ ಮಳಿಗೆ ಮಾಲೀಕರು 10 ಸಾವಿರದ ವಹಿವಾಟು ನಡೆಸಿದ ನಂತರ ಆ ಹಣವನ್ನು ತಮ್ಮ ಖಾತೆಗೆ ಕಡ್ಡಾಯವಾಗಿ ವರ್ಗಾಯಿಸಿಕೊಳ್ಳಬೇಕು ಇಲ್ಲದಿದ್ದರೆ ಅದು ಗ್ರಾಹಕರಿಗೆ ಮರಳುತ್ತದೆ ಎಂಬ ದೂರನ್ನು ಉದ್ಯಮಿಗಳು ಹಂಚಿಕೊಂಡಿದ್ದಾರೆ.
ಪೇಟಿಎಂ ಟೋಲ್ ಫ್ರೀ ನಂಬರ್
ಪ್ರಮುಖ ಆನ್ಲೈನ್ ಪಾವತಿ ಆಪ್ ಆಗಿರುವ ಪೇಟಿಎಂ ತನ್ನ ಸಂಸ್ಥೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿನಿಧಿಗಳನ್ನು ನೇಮಿಸಿದೆ. ಆ ಸಂಸ್ಥೆಯ ಮಾರಾಟ ಪ್ರತಿನಿಧಿಗಳು ಸಣ್ಣ ವರ್ತಕರನ್ನು ಸಂರ್ಪಸಿ ಪೇಟಿಎಂ ಆಪ್ ಅಳವಡಿಸಿಕೊಡುತ್ತಿದ್ದಾರೆ. ನಗದುರಹಿತ ವಹಿವಾಟನ್ನು ಉತ್ತೇಜಿಸುವ ಉದ್ದೇಶದಿಂದ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಪಾವತಿ ಮಾಡುವ ವ್ಯವಸ್ಥೆಗೆ ಪೇಟಿಎಂ ಬುಧವಾರ ಚಾಲನೆ ನೀಡಿದೆ. 1800-1800-1234 ಟೋಲ್ ಫ್ರೀ ಸಂಖ್ಯೆಯ ಮೂಲಕ ಗ್ರಾಹಕರು ಮತ್ತು ವ್ಯಾಪಾರಿಗಳು ನಗದು ಪಾವತಿ ಮತ್ತು ಸ್ವೀಕೃತಿ ಹಾಗೂ ಮೊಬೈಲ್ ರೀಚಾರ್ಜ್ವಾಡಲು ಅನುಕೂಲ ಮಾಡಿಕೊಟ್ಟಿರುವ ಪೇಟಿಎಂ, ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯ ಮೂಲಕ ನೋಂದಾಯಿಸಿ, 4 ಅಂಕಿಯ ಪೇಟಿಎಂ ಪಿನ್ ಹೊಂದಿಸಿಕೊಳ್ಳಲು ಆಯ್ಕೆ ನೀಡಿದೆ. ಇದೀಗ ದೇಶಾದ್ಯಂತ 16 ಕೋಟಿಗೂ ಅಧಿಕ ಜನರು ಪೇಟಿಎಂ ಬಳಕೆ ಆಯ್ಕೆಮಾಡಿಕೊಂಡಿದ್ದಾರೆ.
ಜಾಗೃತಿ ಅಗತ್ಯ
ಕ್ಯಾಶ್ಲೆಸ್ ವ್ಯವಹಾರದ ಬಗ್ಗೆ ಜಾಗೃತಿ ಮೂಡದ ಕಾರಣ ಉನ್ನತ ಮಟ್ಟದಲ್ಲೇ ಕ್ಯಾಶ್ಲೆಸ್ ವ್ಯವಹಾರ ನಡೆಯುತ್ತಿದೆ. ಆನ್ಲೈನ್ನಲ್ಲಿ ವಸ್ತುಗಳನ್ನು ಖರೀದಿಸುವವರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸವಾಗಿಲ್ಲ. ಆನ್ಲೈನ್ ವ್ಯವಹಾರದ ಬಗ್ಗೆ ಹೆಚ್ಚಿನ ಅರಿವು ಇರದ ಕಾರಣ ಹಣ ಕಳೆದುಕೊಳ್ಳಬಹುದೆಂಬ ಆತಂಕವೂ ಜನರನ್ನು ಕಾಡುತ್ತಿದೆ. ಪ್ರಮುಖ ನಗರಗಳಲ್ಲಿ ಫ್ಲಿಪ್ಕಾರ್ಟ್, ಅಮೇಜಾನ್ ಸೇರಿದಂತೆ ಆನ್ಲೈನ್ ಕಂಪನಿಗಳ ಡೆಲಿವರಿ ಬಾಯ್ಗಳು ಸ್ವೈಪಿಂಗ್ ಮಶಿನ್ ಜತೆಯೇ ಮನೆಗಳಿಗೆ ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆನ್ಲೈನ್, ಸ್ಟೈಪಿಂಗ್ ಸೇವೆ ದೊರಕುತ್ತಿಲ್ಲ.
ಮಂಗಳೂರು ಮುಂದೆ
ರಾಜ್ಯದಲ್ಲೇ ಮೊದಲ ಬಾರಿ ಮಂಗಳೂರು ನಗರದಲ್ಲಿ ನಗದು ರಹಿತ ಆಟೋ ರಿಕ್ಷಾ ಸೇವೆ ಡಿ.6ರಂದು ಆರಂಭ ಗೊಂಡಿದೆ. ಪೇಟಿಎಂ ಮೂಲಕ ಹಣ ಪಾವತಿ ವ್ಯವಸ್ಥೆ ಕಲ್ಪಿಸಲಾಗಿದೆ. ನಗದು ರಹಿತ ವ್ಯವಹಾರಕ್ಕೆ ಕೆಲ ಹೋಟೆಲ್ಗಳೂ ಸಿದ್ಧತೆ ನಡೆಸಿವೆ. ಮೆಸ್ಕಾಂ, ಬಿಎಸ್ಎನ್ಎಲ್ ಸೇರಿದಂತೆ ಸಾರ್ವಜನಿಕ ರಂಗದ ಕಂಪನಿಗಳು ಕ್ಯಾಶ್ಲೆಸ್ ವ್ಯವಹಾರಕ್ಕೆ ಈ ಹಿಂದೆಯೇ ಉತ್ತೇಜನ ನೀಡಿವೆ.
ಚಹಾ ಅಂಗಡಿಯಲ್ಲೂ ಕ್ಯಾಶ್ಲೆಸ್ ವ್ಯವಹಾರ
ವಡೋದರ: ಗುಜರಾತ್ನ ವಡೋದರಾ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರಕ್ಕೆ ಸಹಿ ಹಾಕಿದ್ದ ವ್ಯಕ್ತಿಯ ಚಹಾ ಅಂಗಡಿಯಲ್ಲಿ ಈಗ ನಗದು ರಹಿತ ವಹಿವಾಟು ಆರಂಭಗೊಂಡಿದೆ.
ಚಹಾ ಅಂಗಡಿ ಮಾಲೀಕ ಕಿರಣ್ ಮಾಹಿದ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನಾಮಪತ್ರಕ್ಕೆ ಸಹಿ ಹಾಕಿದ ನಂತರ ಸುದ್ದಿಯಾಗಿದ್ದರು. ಮೋದಿ ಅನುಯಾಯಿಯಾಗಿರುವ ಇವರು, ನೋಟು ನಿಷೇಧದ ನಂತರ ತಾವು ಕೂಡ ನಗದುರಹಿತ ವಹಿವಾಟು ನಡೆಸಲು ಮುಂದಾಗಿದ್ದು, ಕಾರ್ಡ್ ಸ್ವೈಪಿಂಗ್ ಯಂತ್ರವನ್ನು ಖರೀದಿಸಿದ್ದಾರೆ. ಸದ್ಯ ವಡೋದರ ಹಳ್ಳಿ ತಂಬೆಲ್ಲಾ ನಗದುರಹಿತ ವಹಿವಾಟು ನಡೆಯುತ್ತಿದೆ. ಮೋದಿ ಅವರು ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ತಮ್ಮ ನಾಮಪತ್ರಕ್ಕೆ ನನ್ನಂತಹ ಬಡವ ಹಾಗೂ ಸಿರಿವಂತರೊಬ್ಬರ ಸಹಿ ಪಡೆದಿದ್ದರು. ಈಗ ಮತ್ತೊಮ್ಮೆ ನೋಟು ನಿಷೇಧ ನೀತಿಯಿಂದ ಸಿರಿವಂತರು ಹಾಗೂ ಬಡವರ ನಡುವೆ ಸಮಾನತೆ ತಂದಿದ್ದಾರೆ ಎಂದು ಹೆಮ್ಮೆ ಪಡುತ್ತಾರೆ ಕಿರಣ್.
Comments are closed.