ಬೆಂಗಳೂರು: ಮಾಸ್ತಿಗುಡಿ ಶೂಟಿಂಗ್ ವೇಳೆ ದುರಂತ ಸಾವಿಗೀಡಾಗಿದ್ದ ರಾಘವ್ ಉದಯ್ ಇಂದು ಪಂಚಭೂತಗಳಲ್ಲಿ ಲೀನರಾದರು. ಬನಶಂಕರಿ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಉದಯ್’ನ ಅಂತ್ಯಸಂಸ್ಕಾರ ನಡೆಯಿತು. ಉದಯ್’ನ ತಾತನ ಸಮಾಧಿಯನ್ನು ಅಗೆದು ಅದೇ ಸ್ಥಳದಲ್ಲಿ ಉದಯ್ ಶವ ಹೂಳಲಾಯಿತು.
ಬೆಂಗಳೂರಿನ ಬನಶಂಕರಿ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ರಾಘವ್ ಉದಯ್ ಅವರ ಅಂತ್ಯಸಂಸ್ಕಾರ ನೆರವೇರಿತು.
ಇದಕ್ಕೂ ಮುನ್ನ, ಬನಶಂಕರಿ ಬಳಿಯ ಯಡಿಯೂರಿನಲ್ಲಿರುವ ಉದಯ್ ನಿವಾಸದಲ್ಲಿ ಸಾವಿರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ಪುನೀತ್ ರಾಜಕುಮಾರ್, ಭಾರತಿ ವಿಷ್ಣುವರ್ಧನ್, ಶಿವರಾಂ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರೂ ಅಂತಿಮ ದರ್ಶನ ಪಡೆದರು. ಆರ್.ಅಶೋಕ್, ಸರವಣ ಮೊದಲಾದ ರಾಜಕೀಯ ಮುಖಂಡರೂ ಸ್ಥಳಕ್ಕೆ ಆಗಮಿಸಿ ಉದಯ್ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ವೇಳೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ನಿನ್ನೆ ಮಧ್ಯಾಹ್ನ ಉದಯ್ ಅವರ ಮೃತದೇಹ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ನಿನ್ನೆ ರಾತ್ರಿ ಬೆಂಗಳೂರಿನ ಉದಯ್ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಗಿದ್ದು ಅಂತಿಮ ದರ್ಶನಕ್ಕೆ ಅಣಿ ಮಾಡಲಾಗಿತ್ತು.
ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರವಾಗಿದ್ದರು.
Comments are closed.