ಬೆಂಗಳೂರು, ಸೆ. ೧೨- ಅನ್ನಭಾಗ್ಯ ಯೋಜನೆಯ ಹಮಾಲಿ ಕಾರ್ಮಿಕರ ಕೆಲಸದ ಭದ್ರತೆಗೆ ಹಾಗೂ ಕೂಲಿ ಹೆಚ್ಚಳ ಮತ್ತು ಹಮಾಲಿ ಕಲ್ಯಾಣ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಸೆಪ್ಟೆಂಬರ್ 23ರ ಬೆಳಗ್ಗೆ 10.30ಕ್ಕೆ ವಿಧಾನಸೌಧ ಚಲೋ ಮತ್ತು ಅನಿರ್ದಿಷ್ಟಾವಾಧಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಲಾಗುವುದು ಎಂದು ಕರ್ನಾಟಕ ಶ್ರಮಿಕ ಶಕ್ತಿ ರಾಜ್ಯಾಧ್ಯಕ್ಷ ವರದ ರಾಜೇಂದ್ರ ತಿಳಿಳಿಸಿದರು.
ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಸಾವಿರಾರು ಹಮಾಲಿ ಕಾರ್ಮಿಕರು ಉದ್ಯೋಗ ಭದ್ರತೆಯಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಸಂಸ್ಥೆಗಳ 320 ಗೋದಾಮುಗಳಲ್ಲಿ ನಿರಂತರವಾಗಿ ಧಾನ್ಯಗಳ ಲೋಡಿಂಗ್ ಅನ್ಲೋಡಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ಹಿಂದೆ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅನೇಕ ಹೋರಾಟಗಳನ್ನು ನಡೆಸಲಾಗಿದೆ. ಆದರೂ ಸಹ ಸರ್ಕಾರ ಕಾರ್ಮಿಕರಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದರು.
ಪ್ರತಿ ಕೂಲಿ ಕಾರ್ಮಿಕರ ವೇತನ ಹೆಚ್ಚಳಗೊಳ್ಳಬೇಕಿದೆ. ಪ್ರಸ್ತುತ ಹಮಾಲಿ ಕಾರ್ಮಿಕರು ಅತ್ಯಂತ ಕಡಿಮೆ ಕೂಲಿ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಕಾರಣ ಅನ್ನಭಾಗ್ಯ ಯೋಜನೆಯಡಿ ಕೆಲಸ ಮಾಡುವ ಎಲ್ಲ ಹಮಾಲಿ ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸಬೇಕು. ಸರ್ಕಾರದಿಂದ ಗುರುತಿನ ಚೀಟಿ ಒದಗಿಸಿಬೇಕು.
ಎಫ್ಟಿಐ ಮಾದರಿಯಲ್ಲಿ ಕೂಲಿ ಹಣ ನಿಗದಿ ಪಡಿಸಬೇಕು. ಗೋದಾಮುಗಳಲ್ಲಿ ಸಾಗಿಸುವ ಧಾನಕ್ಕೆ ಪ್ರತಿ ಕ್ವಿಂಟಾಲ್ಗೆ 24 ರೂ.ಗಳನ್ನು ನಿಗದಿಪಡಿಸಬೇಕು. ಪಡಿತರ ಸಾಗಾಣಿಕೆಯನ್ನು ಎಫ್ಟಿಐನಿಂದ ತಿಂಗಳ ಒಂದನೇ ತಾರೀಖಿನಿಂದ 15ನೇ ತಾರೀಖಿನವರೆಗೆ, ಸಗಟು ಗೋದಾಮುಗಳಿಂದ ಪಡಿತರ ವಿತರಕ ಅಂಗಡಿಗಳಿಗೆ 16ರಿಂದ 30ರ ವರೆಗೆ ಸಾಗಾಣೆ ಮಾಡಿ ಮುಗಿಸಬೇಕು.
ಸರ್ಕಾರ ನಿಗದಿ ಮಾಡಿರುವ ಮಾರ್ಗ ನಕ್ಷೆಯ ಹಳೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ರಾಜ್ಯ ಉಗ್ರಾಣ ನಿಗಮ ಗೋದಾಮುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕರಿಗೂ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಬೇಕು.ಇಎಸ್ಐ, ಪಿಎಫ್ ಜಾರಿ ಮಾಡಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಹಮಾಲಿ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ದೇವರಾಜ್, ಕರೀನಾಯಕ, ಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.