ಕರ್ನಾಟಕ

ಸ್ಟಾರ್‌ ಹೋಟೆಲ್‌ನಲ್ಲಿ ಕಬಾಲಿ ಶೋ ರದ್ದು

Pinterest LinkedIn Tumblr

kabaliಬೆಂಗಳೂರು: ಬೆಂಗಳೂರಿನ ಪಂಚತಾರಾ ಹೋಟೆಲ್‌ಗ‌ಳಲ್ಲಿ ರಜನೀಕಾಂತ್‌ ಅಭಿನಯದ “ಕಬಾಲಿ’ ಚಿತ್ರ ಪ್ರದರ್ಶನವನ್ನು ರದ್ದು ಪಡಿಸಲಾಗಿದೆ.
ಈ ಕುರಿತು ಬುಧವಾರ ಸ್ಪಷ್ಟನೆ ನೀಡಿರುವ ಚಿತ್ರ ಪ್ರದರ್ಶಕ ಲಹರಿ ವೇಲು, ಸಿನಿಮಾಟೋಗ್ರಫಿ ಕಾಯ್ದೆ ಅನ್ವಯ ಪಂಚತಾರಾ ಹೋಟೆಲ್‌
ಗಳಲ್ಲಿ ಚಿತ್ರಪ್ರದರ್ಶನ ಮಾಡುವಂತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ಆದೇಶ ಕೂಡ ಬಂದಿದೆ. ಹಾಗಾಗಿ, ನಾವು ಆಯೋಜಿಸಬೇಕಿದ್ದ “ಕಬಾಲಿ’ ಚಿತ್ರ
ಪ್ರದರ್ಶನವನ್ನು ರದ್ದು ಮಾಡಿದ್ದೇವೆ ಎಂದು ಹೇಳಿದರು.

ನಾನು ಕಾನೂನಿಗೆ ಗೌರವ ಕೊಡುತ್ತೇನೆ. ಚಿತ್ರರಂಗ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೂ ಗೌರವ ಇದೆ. ಕಾನೂನು ಬಾಹಿರವಾಗಿ ಯಾವ
ಕೆಲಸವನ್ನೂ ಮಾಡುವುದಿಲ್ಲ. ಆದರೆ, ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೆ. ಅದು ಈಡೇರಲಿಲ್ಲ. ಈಗಾಗಲೇ ಮುಂಗಡ ಹಣ ಪಾವತಿಸಿ, ಟಿಕೆಟ್‌
ಕಾಯ್ದಿರಿಸಿದ್ದವರಿಗೆ ಹಣವನ್ನು ಕೂಡಲೇ ಹಿಂದಿರುಗಿಸಲಾಗುವುದು ಎಂದರು.

ಇದಕ್ಕೂ ಮುನ್ನ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರದರ್ಶಕರ ಸಭೆ ನಡೆದಿತ್ತು. ಸಭೆಯಲ್ಲಿ, ಸ್ಟಾರ್‌ ಹೋಟೆಲ್‌ಗ‌ಳಲ್ಲಿ “ಕಬಾಲಿ’ ಚಿತ್ರ
ಪ್ರದರ್ಶನ ಮಾಡಿದರೆ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳಲಿರುವ “ಕಬಾಲಿ’ ಚಿತ್ರವನ್ನು ರದ್ದು ಮಾಡಲು ನಿರ್ಧರಿಸಲಾಗಿತ್ತು.
ಸಂಜೆ ತುರ್ತು ಪತ್ರಿಕಾಗೋಷ್ಠಿ ಕರೆದು ವಿವರ ನೀಡಿದ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಈಗಾಗಲೇ ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಪಂಚತಾರಾ ಹೋಟೆಲ್‌ನಲ್ಲಿ “ಕಬಾಲಿ’ ಚಿತ್ರ ಪ್ರದರ್ಶನಕ್ಕೆ ಅವಕಾಶ
ನೀಡಬಾರದು ಎಂದು ಆಗ್ರಹಿಸಿದ್ದೇವೆ ಎಂದು ಹೇಳಿದ್ದರು.

“ಕಬಾಲಿ’ ಚಿತ್ರವನ್ನು ಮೊದಲ ಬಾರಿಗೆ ನಾಲ್ಕು ಜನಪ್ರಿಯ ಪಂಚತಾರಾ ಹೋಟೆಲ್‌ಗ‌ಳಲ್ಲಿ ಬಿಡುಗಡೆ ಮಾಡಲು ಲಹರಿ ವೇಲು ಮುಂದಾಗಿದ್ದರು.
ಕುಮಾರಕೃಪ ರಸ್ತೆಯಲ್ಲಿರುವ ಲಲಿತ್‌ ಅಶೋಕ್‌, ಯಲಹಂಕದ ರಾಯಲ್‌ ಆರ್ಕಿಡ್‌ ಯಲಹಂಕ, ಜೆ.ಡಬ್ಲ್ಯು. ಮೇರಿಯಟ್‌, ಏರ್‌ಪೋರ್ಟ್‌
ರಸ್ತೆಯಲ್ಲಿರುವ ಕ್ರೌನ್‌ ಪ್ಲಾಜಾ ಎಂಬ ಪಂಚತಾರಾ ಹೋಟೆಲ್‌ ಗಳಲ್ಲಿ ಚಿತ್ರ ಪ್ರದರ್ಶಿಸಲು ತಯಾರಿ ಮಾಡಿಕೊಂಡಿದ್ದರು. ಸ್ಟಾರ್‌ ಹೋಟೆಲ್‌
ನ ಬಾಲ್‌ ರೂಮ್‌ಗಳಲ್ಲಿ ಚಿತ್ರ ಪ್ರದರ್ಶನ ಮಾಡುವುದರ ಜೊತೆಗೆ ಊಟ ಫ್ರಿ ಎಂದು ಹೇಳಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಮಂಡಳಿ
ಅಧ್ಯಕ್ಷ ಸಾ.ರಾ.ಗೋವಿಂದು, ಮಾಜಿ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್‌, ಥಾಮಸ್‌ ಡಿಸೋಜ, ಕಾನೂನು ಬಾಹಿರವಾಗಿ ಚಿತ್ರ ಪ್ರದರ್ಶನ
ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಮಂಡಳಿಯಿಂದ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಯನ್ನೂ ಮಾಡಿದ್ದರು.
-ಉದಯವಾಣಿ

Comments are closed.