ಕರ್ನಾಟಕ

ಅನಧಿಕೃತ ಬ್ಯಾನರ್ ತೆರವು

Pinterest LinkedIn Tumblr

2dinesh-gunduroa1clrಬೆಂಗಳೂರು, ಜು. ೨- ಬಿಬಿಎಂಪಿ ಹಾಗೂ ಬಿ. ಪ್ಯಾಕ್ ಸಂಸ್ಥೆ ಜಂಟಿಯಾಗಿ ನಗರದ 8 ವಲಯಗಳಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಸಾವಿರಕ್ಕೂ ಹೆಚ್ಚು ಬಂಟಿಂಗ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿದೆ.

ಇಂದು ಬೆಳಿಗ್ಗೆ `ಕಿಲ್ ಬಿಲ್ಸ್’ ಆಂದೋಲನದಡಿ 8 ಗಂಟೆಯಿಂದಲೇ ಆರಂಭವಾದ ತೆರವು ಕಾರ್ಯಾಚರಣೆಯಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಿ. ಪ್ಯಾಕ್ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಕೈಜೋಡಿಸಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಕಿತ್ತು ಹಾಕಿದ್ದಾರೆ.
ನಗರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬಳಿಯಿಂದ ಆರಂಭವಾದ ತೆರವು ಕಾರ್ಯಾಚರಣೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದ್ದು, ಮಧ್ಯಾಹ್ನದ ವೇಳೆಗೆ 100ಕ್ಕೂ ಹೆಚ್ಚು ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಸಾರ್ವಜನಿಕರ ಸಹಾಯದಿಂದಲೇ ತೆಗೆದು ಹಾಕಲಾಯಿತು.
ದಕ್ಷಿಣ ವಲಯದ ಗಣೇಶ ಭವನ, ಮಾರುತಿ ವೃತ್ತ, ಮಹದೇವಪುರ ವಲಯದ ಹೊರಮಾವು ಸಿಗ್ನಲ್ ಬಳಿ ದಾಸರಹಳ್ಳಿಯ ಜಾಲಹಳ್ಳಿ ಕ್ರಾಸ್, ರಾಕ್‌ಲೇನ್ ಮಾಲ್ ಮತ್ತಿತರ ಕಡೆ ಆಯಾ ಭಾಗದ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಸಹಾಯದಿಂದ ಪೋಸ್ಟರ್‌ಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.
ಬೊಮ್ಮನಹಳ್ಳಿ ವಲಯದ ನಂದಿನಿ ಕೂಲ್ ಜಾಯಿಂಟ್, ರಾಜರಾಜೇಶ್ವರಿ ನಗರದ ಯಶವಂತಪುರ ರೈಲು ನಿಲ್ದಾಣ, ಯಲಹಂಕ ವಲಯದ ಡೈರಿ ವೃತ್ತ, ಉಡುಪಿ ಹೋಟೆಲ್‌ನ ಸುತ್ತಮುತ್ತ ಪೋಸ್ಟರ್‌ಗಳನ್ನು ಕಿತ್ತು ಹಾಕಿದ ಬಿ.ಪ್ಯಾಕ್ ಸಂಸ್ಥೆಯ ಪದಾಧಿಕಾರಿಗಳು ನಗರದ ಸೌಂದರ್ಯ ಹದಗೆಡಲು ಕಾರಣವಾಗಿರುವ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಮುಂದೆ ಹಾಕದಂತೆ ಬಿಬಿಎಂಪಿ ಎಚ್ಚರವಹಿಸಬೇಕೆಂದು ಒತ್ತಾಯಿಸಿದರು.

Comments are closed.