
ನವದೆಹಲಿ: ಭಾರತದಲ್ಲಿ ಹಲವಾರು ಧಾರ್ಮಿಕ ಕೇಂದ್ರಗಳಿದ್ದು, ಕೆಲವು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಹೀಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಕಾಣಿಕೆಯನ್ನು ಅರ್ಪಿಸುತ್ತಾರೆ. ಇದರಿಂದ ಹೆಚ್ಚು ಆದಾಯವನ್ನು ಹೊಂದಿರುವ ದೇವಾಲಯಗಳ ಪಟ್ಟಿ ಇಲ್ಲಿದೆ ನೋಡಿ. ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭ ಸ್ವಾಮಿ ದೇವಾಲಯ ದೇಶದ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಬರೋಬ್ಬರಿ 1 ಲಕ್ಷ ಕೋಟಿ ರೂ. ಆದಾಯ ಹೊಂದಿದೆ.
ಆಂಧ್ರ ಪ್ರದೇಶದಲ್ಲಿರುವ ತಿರುಪತಿ ತಿರುಮಲ ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಿದ್ದು, ವಾರ್ಷಿಕ ಸುಮಾರು 900 ಕೋಟಿ ರೂ. ಆದಾಯ ಹೊಂದಿದೆ. ಇಲ್ಲಿ 14,000 ಖಾಯಂ ನೌಕರರಿದ್ದಾರೆ. ಅದೇ ರೀತಿ ಸುಮಾರು 50 ಟನ್ಗೂ ಅಧಿಕ ಚಿನ್ನವಿದ್ದು, ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಇಡಲಾಗಿದೆ. ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಶಿರಡಿ ಸಾಯಿಬಾಬಾ ಮಂದಿರಕ್ಕೆ 540 ಕೋಟಿ ರೂ. ಆದಾಯವಿದ್ದು, ಭಕ್ತರು ವಜ್ರ ಮೊದಲಾದ ಬೆಲೆ ಬಾಳುವ ಕಾಣಿಕೆಗಳನ್ನು ಅರ್ಪಿಸುತ್ತಾರೆ.
ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ವಾರ್ಷಿಕ 500 ಕೋಟಿ ರೂ. ಆದಾಯವಿದೆ. 12 ಟನ್ ಚಿನ್ನವಿದೆ. ಪ್ರತಿವರ್ಷ ವೈಷ್ಣೋದೇವಿ ದರ್ಶನಕ್ಕೆ 10 ಮಿಲಿಯನ್ ಮಂದಿ ಭೇಟಿ ನೀಡುತ್ತಿದ್ದು, ತಿರುಪತಿ ಬಿಟ್ಟರೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ದೇವಾಲಯ ಇದಾಗಿದೆ. ಮುಂಬೈನಲ್ಲಿರುವ ಸಿದ್ಧಿವಿನಾಯಕ ಸ್ವಾಮಿ ದೇವಾಲಯ ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದ್ದು, ಇಲ್ಲಿ 3.75 ಕೆಜಿ ಚಿನ್ನದ ಚೌಕಟ್ಟು ಹಾಕಲಾಗಿದೆ. ಅಲ್ಲದೇ, ವಾರ್ಷಿಕ 125 ಕೋಟಿ ರೂ. ಆದಾಯ ಹೊಂದಿದೆ.
ಅಮೃತಸರದ ಗೋಲ್ಡನ್ ಟೆಂಪಲ್ ಕೂಡ ಅಪಾರ ಸಂಖ್ಯೆ ಭಕ್ತರು ಭೇಟಿ ಕೊಡುವ ಮತ್ತು ಹೆಚ್ಚು ಆದಾಯ ಹೊಂದಿದ ದೇವಾಲಯಗಳಲ್ಲಿ ಒಂದಾಗಿದೆ. ನಂತರದ ದೇವಾಲಯಗಳ ಪಟ್ಟಿಯಲ್ಲಿ ಮಧುರೈ ಮೀನಾಕ್ಷಿ ದೇವಾಲಯವಿದ್ದು, ವಾರ್ಷಿಕ ಸುಮಾರು 10 ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. 60 ಕೋಟಿ ರೂ. ವಾರ್ಷಿಕ ಆದಾಯವನ್ನು ಈ ದೇವಾಲಯ ಹೊಂದಿದೆ. ಕೇರಳದ ಶಬರಿಮಲೆ ದೇವಾಲಯಕ್ಕೆ ವಾರ್ಷಿಕ 105 ಕೋಟಿ ರೂ. ಆದಾಯ ಬರುತ್ತದೆ. ಕೇರಳದ ಗುರುವಾಯೂರು ದೇವಾಲಯ 50 ಕೋಟಿ ರೂ. ವಾರ್ಷಿಕ ಆದಾಯ ಹೊಂದಿದೆ. ಪುರಿ ಜಗನ್ನಾಥ ದೇವಾಲಯ ಕೂಡ ಶ್ರೀಮಂತ ದೇವಾಲಯವಾಗಿದ್ದು, 208 ಕೆಜಿ ಚಿನ್ನ, ಸುಮಾರು 30,000 ಎಕರೆ ಜಮೀನು ಸ್ವಾಮಿಯ ಹೆಸರಿನಲ್ಲಿದೆ. ಗುಜರಾತ್ನ ಸೋಮನಾಥ ದೇವಾಲಯ 109 ಕೆಜಿ ಚಿನ್ನ ಹೊಂದಿದ್ದು, ಈ ದೇವಾಲಯ ಟ್ರಸ್ಟ್ 1639 ರೂ ಮೌಲ್ಯದ ಭೂಮಿಯನ್ನು ಹೊಂದಿದೆ. ಇತ್ತೀಚೆಗೆ ವಜ್ರದ ವ್ಯಾಪಾರಿಯೊಬ್ಬರು 40 ಕೆಜಿ ಚಿನ್ನ ಅರ್ಪಿಸಿದ್ದಾರೆ. ಅದೇ ರೀತಿ ವಾರಣಾಸಿಯ ಕಾಶಿ ವಿಶ್ವನಾಥ, ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯಗಳು ಶ್ರೀಮಂತ ದೇವಾಲಯಗಳು ಎನಿಸಿಕೊಂಡಿವೆ.
Comments are closed.