ಬೆಂಗಳೂರು: ಈತ ಸಾಮಾನ್ಯ ಕಳ್ಳನಲ್ಲ…ಮಹಾನ್ ಕಳ್ಳ. ಮೃತ ತಂದೆ ಹಾಗೂ ಅಣ್ಣನ ಪ್ರತಿಮೆ ಮಾಡಿಸುವ ಸಲುವಾಗಿಯೇ ಈತ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ. ಅಂದ ಹಾಗೆ ಈ ಕಳ್ಳನ ಹೆಸರು ತಲಪಾಡ್ ನಾವಗಾನ್ ಭಾಯ್ ಅಲಿಯಾಸ್ ಶಂಕರ್!
ಗುಜರಾತ್ ಮೂಲದ ಶಂಕರ್ ಎಂಬಾತ ಬೆಂಗಳೂರಿನ ಬನಶಂಕರಿಯಲ್ಲಿ ವಾಸವಾಗಿದ್ದ. ಈತನ ತಂದೆ ಹಾಗೂ ಅಣ್ಣ ಕೂಡಾ ಕಳ್ಳತನ ಮಾಡಿಕೊಂಡಿದ್ದರು. ಶಂಕರನ ತಂದೆ ಮತ್ತು ಅಣ್ಣ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ಪ್ರತಿಮೆ ನಿರ್ಮಿಸಲು ಶಂಕರ್ ಮುಂದಾಗಿದ್ದ.
ಕಳ್ಳತನ ಮಾಡಿಯೇ ಬರೋಬ್ಬರಿ 100 ಕೆಜಿ ತೂಕದ ತಂದೆಯ ಬೆಳ್ಳಿ ವಿಗ್ರಹ ಮಾಡಿಸಿದ್ದ. ಕಳ್ಳ ಶಂಕರ್ ನಿಂದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ತಂದೆ ಹಾಗೂ ಅಣ್ಣನ ಬೆಳ್ಳಿ ಪ್ರತಿಮೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳ ಶಂಕರ್ ನನ್ನು ವಿಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದರು.
-ಉದಯವಾಣಿ