ಬೆಂಗಳೂರು: ಪ್ರೇಮ ವೈಫಲ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ, ಅದಕ್ಕೂ ಮುಂಚೆ ಆತ್ಮಹತ್ಯೆ ನಿರ್ಧಾರ ಕುರಿತು ಮಾತನಾಡಿ ಮೊಬೈಲ್ನಲ್ಲಿ ಸ್ವಯಂ ಚಿತ್ರಿಸಿಕೊಂಡ ವಿಡಿಯೊ ತುಣುಕನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾರೆ.
ವೀವರ್ಸ್ ಕಾಲೋನಿಯ ನಿವಾಸಿ ಅರುಣ್ ಕುಮಾರ್ (25) ಆತ್ಮಹತ್ಯೆ ಮಾಡಿಕೊಂಡವರು. ಖಾಸಗಿ ಕಂಪೆನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು.
ಇದಕ್ಕೆ ಯುವತಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ತಮ್ಮ ಪುತ್ರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಯುವತಿ ಮನೆಯವರು ಅರುಣ್ ವಿರುದ್ಧ ಜನವರಿ 29ರಂದು ಮೈಕೊ ಲೇಔಟ್ ಠಾಣೆಗೆ ದೂರು ಕೊಟ್ಟಿದ್ದರು.
ಈ ಸಂಬಂಧ ಅರುಣ್ ಅವರನ್ನು ಠಾಣೆಗೆ ಕರೆಸಿದ್ದ ಸಿಬ್ಬಂದಿ, ಯುವತಿ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದರು. ಬಳಿಕ ಆ ಯುವತಿ ಕೂಡ ಅರುಣ್ ಸಂಪರ್ಕ ಕಡಿಮೆ ಮಾಡಿದ್ದರು.
ಘಟನೆ ಸಂಬಂಧ, ಅರುಣ್ ಕುಟುಂಬದವರು ಯುವತಿ ಮನೆಯವರೇ ಪುತ್ರನ ಸಾವಿಗೆ ಕಾರಣ ಎಂದು ಆರೋಪಿಸಿ ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದರು.
ವಿಡಿಯೋದಲ್ಲೇನಿದೆ: ‘ಇಷ್ಟು ದಿನ ನಿನ್ನ ಮನಸಾರೆ ಪ್ರೀತಿಸಿದ್ದೆ. ಆದರೀಗ ನಿನಗೆ ಬೇಡವಾಗಿದ್ದೇನೆ. ಯಾವುದೇ ಕಾರಣಕ್ಕೂ ಪ್ರೀತಿಸಿ ಈ ರೀತಿ ಕೈ ಕೊಡಬೇಡ. ನನ್ನ ಹುಡುಗಿ ನನ್ನಿಂದ ದೂರವಾಗಲು ಆಕೆಯ ಸಂಬಂಧಿ ರೇಣುಕೇಶ್ ಕಾರಣ. ನನಗೆ ಕಿರುಕುಳ ನೀಡಿದ ಆತ, ಹಲ್ಲೆಯನ್ನೂ ಮಾಡಿಸಿದ್ದ. ಇದರಿಂದ ಬೇಸತ್ತು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದೇನೆ. ರೇಣುಕೇಶ್ನನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ಆತನ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.