ಬೆಂಗಳೂರು: ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕೆ.ಬಿ.ಐ.ಟಿ.ಎಸ್ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಅನಿಮೇಷನ್, ವಿಷುವಲ್ ಎಫೆಕ್ಟ್ಸ್ ಮತ್ತು ಗೇಮಿಂಗ್ಗೆ ಸಂಬಂಧಿಸಿದ ಅಬಯ್ (ಎಬಿಎಐ) ಫೆಸ್ಟ್ ಮತ್ತು ಕರ್ನಾಟಕ ಅನಿಮೇಷನ್, ವಿಎಫ್ಎಕ್ಸ್ ಸಮ್ಮೇಳನ ಶನಿವಾರ ಆರಂಭವಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಬಯ್ ಅಧ್ಯಕ್ಷ ಬಿರೇನ್ ಘೋಷ್, ‘ಅಬಯ್ ಉತ್ಸವ ಭಾರತದ ಅನಿಮೇಷನ್, ವಿಎಫ್ಎಕ್ಸ್ ಮತ್ತು ಗೇಮ್ಗಳ ಉದ್ಯಮಕ್ಕೆ ದಾರಿದೀಪವಾಗಿದೆ. ಡಿಸ್ನೀ, ಡ್ರೀಮ್ವಕ್ರ್ಸ್, ಝಿಂಗಾ, ಟೆಕ್ನಿಕಲರ್, ಎಂಪಿಸಿ, ರಾಕ್ಸ್ಟಾರ್ ಗೇಮ್ಸ್, ಇಎ, ಯುಬಿಸಾಫ್ಟ್ ಮತ್ತಿತರ ಉದ್ಯಮದ ಪ್ರಮುಖರ ಆಲೋಚನೆಗಳು ಮತ್ತು ಅನುಭವಗಳನ್ನು ಆಲಿಸಲು ವೇದಿಕೆ ದೊರೆತಂತಾಗಿದೆ’ ಎಂದರು.
‘ಅನಿಮೇಷನ್, ವಿಎಫ್ಎಕ್ಸ್ ಮತ್ತು ಗೇಮಿಂಗ್ ಉದ್ಯಮದಲ್ಲಿ ಬೆಂಗಳೂರನ್ನು ಮುಂಚೂಣಿಗೆ ತರಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶ. ಎವಿಜಿಸಿ ಉದ್ಯಮದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೂ ಇದು ನೆರವಾಗಲಿದೆ’ ಎಂದು ಹೇಳಿದರು.
ಸಮ್ಮೇಳನ ಭಾನುವಾರವೂ (ಏಪ್ರಿಲ್17) ನಡೆಯಲಿದ್ದು, ಕಾರ್ಯಕ್ರಮವನ್ನು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಎಸ್.ಆರ್.ಪಾಟೀಲ್ ಉದ್ಘಾಟಿಸಲಿದ್ದಾರೆ. ಆಹಾರ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಹಾಲಿವುಡ್ ಚಿತ್ರ ಝೊಟೊಪಿಯ, ಬಾಹುಬಲಿ, ಬಾಜಿರಾವ್ ಮಸ್ತಾನಿ ಕುರಿತು ವಿಷಯ ಮಂಡನೆ ಇರುತ್ತದೆ. ಅಲ್ಲದೆ ವರ್ಚುವಲ್ ರಿಯಾಲಿಟಿ, 360 ಫಿಲ್ಮ್ ಮೇಕಿಂಗ್, ಕ್ಲೌಡ್ ರೆಂಡರಿಂಗ್, ಡಿಜಿಟಲ್ ಪ್ಲಾಟ್ಫಾರ್ಮ್ಗಳ ಕುರಿತು ವಿಷಯ ಮಂಡನೆ ಮಾಡಲಾಗುತ್ತದೆ.