ಶಿವಮೊಗ್ಗ: ಶಾಲಾ ಬಾಲಕನೊಬ್ಬ ತನ್ನ ಸಾವಿಗೆ ಶಿಕ್ಷಕರು ಹಾಗೂ ಪ್ರಾಂಶುಪಾಲರೇ ಕಾರಣ ಎಂದು ಮೊಬೈಲ್ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಾಗರದ ಶ್ರೀಧರ ನಗರದಲ್ಲಿ ನಡೆದಿದೆ.
ಸಾಗರದ ಸುಭಾಷ್ ನಗರದಲ್ಲಿರುವ ಶ್ರೀರಾಮಕೃಷ್ಣ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಸುಬ್ರಹ್ಮಣ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಬಾಲಕ. ತನ್ನ ಕೊನೆಯ ಮಾತಿನಲ್ಲಿ, ಶಾಲೆಯ ಮುಖ್ಯಸ್ಥ ದೇವರಾಜ್, ಪ್ರಾಂಶುಪಾಲ ಲೋಕೇಶ್, ಶಿಕ್ಷಕಿಯರಾದ ತಸ್ಲಿಮ್ ಭಾನು, ರಶ್ಮಿ ಅವರೇ ನನ್ನ ಸಾವಿಗೆ ಕಾರಣ. ಇವರನ್ನು ಯಾರು ಬಿಟ್ಟರು ನಾನು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾನೆ.
ಆತ್ಮಹತ್ಯೆಗೆ ಕಾರಣವೇನು?: ಮೃತ ಬಾಲಕ ಸುಬ್ರಹ್ಮಣ್ಯನಿಗೆ ಶಿಕ್ಷಕರು ಪದೇಪದೇ ಹೊಡೆಯತ್ತಿದ್ದರು, ಡುಮ್ಮ ಎಂದು ನಿಂದಿಸುತ್ತಿದ್ದರು. ಈ ಶಾಲೆಯಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಈತ ಆತ್ಮಮಾಡಿಕೊಂಡ ದಿನ ಶಾಲೆಯಿಂದ ಫೋನ್ ಮಾಡಿ, ನೀನು ಗಣಿತದಲ್ಲಿ ಫೇಲ್ ಆಗಿದ್ದೀಯ. ನಾಳೆ ನಿಮ್ಮ ಪೋಷಕರ ಕರೆದುಕೊಂಡು ಬಾ ಎಂದು ತಿಳಿಸಿದ್ದರಂತೆ. ಇದರಿಂದ ಬೇಸರಗೊಂಡ ಸುಬ್ರಹ್ಮಣ್ಯ ಮನೆಯಲ್ಲಿ ಯಾರೂ ಇಲ್ಲದ ನೇಣುಹಾಕಿಕೊಂಡು ಮೃತಪಟ್ಟಿದ್ದಾನೆ.
ಉತ್ತಮ ಶಿಕ್ಷಣ ಸಿಗಲಿ ಎಂದು ಖಾಸಗಿ ಶಾಲೆಗೆ ಹಾಕಿದ ತಂದೆ-ತಾಯಿ ಇದ್ದ ಏಕೈಕ ಮಗನನ್ನು ಕಳೆದು ಕೊಂಡಿದ್ದಾರೆ. ಸದ್ಯ ಬಾಲಕನ ತಂದೆ ಬಿ.ಶೇಖರ್ ಶಿಕ್ಷಕರ ವಿರುದ್ಧ ದೂರು ನೀಡಿದ್ದು, ದೂರನ್ನು ದಾಖಲಿಸಿಕೊಂಡಿರುವ ಸಾಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.